ದುಸ್ಥಿತಿಯಲ್ಲಿದ್ದ ಶಾಲೆ ದತ್ತು ಪಡೆದ ಶಿವರಾಜ್ ಕುಮಾರ್ ದಂಪತಿ

|

Updated on: May 12, 2023 | 6:17 PM

Shiva Rajkumar: ಮೂಲಭೂತ ಸೌಕರ್ಯಗಳಿಲ್ಲದೆ ದುಸ್ಥಿತಿಯಲ್ಲಿದ್ದ ಶಾಲೆಯೊಂದನ್ನು ಶಿವರಾಜ್ ಕುಮಾರ್ ದಂಪತಿ ದತ್ತು ಪಡೆದಿದ್ದಾರೆ.

ದುಸ್ಥಿತಿಯಲ್ಲಿದ್ದ ಶಾಲೆ ದತ್ತು ಪಡೆದ ಶಿವರಾಜ್ ಕುಮಾರ್ ದಂಪತಿ
ಶಿವರಾಜ್ ಕುಮಾರ್-ಗೀತಾ ಶಿವರಾಜ್​ ಕುಮಾರ್
Follow us on

ನಟ ಶಿವರಾಜ್ ಕುಮಾರ್ (Shiva Rajkumar) ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ತಮ್ಮನ್ನು ಕೆಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಶಕ್ತಿಧಾಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಶಿವರಾಜ್ ಕುಮಾರ್ ದಂಪತಿ ಇದೀಗ ಮತ್ತೊಂದು ಶಾಲೆಯನ್ನು ದತ್ತು ಪಡೆದಿದ್ದಾರೆ. ಮೂಲಸೌಕರ್ಯಗಳಿಲ್ಲದೆ ಬಸವಳಿದಿದ್ದ ಶಾಲೆಗೆ ಹೊಸ ಕಾಯಕಲ್ಪ ನೀಡಲು ದಂಪತಿ ಉತ್ಸುಕರಾಗಿದ್ದಾರೆ.

ಹೊಸಪೇಟೆಯ ಇಂಗಳಗಿ ಸಮೀಪದ ಅನ್ನಪೂರ್ಣೇಶ್ವರಿ ವಿದ್ಯಾಪೀಠ ವಸತಿಯುತ ಪ್ರೌಢಶಾಲೆಯನ್ನು ದತ್ತು ಪಡೆದಿದ್ದಾರೆ. ನಿನ್ನೆ ಶಾಲೆಗೆ ಭೇಟಿ ನೀಡಿದ್ದ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಅವರು, ಶಾಳೆಯ ಆಡಳಿತ ಮಂಡಳಿ, ಸಿಬ್ಬಂದಿಗಳೊಟ್ಟಿಗೆ ಮಾತುಕತೆ ನಡೆಸಿ ಶಾಲೆಯನ್ನು ದತ್ತು ಪಡೆಯುವ ನಿರ್ಣಯವನ್ನು ತಿಳಿಸಿದ್ದಾರೆ.

ಜೋಗದ ದಿಂಬರ ರಾಜಭಾರತಿ ಸ್ವಾಮೀಜಿಯವರು 2012 ರಲ್ಲಿ ಸ್ಥಳೀಯ ಬಡಮಕ್ಕಳ ಅನುಕೂಲಕ್ಕಾಗಿ ಈ ಉಚಿತ ಶಾಲೆಯನ್ನು ಸ್ಥಾಪಿಸಿದ್ದರು. ಆದರೆ ಅನುದಾನಗಳ ಕೊರತೆಗಳಿಂದಾಗಿ ಶಾಲೆಯು ಮೂಲಸೌಕರ್ಯಗಳಿಲ್ಲದೆ ಬಡವಾಗಿತ್ತು. ಕೆಲ ತಿಂಗಳ ಹಿಂದೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ವೇದ ಸಿನಿಮಾದ ಪ್ರಚಾರಕ್ಕೆ ಹೊಸಪೇಟೆಗೆ ತೆರಳಿದ್ದಾಗ ಈ ಶಾಲೆಯ ವಿಚಾರವನ್ನು ಅವರ ಗಮನಕ್ಕೆ ತರಲಾಗಿತ್ತು. ಶಾಲೆಯ ದುಸ್ಥಿತಿಯ ಬಗ್ಗೆ ಕೇಳಿ ಬೇಸರ ವ್ಯಕ್ತಪಡಿಸಿದ್ದ ಶಿವರಾಜ್ ಕುಮಾರ್ ದಂಪತಿ ಶಾಲೆಯನ್ನು ದತ್ತು ಪಡೆಯುವ ನಿರ್ಣಯ ತಳೆದಿದ್ದಾರೆ.

ಗುರುವಾರ ಶಾಲೆಗೆ ಭೇಟಿ ನೀಡಿದ್ದ ಗೀತಾ ಶಿವರಾಜ್ ಕುಮಾರ್ ಶಾಲೆಯ ಪರಿಸ್ಥಿತಿ ವೀಕ್ಷಿಸಿ, ಶಾಲೆಗೆ ಅಗತ್ಯವಾಗಿರುವ ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರವೇ ಟ್ರಸ್ಟ್ ಒಂದನ್ನು ರಚಿಸಿ ಪದಾಧಿಕಾರಿಗಳನ್ನು ನೇಮಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದಾಗಿ ಹೇಳಿದ್ದಾರೆ. ಶಾಲೆಗೆ ಪ್ರಯೋಗಶಾಲೆ, ಗ್ರಂಥಾಲಯ, ಆಟದ ಮೈದಾನಗಳ ಅಗತ್ಯ ತುರ್ತಾಗಿರುವುದನ್ನು ಗಮನಿಸಿ ಮೊದಲು ಅದಕ್ಕೆ ಆದ್ಯತೆ ನೀಡುವುದಾಗಿ ಪ್ರಕಟಿಸಿದ್ದಾರೆ. ಸಿಬ್ಬಂದಿ ನೇಮಕಾತಿ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಆ ಸಮಯದಲ್ಲಿ ಹಾಜರಿದ್ದವರು ತಿಳಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಸಹ ಶಾಲೆಗೆ ಭೇಟಿ ನೀಡುವ ಯೋಜನೆ ಇತ್ತು ಆದರೆ ಕೊನೆಯ ಕ್ಷಣದಲ್ಲಿ ಶಿವರಾಜ್ ಕುಮಾರ್ ಬರುವುದು ರದ್ದಾಯಿತು.

ಇದನ್ನೂ ಓದಿ:ರಾಜ್ಯಕ್ಕೆ ಶಿವರಾಜ್ ಕುಮಾರ್ ಕೊಡುಗೆ ಏನು ಎಂದ ಸಂಬರ್ಗಿ, ಸಮಾಧಾನದ ಉತ್ತರ ಕೊಟ್ಟ ಶಿವಣ್ಣ

ಮೈಸೂರಿನಲ್ಲಿ ಶಕ್ತಿಧಾಮ ಬಾಲಕಿಯರ ವಸತಿಶಾಲೆಯನ್ನು ಮಾದರಿ ರೀತಿಯಲ್ಲಿ ಶಿವರಾಜ್ ಕುಮಾರ್ ದಂಪತಿ ನಡೆಸಿಕೊಂಡು ಬರುತ್ತಿದ್ದಾರೆ. ಪಾರ್ವತಮ್ಮ ರಾಜ್​ಕುಮಾರ್ ಸ್ಥಾಪಿಸಿದ ವಸತಿ ಶಾಲೆ ಇದಾಗಿದ್ದು, ಪೋಷಕರಿಲ್ಲದ, ಕುಟುಂಬದಿಂದ ದೂರಾದ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ ಶಿಕ್ಷಣ ಒದಗಿಸುವ ಸಂಸ್ಥೆಯಾಗಿ ಇದು ಪ್ರಾರಂಭವಾಗಿತ್ತು. ಶಾಲೆಯಲ್ಲಿ ಈಗ ಹಲವು ಹೆಣ್ಣು ಮಕ್ಕಳು ಕಲಿಯುತ್ತಿದ್ದು, ಶಾಲೆಯ ಮಕ್ಕಳೊಟ್ಟಿಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರಿಗೆ ಅದ್ಭುತವಾದ ಬಾಂಧವ್ಯವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ