ರಮ್ಯಾ ವಿರುದ್ಧ ‘ಹಾಸ್ಟೆಲ್ ಹುಡುಗರು’ ಬೇಸರ: ಸಿನಿಮಾ ತಡೆಯಾಜ್ಞೆ ವಿಚಾರಣೆ ಮುಂದೂಡಿಕೆ

|

Updated on: Jul 19, 2023 | 10:10 PM

Hostel Hudugaru bekagiddare: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಿಡಗುಡೆಗೆ ತಡೆಯಾಜ್ಞೆ ನೀಡುವಂತೆ ರಮ್ಯಾ ದಾಖಲಿಸಿರುವ ದೂರಿನ ಕುರಿತು ನಿರ್ಮಾಪಕರು ಹೇಳಿದ್ದು ಹೀಗೆ...

ರಮ್ಯಾ ವಿರುದ್ಧ ಹಾಸ್ಟೆಲ್ ಹುಡುಗರು ಬೇಸರ: ಸಿನಿಮಾ ತಡೆಯಾಜ್ಞೆ ವಿಚಾರಣೆ ಮುಂದೂಡಿಕೆ
ಹಾಸ್ಟೆಲ್ ಹುಡುಗರು-ರಮ್ಯಾ
Follow us on

ಟೀಸರ್, ಟ್ರೈಲರ್, ಪ್ರೊಮೋಷನ್​, ಹಾಡುಗಳಿಂದ ನಿರೀಕ್ಷೆ ಹುಟ್ಟಿಸಿರುವ ಯುವಕರ ತಂಡದ ಹೊಸ ಪ್ರಯತ್ನ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ (Hostel Hudugaru bekagiddare) ಸಿನಿಮಾ ಸುಸೂತ್ರವಾಗಿ ಬಿಡುಗಡೆ ಆಗಲಿದೆ ಎಂದಿರುವಾಗಲೇ ಸಮಸ್ಯೆಗೆ ಸಿಲುಕಿಕೊಂಡಿದೆ. ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ನಟಿ ರಮ್ಯಾ (Ramya), ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಸಿನಿಮಾ ಬಿಡುಗಡೆ ತಡೆಯುವಂತೆ ಮನವಿ ಮಾಡಿದ್ದಾರೆ. ವಾದ ಆಲಿಸಿರುವ ನ್ಯಾಯಾಧೀಶರು ವಿಚಾರಣೆಯನ್ನು ನಾಳೆ (ಜುಲೈ 20)ಕ್ಕೆ ಮುಂದೂಡಿದ್ದಾರೆ.

ಚಿತ್ರರಂಗದಿಂದ ದೂರಾಗಿದ್ದ ನಟಿ ರಮ್ಯಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಮರಳಿದ್ದರು. ಏಳು ವರ್ಷಗಳ ಬಳಿಕ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಚಿತ್ರದ ಪ್ರೊಮೋಷನಲ್ ವಿಡಿಯೋನಲ್ಲಿಯೂ ರಮ್ಯಾ ನಟಿಸಿದ್ದರು. ಆದರೆ ಇತ್ತೀಚೆಗೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿತ್ತು, ಅದಾದ ಬಳಿಕ ಉಲ್ಟಾ ಹೊಡೆದಿರುವ ರಮ್ಯಾ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಮನವಿ ಮಾಡಿದ್ದಾರೆ.

ರಮ್ಯಾ, ತಮ್ಮ ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ನಿರ್ಮಾಪಕರಾದ ವರುಣ್ ಮತ್ತು ನಿತಿನ್” ರಮ್ಯಾ ಕೇಸ್ ದಾಖಲು ಮಾಡಿರೋದು ನಮಗೆ ಆಘಾತ ತಂದಿದೆ. ನಾಳೆ (ಜುಲೈ 20) ನಮಗೆ‌ ಇಲ್ಲಿ ಜಯ ಸಿಗುತ್ತ್ತದೆ ಎಂಬ ವಿಶ್ವಾಸವಿದೆ, ಟ್ರೈಲರ್ ನಲ್ಲಿ ಸಿನಿಮಾದಲ್ಲಿ ಇರ್ತೀರ ಅಂತ ಮುಂಚೇಯೆ ಮಾತು ಕತೆ ಆಗಿತ್ತು. ಈಗ ನೋಡಿದರೆ ನಿರ್ಬಂಧ ಹೇರಲು ಯತ್ನಿಸುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಹೀಗೆ ಮಾಡಿದರೆ ಮತ್ತೆ ಶೂಟ್ ಮಾಡೋದಕ್ಕೆ ಆಗುವುದಿಲ್ಲ, ಶೂಟ್ ಮಾಡೋವಾಗ ತುಂಬಾನೇ ಸ್ವೀಟ್ ಆಗಿದ್ದರು. ಈಗ ನೋಡಿದ್ರೆ ಈ ರೀತಿ ಮಾಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಹಾಲಿವುಡ್​ ರೇಂಜ್​ನಲ್ಲಿ ಶೂಟ್ ಮಾಡಲಾಗಿದೆ’; ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಬಗ್ಗೆ ರಕ್ಷಿತ್ ಮೆಚ್ಚುಗೆ

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಟ್ರೈಲರ್​ನ ಎರಡು ದೃಶ್ಯಗಳಲ್ಲಿ ರಮ್ಯಾ ಕಾಣಿಸಿಕೊಂಡಿದ್ದಾರೆ. ಒಂದು ದೃಶ್ಯದಲ್ಲಿ ರಮ್ಯಾ ಮಾದಕವಾಗಿ ಕಂಡುಬರುವ ದೃಶ್ಯವಿದೆ. ಈ ದೃಶ್ಯದ ಬಗ್ಗೆ ರಮ್ಯಾ ತಕರಾರು ತೆಗೆದಿದ್ದಾರೆ ಎನ್ನಲಾಗುತ್ತಿದೆ. ಚಿತ್ರೀಕರಣ ಮಾಡುವಾಗಲೇ ರಮ್ಯಾ ಈ ಬಗ್ಗೆ ಚರ್ಚಿಸದೆ ಈಗ ಏಕೆ ದೂರು ದಾಖಲಿಸಿದ್ದಾರೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ.

ರಮ್ಯಾ, ತಮ್ಮದೇ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ವಿಷಯದಲ್ಲಿಯೂ ಆ ಸಿನಿಮಾದ ನಾಯಕ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರೊಟ್ಟಿಗೆ ಮನಸ್ಥಾಪ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಸಿನಿಮಾವನ್ನು ರಾಜ್ ಬಿ ಶೆಟ್ಟಿಯ ಆಪ್ತ ರಕ್ಷಿತ್ ಶೆಟ್ಟಿ ಅವರೇ ಪ್ರೆಸೆಂಟ್ ಮಾಡುತ್ತಿರುವುದು ರಮ್ಯಾ ಅಸಮಾಧಾನಕ್ಕೆ ಕಾರಣ ಆಗಿರಬಹುದು ಎಂಬ ಮಾತುಗಳೂ ಇವೆ.

ಬಹುತೇಕ ಹೊಸಬರ ತಂಡವೇ ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಜುಲೈ 21ಕ್ಕೆ ತೆರೆ ಕಾಣಬೇಕಿತ್ತು. ಆದರೆ ರಮ್ಯಾ ಕೋರ್ಟ್ ಮೆಟ್ಟಿಲೇರಿರುವ ಕಾರಣ ಸಿನಿಮಾ ಬಿಡುಗಡೆ ತಡವಾದರೂ ಆಗಬಹುದು ಎನ್ನಲಾಗುತ್ತಿದೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಲೂಸಿಯಾ ಪವನ್ ಕುಮಾರ್, ದಿಗಂತ್ ಸಹ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ