ಮತ್ತೊಂದು ಕನ್ನಡ ಹಾಡಿನೊಂದಿಗೆ ಬಂದ ಜಸ್ ಕರಣ್ ಸಿಂಗ್

ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಜೇನ ದನಿಯೋಳೆ’ ಹಾಡು ಸೂಪರ್ ಹಿಟ್ ಆಗಿದೆ. ಈ ಹಾಡು ಹಾಡಿದ್ದ ಪಂಜಾಬ್​ನ ಗಾಯಕ ಜಸ್ ಕರಣ್ ಸಿಂಗ್, ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರಿಗೆ ಹತ್ತಿರವಾದವರು. ಇದೀಗ ಇವರೇ ಮತ್ತೊಂದು ಕನ್ನಡ ಸಿನಿಮಾಕ್ಕೆ ಹಾಡು ಹಾಡಿದ್ದಾರೆ.

ಮತ್ತೊಂದು ಕನ್ನಡ ಹಾಡಿನೊಂದಿಗೆ ಬಂದ ಜಸ್ ಕರಣ್ ಸಿಂಗ್

Updated on: Nov 12, 2024 | 5:24 PM

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಜೇನ ದನಿಯೋಳೆ’ ಹಾಡು ಹಾಡಿ ಹಿಟ್ ಎನಿಸಿಕೊಂಡಿರುವ ಜಸ್ ಕರಣ್ ಸಿಂಗ್, ಈಗ ಮತ್ತೊಂದು ಕನ್ನಡ ಸಿನಿಮಾದಲ್ಲಿ ಇಂಪಾದ ಹಾಡೊಂದನ್ನು ಹಾಡಿದ್ದು, ಇದೀಗ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ. ಮೂಲತಃ ಪಂಜಾಬ್​ನವರಾದರೂ ರಿಯಾಲಿಟಿ ಶೋಗಳ ಮೂಲಕ ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಮಧುರ ಕಂಠದಿಂದಾಗಿ ಕನ್ನಡದವರೇ ಆಗಿಬಿಟ್ಟಿರುವ ಜಸ್ ಕರಣ್ ಸಿಂಗ್ ಈಗ ಮತ್ತೊಂದು ಕನ್ನಡ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಸಿನಿಮಾದ ಹೆಸರು ‘ಅಂಶು’.

‘ಗಟ್ಟಿಮೇಳ’ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿರುವ ‘ಅಂಶು’ ಸಿನಿಮಾನಲ್ಲಿ ಜಸ್ ಕರಣ್ ಸಿಂಗ್ ಮಧುರವಾದ ಹಾಡೊಂದನ್ನು ಹಾಡಿದ್ದಾರೆ. ಹಾಡಿನ ವಿಡಿಯೋನಲ್ಲಿ ಜಸ್ ಕರಣ್ ಕಾಣಿಸಿಕೊಂಡಿದ್ದಾರೆ. ಮಹಿಳೆಯ ಆಂತರಿಕ ತುಮುಲಗಳನ್ನು, ಮಾಡುತ್ತಿರುವ ಹೋರಾಟವನ್ನು ಹೇಳುವ ಹಾಡುವ ಇದಾಗಿದ್ದು, ಜಸ್ ಕರಣ್ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಈಗ ಬಿಡುಗಡೆ ಆಗಿರುವ ಹಾಡಿನ ವಿಡಿಯೋನಲ್ಲಿ ಜಸ್ ಕರಣ್ ಜೊತೆಗೆ ಸಿನಿಮಾದ ಕೆಲವು ತುಣುಕುಗಳನ್ನು ಸೇರಿಸಲಾಗಿದೆ.

ಚಿತ್ರ ಸನ್ನಿವೇಶಗಳಿಗೆ ತಕ್ಕುದಾಗಿ ಹಾಡನ್ನು ಕಟ್ಟಿದ್ದು, ಸಿನಿಮಾದ ಕಥೆಯ ಆತ್ಮವನ್ನೇ ಈ ಹಾಡು ತನ್ನೊಳಗೆ ಇಟ್ಟುಕೊಂಡಂತೆ ತೋರುತ್ತಿದೆ. ಹಾಡಿಗೆ ನಾಯಕಿಯ ನಟನೆಯೂ ಗಮನಾರ್ಹವಾಗಿದೆ. ಇದೇ ನವೆಂಬರ್ 21ರಂದು ‘ಅಂಶು’ ಸಿನಿಮಾ ಹಾಡಿನ ಮೂಲಕ ಮುಂಚಿತವಾಗಿಯೇ ಪ್ರೇಕ್ಷಕರನ್ನು ತಲುಪುವ ಪ್ರಯತ್ನದಲ್ಲಿದೆ.

ಇದನ್ನೂ ಓದಿ:ಪ್ರತ್ಯೇಕ ಘಟನೆ: ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದ ಆಸಾಮಿ, ಕನ್ನಡ ಹಾಡುಗಾಗಿ ಪಬ್​ನಲ್ಲಿ ಫೈಟ್​

ಕನ್ನಡದಲ್ಲಿ ಬಹು ಬೇಡಿಕೆ ಹೊಂದಿರುವ ಜಸ್ ಕರಣ್ ಈ ಹಾಡು ಹಾಡಿದ್ದಾರೆ. ‘ನೀರ ಮೇಲೆ ಗುಳ್ಳೆ ಬಿಂಬ ಕಾಣೋ ವೇಳೆ, ನಿಜವು ಒಂದು ಸಳ್ಳೇ ಅಲೆಮಾರಿ…’ ಎಂಬ ಅರ್ಥಪೂರ್ಣ ಸಾಲುಗಳನ್ನು ಮಹೇಂದ್ರ ಗೌಡ ರಚನೆ ಮಾಡಿದ್ದಾರೆ. ಹಾಡಿಗೆ ಕೆ.ಸಿ ಬಾಲಸಾರಂಗನ್ ಸಂಗೀತ ನೀಡಿದ್ದಾರೆ. ಬಿಡುಗಡೆ ಆಗಿರುವ ಈ ಹೊಸ ಹಾಡು ಕೇಳುಗರಿಗೆ ಇಷ್ಟವಾಗುತ್ತಿದೆ. ಹಾಡಿನ ಜೊತೆಗೆ ನಿಶಾ ರವಿಕಶನ್ ಅವರ ನಟನೆಯ ಕೆಲವು ದೃಶ್ಯಗಳನ್ನು ಸಹ ಸೇರಿಸಲಾಗಿದೆ.

‘ಅಂಶ’ ಸಿನಿಮಾವನ್ನು ಎಂ.ಸಿ ಚನ್ನಕೇಶವ ನಿರ್ದೇಶನದ ಮೊದಲ ಸಿನಿಮಾ. ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಅವರುಗಳು ‘ಗ್ರಹಣ ಎಲ್ ಎಲ್ ಪಿ’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚೆಲುವರಾಜ್, ಜಯಚಂದ್ರ ಯಲ್ಲಪ್ಪ, ಪ್ರಮೋದ್ ಚಿನ್ನಸ್ವಾಮಿ, ಡಾ.ಮಧುರಾಜ್, ವೀರನ್ ಗೌಡ ಸಹ ನಿರ್ಮಾಪಕರಾಗಿ ಸಿನಿಮಾದ ಜೊತೆಗಿದ್ದಾರೆ. ಕ್ಯಾಮೆರಾ ಕೆಲಸವನ್ನು ಸುನೀಲ್ ನರಸಿಂಹಮೂರ್ತಿ ವಹಿಸಿಕೊಂಡಿದ್ದಾರೆ. ಪ್ರತಿಭೆ ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ನವೆಂಬರ್ 21 ರಂದು ‘ಅಂಶು’ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us