ಪ್ರತ್ಯೇಕ ಘಟನೆ: ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದ ಆಸಾಮಿ, ಕನ್ನಡ ಹಾಡುಗಾಗಿ ಪಬ್​ನಲ್ಲಿ ಫೈಟ್​

ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿ ಆನ್​ಲೈನ್ ಬೆಟ್ಟಿಂಗ್ ಹುಚ್ಚಾಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿಕೊಂಡಿಕೊಂಡಿದ್ದಾನೆ. ಈ ಸಾಲ ತೀರಿಸಲು ಆಟೋ ಚಾಲಕ ಅಡ್ಡ ದಾರಿ ಹಿಡಿದಿದ್ದಾನೆ. ಮತ್ತೊಂದು ಘಟನೆಯಲ್ಲಿ ಪಬ್​ನಲ್ಲಿ ಕನ್ನಡ ಹಾಡಿಗಾಗಿ ಗ್ರಾಹಕರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.

ಪ್ರತ್ಯೇಕ ಘಟನೆ: ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದ ಆಸಾಮಿ, ಕನ್ನಡ ಹಾಡುಗಾಗಿ ಪಬ್​ನಲ್ಲಿ ಫೈಟ್​
ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದ ಆರೋಪಿ ಸುರೇಶ್
Follow us
| Updated By: ವಿವೇಕ ಬಿರಾದಾರ

Updated on: Aug 25, 2024 | 11:16 AM

ಬೆಂಗಳೂರು, ಆಗಸ್ಟ್​ 25: ಆನ್​ಲೈನ್ ಬೆಟ್ಟಿಂಗ್ (Online Betting) ಹುಚ್ಚಾಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿಕೊಂಡು ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಬೆಂಗಳೂರಿನ (Bengaluru) ಕತ್ರಿಗುಪ್ಪೆ ನಿವಾಸಿ ಸುರೇಶ್ ಬಂಧಿತ ಆರೋಪಿ. ಸುರೇಶ್ ಆನ್​ಲೈನ್​ನಲ್ಲಿ ಬೆಟ್ಟಿಂಗ್ ಗೇಮ್ ಆಡುತಿದ್ದನು. ಈ ವೇಳೆ ಸುರೇಶ್​ ಸಾಕಷ್ಟು ಹಣ ಕಳೆದುಕೊಂಡಿದ್ದನು. ಅಲ್ಲದೇ, ಬೆಟ್ಟಿಂಗ್​ ಗೇಮ್​ಗಾಗಿ ಐದು ಲಕ್ಷ ಸಾಲ ಮಾಡಿಕೊಂಡಿದ್ದನು. ಆರೋಪಿ ಸುರೇಶ್​ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದನು. ಮಾಡಿದ ಸಾಲ ತೀರಿಸಲು ಆಟೋ ಸಹ ಅಡವಿಟ್ಟಿದ್ದನು. ಆದರೂ, ಸಾಲ ತೀರಿರಲಿಲ್ಲ.

ಹೀಗಾಗಿ, ಸಾಲ ತೀರಿಸಲು ದಾರಿ ಕಾಣದೆ ಸರಗಳ್ಳತನಕ್ಕಿಳಿದಿದ್ದನು. ಸುರೇಶ್ ಗಿರಿನಗರದ ಬೈರಪ್ಪ ಲೇಔಟ್​ನಲ್ಲಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಳ್ಳತನ ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಪೊಲೀಸರು ತನಿಖೆ ನಡೆಸಿ, ಆರೋಪಿ ಸುರೇಶ್​ನನ್ನು ಬಂಧಿಸಿದ್ದಾರೆ. ಗಿರಿನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.‌

ಪಬ್​​​ನಲ್ಲಿ ಕನ್ನಡ ಹಾಡುಗಳಿಗಾಗಿ ಫೈಟ್

ದಕ್ಷಿಣ ಭಾರತದ ಹಾಡುಗಳನ್ನು ಹಾಕಲು ಹಿಂದೇಟು ಹಾಕಿದ್ದಕ್ಕೆ ಪಬ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಕೋರಮಂಗಲದ ಪಬ್​ವೊಂದರಲ್ಲಿ ಬರೀ ಇಂಗ್ಲೀಷ್​ ಹಾಡುಗಳನ್ನು ಹಾಕಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ ಗ್ರಾಹಕರು, ದಕ್ಷಿಣ ಭಾರತದ ಹಾಡುಗಳನ್ನು ಹಾಕುವಂತೆ ಹೇಳಿದ್ದಾರೆ. ಇದಕ್ಕೆ ಪಬ್​ ಸಿಬ್ಬಂದಿ ನಾವು ಬರೀ ಇಂಗ್ಲೀಷ್ ಹಾಡುಗಳನ್ನ ಮಾತ್ರ ಹಾಕುತ್ತೇವೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ಹೆಣ್ಣುಮಕ್ಕಳನ್ನ ಕೊಚ್ಚಿ ಕೊಂದ ಮಲತಂದೆ

ಇದರಿಂದ ಪಬ್​ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಕೆಲ ಕಾಲ ವಾಗ್ವಾದ ನಡೆಯಿರತು. ಕೊನೆಗೆ ಪಬ್​ ಸಿಬಂದಿ ಕನ್ನಡ ಹಾಡು ಮಾತ್ರ ಹಾಕುತ್ತೇವೆ, ಆದರೆ ತೆಲುಗು,‌ ತಮಿಳು ಹಾಡುಗಳನ್ನು ಹಾಕುವುದಿಲ್ಲ ಎಂದಿದ್ದಾರೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಹರಿಬಿಡಲಾಗಿದೆ.

ಹಾಡಹಗಲೆ ಸರಗಳ್ಳತನಕ್ಕೆ ಯತ್ನಿಸಿದ ವ್ಯಕ್ತಿಗೆ ಬಿತ್ತು ಗೂಸಾ

ಮಂಡ್ಯ: ಮಹಿಳೆಯ ಸರಗಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಘಟನೆ ನಡೆದಿದೆ. ಕೃಷ್ಣಾಪುರದ ಶ್ರೀನಿವಾಸ್ ಸರಗಳ್ಳತನಕ್ಕೆ ಯತ್ನಿಸಿದ ಆರೋಪಿ.

ಕೆ.ಆರ್​.ಪೇಟೆ ಪಟ್ಟಣದ ಶ್ರೀನಿವಾಸ್ ಹೇಮಗಿರಿ ರಸ್ತೆಯ ಕಿರಾಣಿ ಅಂಗಡಿಯೊಂದಕ್ಕೆ ಬೈಕ್​ನಲ್ಲಿ ಬಂದಿದ್ದನು. ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಯಲ್ಲಿದ್ದ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ. ಚಿನ್ನದ ಸರ ಕೀಳಲು ಮುಂದಾದಾಗ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅಂಗಡಿಯಲ್ಲಿದ್ದ ಮಚ್ಚಿನಿಂದ ಸರಗಳ್ಳನ ಮೇಲೆ ಮಹಿಳೆ ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಶ್ರೀನಿವಾಸ್ ​ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಸರಗಳ್ಳನನ್ನು ಹಿಂಬಾಲಿಸಿ, ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ