Krishne Gowda: ಕನ್ನಡ ಚಿತ್ರರಂಗದ ಹಿರಿಯ ನಟ ಕೃಷ್ಣೇಗೌಡ ನಿಧನ

Krishne Gowda Death: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೃಷ್ಣೇಗೌಡ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಮಂಗಳವಾರ ಮುಂಜಾನೆ ಕೊಲೆಯುಸಿರೆಳೆದರು. ಕೃಷ್ಣೇಗೌಡ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

Krishne Gowda: ಕನ್ನಡ ಚಿತ್ರರಂಗದ ಹಿರಿಯ ನಟ ಕೃಷ್ಣೇಗೌಡ ನಿಧನ
ಕೃಷ್ಣೇ ಗೌಡ

Updated on: May 25, 2021 | 1:49 PM

ಚಿತ್ರರಂಗದ ಪಾಲಿಗೆ ಮೇಲಿಂದ ಮೇಲೆ ಕಹಿ ಸುದ್ದಿಗಳು ಕೇಳಿಬರುತ್ತಿವೆ. ಹಲವಾರು ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದ ನಟ ಕೃಷ್ಣೇಗೌಡ ಅವರು ಮಂಗಳವಾರ (ಮೇ 25) ನಿಧನರಾದರು. 80 ವರ್ಷ ವಯಸ್ಸಾಗಿದ್ದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕೃಷ್ಣೇಗೌಡ ಅವರು ತಮ್ಮ ಸಹಜ ಅಭಿನಯದಿಂದ ಗಮನ ಸೆಳೆದಿದ್ದರು. ಪೋಷಕ ಪಾತ್ರಗಳಿಗೆ ಅವರು ಬಹುಬೇಡಿಕೆಯ ಕಲಾವಿದನಾಗಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಕೃಷ್ಣೇಗೌಡ ಅವರು ಯಾವ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಿದ್ದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೃಷ್ಣೇಗೌಡ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಮಂಗಳವಾರ ಮುಂಜಾನೆ ಕೊಲೆಯುಸಿರೆಳೆದರು. ಕೃಷ್ಣೇಗೌಡ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಶಿವರಾಜ್​ಕುಮಾರ್​, ರಮೇಶ್​ ಅರವಿಂದ್​, ವಿಷ್ಣುವರ್ಧನ್​, ಅಂಬರೀಷ್ ಮುಂತಾದ ಅನೇಕ ಸ್ಟಾರ್​ ನಟರ ಜೊತೆಗೆ ಕೃಷ್ಣೇಗೌಡ ಅಭಿನಯಿಸಿದ್ದರು.

ಬೈರಸಂದ್ರದಲ್ಲಿ ಜನಿಸಿದ ಕೃಷ್ಣೇಗೌಡ ಅವರು ಒಳ್ಳೆಯ ವಾಲಿಬಾಲ್​ ಆಟಗಾರ ಕೂಡ ಆಗಿದ್ದರು. ಕೃಷ್ಣೇಗೌಡ ಅವರ ತಂದೆ ನಾಟಕಗಳಲ್ಲಿ ಅಭಿನಯಿಸುತ್ತ, ತರಬೇತಿಯನ್ನೂ ನೀಡುತ್ತಿದ್ದರು. ಹಾಗಾಗಿ ಅಂತಹ ವಾತಾವರಣದಲ್ಲಿ ಬೆಳೆದ ಕೃಷ್ಣೇಗೌಡರಿಗೆ ಸಹಜವಾಗಿ ಬಾಲ್ಯದಿಂದಲೇ ನಟನೆ ಬಗ್ಗೆ ಆಸಕ್ತಿ ಮೂಡಿತು. ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಅವರು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಹಲವಾರು ನಾಟಕಗಳಲ್ಲಿ ಅಭಿನಯಿಸಿ ಅಪಾರ ಅನುಭವ ಪಡೆದುಕೊಂಡಿದ್ದರು.

ಕೊರೊನಾ ವೈರಸ್​ ಎರಡನೇ ಅಲೆ ಆರಂಭ ಆದ ಬಳಿಕ ಚಿತ್ರರಂಗದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ನಿರ್ಮಾಪಕ ಕೋಟಿ ರಾಮು, ಯುವ ನಟ- ನಿರ್ಮಾಪಕ ಡಿ.ಎಸ್​. ಮಂಜುನಾಥ್​, ಪುಟ್ಟಣ್ಣ ಕಣಗಾಲ್​ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ರೇಣುಕಾ ಶರ್ಮಾ ಸೇರಿದಂತೆ ಅನೇಕರನ್ನು ಸ್ಯಾಂಡಲ್​ವುಡ್​ ಕಳೆದುಕೊಂಡಿದೆ. ಈಗ ಹಿರಿಯ ನಟ ಕೃಷ್ಣೇ ಗೌಡ ಅವರ ನಿಧನದ ಸುದ್ದಿ ಕೇಳಿ ಕನ್ನಡ ಚಿತ್ರರಂಗದನಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ.

ಇದನ್ನೂ ಓದಿ:

Ram Laxman Death: ಹೃದಯಾಘಾತದಿಂದ ರಾಮ್​ ಲಕ್ಷಣ್​ ನಿಧನ; ‘ಹಮ್​ ಆಪ್ಕೆ ಹೈ ಕೌನ್​’ ಚಿತ್ರದ ಸಂಗೀತ ನಿರ್ದೇಶಕ ಇನ್ನಿಲ್ಲ

BA Raju: ಹೃದಯಾಘಾತದಿಂದ ನಿರ್ಮಾಪಕ, ಪ್ರಚಾರಕ ಬಿಎ ರಾಜು ನಿಧನ; ಮಹೇಶ್​ ಬಾಬು ಸಂತಾಪ

Published On - 12:57 pm, Tue, 25 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us