ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್​ಕುಮಾರ್ ಜೀವನದ ಪಾಠ

ನಟನೆ, ನಿರ್ಮಾಣ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕವೂ ಪುನೀತ್ ರಾಜ್​​ಕುಮಾರ್ ಜನಮನ ಗೆದ್ದಿದ್ದರು. ಅಪ್ಪು ಬದುಕಿನ ವಿವರಗಳನ್ನು ಶಾಲೆಯ ಪಠ್ಯಪುಸ್ತಕದಲ್ಲಿ ಸೇರಿಸಲು ತಯಾರಿ ನಡೆಯುತ್ತಿದೆ ಎಂಬುದು ವಿಶೇಷ. ಇದು ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬದವರಿಗೆ ನಿಜಕ್ಕೂ ಹೆಮ್ಮೆಯ ಸಂಗತಿ.

ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್​ಕುಮಾರ್ ಜೀವನದ ಪಾಠ
Puneeth Rajkumar

Updated on: Jan 09, 2026 | 4:13 PM

ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರು ಮಾಡಿದ ಸಾಧನೆ ಎಲ್ಲರಿಗೂ ಸ್ಫೂರ್ತಿ ಆಗಿದೆ. ಬಾಲನಟನಾಗಿ ಚಿತ್ರರಂಗದಲ್ಲಿ ಮಿಂಚಿ, ಹೀರೋ ಆಗಿಯೂ ಜನಮನ ಗೆದ್ದ ಪುನೀತ್ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದರು. ಅವರ ಸಾಧನೆಯ ಕಥೆ ಅನೇಕರಿಗೆ ಸ್ಫೂರ್ತಿ ಆಗುತ್ತದೆ. ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ ಪುನೀತ್ ರಾಜ್​​ಕುಮಾರ್ ಅವರ ಜೀವನದ ಕಥೆ ಈಗ ಶಾಲಾ ಪಠ್ಯಪುಸ್ತಕದಲ್ಲಿ (Karnataka School Textbooks) ಸೇರ್ಪಡೆ ಆಗಲಿದೆ. ಆ ಬಗ್ಗೆ ತಯಾರಿ ನಡೆದಿದೆ. ಇದು ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿಗಳಿಗೆ ಸಖತ್ ಸಂತಸ ತಂದಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಈ ವಿಷಯವನ್ನು ಪರಿಗಣಿಸಲು ‘ಪಠ್ಯ ಪುಸ್ತಕ ಸಂಘ’ ತೀರ್ಮಾನಿಸಿದೆ. ಅಂದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಶಾಲೆಗಳ ಪಠ್ಯಪುಸ್ತಕದಲ್ಲಿ ಪುನೀತ್ ರಾಜ್​ಕುಮಾರ್ ಅವರ ಸಾಧನೆಗಳನ್ನು ಸೇರಿಸಲಾಗುವುದು. ಆ ಮೂಲಕ ಮುಂದಿನ ಪೀಳಿಗೆಗೆ ಪುನೀತ್ ರಾಜ್​ಕುಮಾರ್ ಬಗ್ಗೆ ತಿಳಿಸಿಕೊಡಲಾಗುವುದು.

ಪುನೀತ್ ರಾಜ್​ಕುಮಾರ್ ಅವರು ಜನಿಸಿದ್ದು 1975ರ ಮಾರ್ಚ್ 17ರಂದು. ಬಾಲನಟನಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಸಿನಿಮಾಗಳಿಗೆ ನಟಿಸಿ ಭೇಷ್ ಎನಿಸಿಕೊಂಡರು. ‘ಹೆಟ್ಟದ ಹೂವು’ ಸಿನಿಮಾಗಾಗಿ ‘ಅತ್ಯುತ್ತಮ ಬಾಲ ನಟ’ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು. ‘ಅಪ್ಪು’ ಸಿನಿಮಾದ ಮೂಲಕ 2002ರಲ್ಲಿ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು.

30ಕ್ಕೂ ಅಧಿಕ ಸಿನಿಮಾಗಳಲ್ಲಿ ಪುನೀತ್ ರಾಜ್​ಕುಮಾರ್ ಅವರು ಹೀರೋ ಆಗಿ ಅಭಿನಯಿಸಿದರು. ಹಲವು ಬಗೆಯ ಪಾತ್ರಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಮೂಲಕವೂ ಅವರು ಜನರಿಗೆ ಹತ್ತಿರ ಆಗಿದ್ದರು. ಈ ಎಲ್ಲ ಅಂಶಗಳನ್ನು ಪಠ್ಯಪುಸ್ತಕದ ಮೂಲಕ ಮುಂದಿನ ಪೀಳಿಗೆಗೆ ತಿಳಿಸಲಾಗುವುದು.

ಇದನ್ನೂ ಓದಿ: ಪುನೀತ್ ರಾಜ್​​ಕುಮಾರ್ ಸಮಾಧಿಗೆ ನಮಿಸಲು ಬಂದ ಜನಸಾಗರ; ಕಿಂಚಿತ್ತೂ ಕಡಿಮೆ ಆಗಿಲ್ಲ ಅಭಿಮಾನ

ಈ ಬಗ್ಗೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ‘ಟೈಮ್ಸ್ ಆಫ್ ಇಂಡಿಯಾ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಬಹಳ ಖುಷಿಯಾಗಿದೆ. ಈ ಗೌರವಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ತಂದೆಗೆ ಸಿಕ್ಕ ದೊಡ್ಡ ಗೌರವ ಇದು ಎಂದು ನಮ್ಮ ಮಕ್ಕಳಿಗೆ ತಿಳಿದಿದೆ. ಚಿತ್ರರಂಗದಲ್ಲಿ ಹಲವರು ಇದ್ದಾರೆ. ಆದರೆ ಈ ರೀತಿಯ ಗೌರವ ಎಲ್ಲರಿಗೂ ಸಿಗುವುದಿಲ್ಲ’ ಎಂದು ಅಶ್ವಿನಿ ಪುನೀತ್ ರಾಜ್​​ಕುಮಾರ್ ಹೇಳಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:13 pm, Fri, 9 January 26