KCN Chandrashekar: ‘ಹುಲಿಯ ಹಾಲಿನ ಮೇವು’ ಸಿನಿಮಾ ಖ್ಯಾತಿಯ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್​ ನಿಧನ

KCN Chandrashekar Death: ಎರಡು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹಾಗೂ ಒಮ್ಮೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಕೆಸಿಎನ್​ ಚಂದ್ರಶೇಖರ್ ಸೇವೆ ಸಲ್ಲಿಸಿದ್ದರು.

KCN Chandrashekar: ‘ಹುಲಿಯ ಹಾಲಿನ ಮೇವು’ ಸಿನಿಮಾ ಖ್ಯಾತಿಯ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್​ ನಿಧನ
ಕೆಸಿಎನ್​ ಚಂದ್ರಶೇಖರ್​

Updated on: Jun 14, 2021 | 8:33 AM

ಸ್ಯಾಂಡಲ್​ವುಡ್​ನಲ್ಲಿ ಮೇಲಿಂದ ಮೇಲೆ ಕಹಿ ಸುದ್ದಿಗಳು ಕೇಳಿಬರುತ್ತಿವೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್​ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ನಿಧನರಾದರು. ಇಂದು (ಜೂ.14) ಬೆಳಗ್ಗೆ 9 ಗಂಟೆಯಿಂದ ಬೆಂಗಳೂರಿನ ಶಿವಾನಂದ ಸರ್ಕಲ್​ ಬಳಿ ಇರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

ಹಲವು ವರ್ಷಗಳಿಂದ ಕೆಸಿಎನ್​ ಚಂದ್ರಶೇಖರ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಡಾ. ರಾಜ್​ಕುಮಾರ್​ ನಟನೆಯ ‘ಹುಲಿಯ ಹಾಲಿನ ಮೇವು’, ‘ಬಬ್ರುವಾಹನ’ ಮುಂತಾದ ಕ್ಲಾಸಿಕ್​ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ಕೆಸಿಎನ್​ ಚಂದ್ರಶೇಖರ್​ ಅವರು ಗುರುತಿಸಿಕೊಂಡಿದ್ದರು. ಇಂದು ಅವರ ನಿಧನಕ್ಕೆ ಚಂದನವನದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.

ನಿರ್ಮಾಪಕನಾಗಿ ಮಾತ್ರವಲ್ಲದೆ, ವಿತರಕರಾಗಿಯೂ ಕೆಸಿಎನ್​ ಚಂದ್ರಶೇಖರ್​ ಕೆಲಸ ಮಾಡಿದ್ದರು. ಎರಡು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹಾಗೂ ಒಮ್ಮೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಚಂದ್ರಶೇಖರ್​ ಅವರ ಇಡೀ ಕುಟುಂಬವೇ ಸಿನಿಮಾರಂಗದಲ್ಲಿ ತೊಡಗಿಕೊಂಡಿತ್ತು. ಅವರ ತಂದೆ ಕೆಸಿಎನ್​ ಗೌಡ ಅವರು ನಿರ್ಮಾಪಕರಾಗಿ, ಪ್ರದರ್ಶಕರಾಗಿ, ವಿತರಕರಾಗಿ ಗುರುತಿಸಿಕೊಂಡಿದ್ದರು. ಸಹೋದರ ಕೆಸಿಎನ್ ಮೋಹನ್​ ನಿರ್ಮಾಪಕರಾಗಿದ್ದಾರೆ.

ಕೆಸಿಎನ್​ ಚಂದ್ರಶೇಖರ್​ ನಿಧನಕ್ಕೆ ಗೀತರಚನಕಾರ, ನಿರ್ದೇಶಕ ನಾಗೇಂದ್ರ ಪ್ರಸಾದ್​ ಅವರು ಕಂಬನಿ ಮಿಡಿದಿದ್ದಾರೆ. ‘ನಲ್ಲ’ ಚಿತ್ರದ ನಿರ್ಮಾಪಕರು. ನನ್ನನ್ನು ನಿರ್ದೇಶಕನನ್ನಾಗಿ ಮಾಡಿದ ಅನ್ನದಾತರು ಕೆ.ಸಿ.ಎನ್. ಚಂದ್ರು ಸರ್ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ನಾಗೇಂದ್ರ ಪ್ರಸಾದ್​ ಪೋಸ್ಟ್​ ಮಾಡಿದ್ದಾರೆ.

ಈ ವರ್ಷ ಕೊವಿಡ್​ ಎರಡನೇ ಅಲೆ ಆರಂಭ ಆದ ನಂತರವಂತೂ ಅನೇಕರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ನಿರ್ಮಾಪಕ ಕೋಟಿ ರಾಮು, ಯುವ ನಿರ್ಮಾಪಕ, ನಟ ಡಿಎಸ್​ ಮಂಜುನಾಥ್​, ಪುಟ್ಟಣ್ಣ ಕಣಗಾಲ್​ ಪುತ್ರ ರಾಮು, ಹಿರಿಯ ನಟಿಯರಾದ ಸುರೇಖಾ, ಬಿ. ಜಯಾ, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ, ನಟ ಶಂಖನಾದ ಅರವಿಂದ್​, ನಟ-ಪತ್ರಕರ್ತ ಸುರೇಶ್​ ಚಂದ್ರ ಸೇರಿದಂತೆ ಅನೇಕರು ನಿಧನರಾಗಿರುವುದು ನೋವಿನ ಸಂಗತಿ.

ಇದನ್ನೂ ಓದಿ:

ಭೀಕರ ಅಪಘಾತದಲ್ಲಿ ಸುನೀಲ್​ ನಿಧನರಾದಾಗ ನಿಜವಾಗಿ ನಡೆದಿದ್ದು ಏನು? ಸಂಬಂಧಿ ಸಚಿನ್​ ತೆರೆದಿಟ್ಟ ಸತ್ಯ

Suresh Chandra Death: ಕೊರೊನಾದಿಂದ ಹಿರಿಯ ನಟ ಸುರೇಶ್​ ಚಂದ್ರ ನಿಧನ

Published On - 8:10 am, Mon, 14 June 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us