ತಂದೆಯ ಹೆಸರನ್ನು ಹೇಳಿ ಅವಕಾಶ ಗಿಟ್ಟಿಸಿಕೊಳ್ಳಲು ಸುದೀಪ್​ಗೆ ಇಷ್ಟವೇ ಇರಲಿಲ್ಲ; ಈ ಘಟನೆಯೇ ಸಾಕ್ಷಿ

|

Updated on: Sep 01, 2023 | 3:03 PM

Kichcha Sudeep Birthday: ಸುದೀಪ್ ತಂದೆ ಸಂಜೀವ್ ಅವರದ್ದು ಹೊಟೆಲ್ ಉದ್ಯಮ ಇತ್ತು. ಚಿತ್ರರಂಗದ ಜೊತೆ ಒಳ್ಳೆಯ ನಂಟು ಹೊಂದಿದ್ದರು. ಸುದೀಪ್ ಮನಸ್ಸು ಮಾಡಿದ್ದರೆ ತಂದೆ ಹೆಸರು ಹೇಳಿ ಅವಕಾಶ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ.

ತಂದೆಯ ಹೆಸರನ್ನು ಹೇಳಿ ಅವಕಾಶ ಗಿಟ್ಟಿಸಿಕೊಳ್ಳಲು ಸುದೀಪ್​ಗೆ ಇಷ್ಟವೇ ಇರಲಿಲ್ಲ; ಈ ಘಟನೆಯೇ ಸಾಕ್ಷಿ
ಸುದೀಪ್
Follow us on

ಕಿಚ್ಚ ಸುದೀಪ್ (Sudeep) ಅವರು ಇಂದು ಸ್ಟಾರ್ ಹೀರೋ ಆಗಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಇದೆ. ಎಸ್​ಎಸ್​ ರಾಜಮೌಳಿ ಸೇರಿ ಹಲವು ಸ್ಟಾರ್ ನಿರ್ದೇಶಕರ ಜೊತೆ ಅವರು ಕೆಲಸ ಮಾಡಿದ್ದಾರೆ. ಶನಿವಾರ (ನವೆಂಬರ್ 2) ಸುದೀಪ್ ಬರ್ತ್​ಡೇ. ಈ ಬಾರಿ ಅವರ ಹುಟ್ಟುಹಬ್ಬ ಅದ್ದೂರಿಯಾಗಿ ನೆರವೇರಲಿದೆ. ಸುದೀಪ್ ಅವರ ಆರಂಭದ ದಿನಗಳು ಈ ರೀತಿ ಇರಲಿಲ್ಲ. ಇದನ್ನು ಅವರು ಸಂದರ್ಶನ ಒಂದರಲ್ಲಿ ಈ ಮೊದಲು ಹೇಳಿಕೊಂಡಿದ್ದರು. ಎಷ್ಟು ಸೈಕಲ್ ಹೊಡೆದೆ ಎಂಬುದನ್ನು ಅವರು ವಿವರಿಸಿದ್ದರು.

ಸುದೀಪ್ ತಂದೆ ಸಂಜೀವ್ ಅವರದ್ದು ಹೊಟೆಲ್ ಉದ್ಯಮ ಇತ್ತು. ಚಿತ್ರರಂಗದ ಜೊತೆ ಒಳ್ಳೆಯ ನಂಟು ಹೊಂದಿದ್ದರು. ಸುದೀಪ್ ಮನಸ್ಸು ಮಾಡಿದ್ದರೆ ತಂದೆ ಹೆಸರು ಹೇಳಿ ಅವಕಾಶ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ‘ಪ್ರತ್ಯರ್ಥ ಸಿನಿಮಾಗೆ ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಫೋಟೋ ಕೋಡೋಕೆ ಅವರ ಮನೆಯ ಮುಂದೆ ನಾಲ್ಕು ದಿನ ಕಾದಿದ್ದೆ. ಮನೆಯ ಒಳಗೆ ಹೋಗೋಕೆ ಮತ್ತೂ ಎರಡು ದಿನ ಬೇಕಾಯ್ತು’ ಎಂದಿದ್ದರು ಸುದೀಪ್.

‘ಕೊನೆಗೂ ಒಂದು ದಿನ ಕರೆದು ಮಾತನಾಡಿದರು. ಎತ್ತರ ಇದ್ದ ತಕ್ಷಣ ಕಲಾವಿದರಾಗಿಬಿಡ್ತೀರಾ ಎಂದು ಕೇಳಿದರು. ಹಾಗೇನು ಇಲ್ಲ ಸರ್ ಎಂದೆ. ಏನೇ ಕೊಟ್ರೂ ಮಾಡ್ತೀರಾ ಎಂದು ಕೇಳಿದ್ರು. ಹೌದು ಎಂದೆ. ಮರುದಿನವೇ ಕರೆ ಬಂತು. ಖುಷಿ ಆಯ್ತು. ದೇಸಾಯಿ ಅವರು ನನ್ನ ನೋಡಿ ಇಂಪ್ರೆಸ್ ಆಗಿದ್ದಾರೆ ಎಂದುಕೊಂಡೆ. ಆದರೆ ಅಲ್ಲಿ ಹೋದಾಗ ಆಗಿದ್ದೇ ಬೇರೆ’ ಎಂದಿದ್ದಾರೆ ಸುದೀಪ್.

‘ನೀವು ಸಂಜೀವ್ ಅವರ ಮಗನಾ ಎಂದರು. ಹೌದು ಎಂದೆ. ಮೊದಲೇ ಹೇಳಲಿಲ್ಲ ಏಕೇ ಎಂದು ಕೇಳಿದ್ರು. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ನನ್ನ ತಂದೆ ನಟನೆ ಮಾಡೋಕೆ ಬರ್ತಿಲ್ವಲ್ಲ. ಹೀಗಾಗಿ ಹೇಳಿಲ್ಲ. ಅವಕಾಶ ಕೊಟ್ರೆ ನಟಿಸ್ತೀನಿ. ನಮ್ಮ ತಂದೆ ಇದಕ್ಕೆಲ್ಲ ಬರಲ್ಲ ಎಂದೆ’ ಎಂದು ಸುದೀಪ್ ಹೇಳಿದ್ದರು. ಆ ಬಳಿಕ ‘ಪ್ರತ್ಯರ್ಥ’ ಚಿತ್ರದಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು.

ಇದನ್ನೂ ಓದಿ: ಆಕಾಶದಲ್ಲಿನ ನಕ್ಷತ್ರಕ್ಕೆ ಕಿಚ್ಚ ಸುದೀಪ್​ ಹೆಸರು; ಹುಟ್ಟುಹಬ್ಬದ ಹೊಸ್ತಿಲಲ್ಲಿ ಹೀಗೊಂದು ಗೌರವ

ಆ ಬಳಿಕ ಸುದೀಪ್ ‘ಸ್ಪರ್ಶ’ ಚಿತ್ರದಲ್ಲಿ ಹೀರೋ ಆಗಿ ನಟಿಸಿದರು. ಈ ಚಿತ್ರಕ್ಕೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಇತ್ತು. ಈ ಚಿತ್ರ ವಿಮರ್ಶೆಯಲ್ಲಿ ಗೆದ್ದಿತ್ತು. ಆ ಸಂದರ್ಭದಲ್ಲಿ ರಾಜ್​ಕುಮಾರ್ ಅವರು ಅಪಹರಣ ಆಯಿತು. ಆಗ ಥಿಯೇಟರ್​ಗಳು ಮುಚ್ಚಲ್ಪಟ್ಟವು. ಹೀಗಾಗಿ ಈ ಚಿತ್ರದಿಂದ ಸುದೀಪ್​ಗೆ ದೊಡ್ಡ ಗೆಲುವು ಅನ್ನೋದು ಸಿಗಲಿಲ್ಲ. ‘ಹುಚ್ಚ’ ಚಿತ್ರದಿಂದ ಅವರು ಕಿಚ್ಚ ಎಂದೇ ಫೇಮಸ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:25 pm, Fri, 1 September 23