ಮೈಸೂರಿನಲ್ಲೇ ಎಸ್. ಜಾನಕಿ ಸ್ಮಾರಕ ಆಗಲಿ: ಕಣ್ಣೀರು ಹಾಕುತ್ತಾ ಹಂಸಲೇಖ ವಿನಂತಿ

ಲೆಜೆಂಡರಿ ಗಾಯಕಿ ಎಸ್. ಜಾನಕಿ ಅವರು ವಿಧಿವಶರಾಗಿದ್ದು, ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಹಂಸಲೇಖ ಅವರು ಎಸ್. ಜಾನಕಿ ಸ್ಮಾರಕದ ಬಗ್ಗೆ ಮಾತನಾಡಿದ್ದಾರೆ. ಸ್ಮಾರಕ ನಿರ್ಮಾಣದ ಕುರಿತಂತೆ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯಮಾಲಾ ಬಳಿ ಮನವಿ ಮಾಡಿಕೊಂಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ..

ಮೈಸೂರಿನಲ್ಲೇ ಎಸ್. ಜಾನಕಿ ಸ್ಮಾರಕ ಆಗಲಿ: ಕಣ್ಣೀರು ಹಾಕುತ್ತಾ ಹಂಸಲೇಖ ವಿನಂತಿ
Hamsalekha, S Janaki

Updated on: Jul 12, 2026 | 11:27 AM

ಮುಖ್ಯಾಂಶಗಳು

  • ಎಸ್. ಜಾನಕಿ ಸ್ಮಾರಕಕ್ಕೆ ಸಂಬಂಧಿಸಿದಂತೆ ಭಾವುಕ ವಿಡಿಯೋ ಹಂಚಿಕೊಂಡ ಹಂಸಲೇಖ.
  • ಮೈಸೂರಿನಲ್ಲಿಯೇ ಜಾನಕಿ ಅವರ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನಿಗದಿ ಆಗಲಿ ಎಂದು ಮನವಿ.
  • ಹಂಸಲೇಖ ಅವರ ಮಾತಿಗೆ ಕಮೆಂಟ್ ಮೂಲಕ ಸಹಮತ ಸೂಚಿಸಿರುವ ಅಭಿಮಾನಿಗಳು.

ಹಿರಿಯ ಗಾಯಕಿ ಎಸ್. ಜಾನಕಿ (S Janaki) ಅವರು ನಿಧನರಾಗಿದ್ದಾರೆ. ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಮತ್ತು ಜಾನಕಿ ಅವರ ಕಾಂಬಿನೇಷನ್​ನಲ್ಲಿ ಅನೇಕ ಸೂಪರ್ ಹಿಟ್ ಹಾಡುಗಳು ಬಂದಿವೆ. ಜಾನಕಿ ಅವರ ನಿಧನದಿಂದ ಹಂಸಲೇಖ ಅವರಿಗೆ ತೀವ್ರ ನೋವುಂಟಾಗಿದೆ. ಈ ಸಂದರ್ಭದಲ್ಲಿ ಅವರು ವಿಡಿಯೋ ಮೂಲಕ ಒಂದು ಮುಖ್ಯವಾದ ವಿಷಯವನ್ನು ಹಂಚಿಕೊಂಡಿದ್ದಾರೆ. ಮೈಸೂರಿನಲ್ಲಿ ಜಾನಕಿ ಅವರ ಸ್ಮಾರಕ (S Janaki Memorial) ನಿರ್ಮಾಣ ಆಗಬೇಕು ಎಂದು ಹಂಸಲೇಖ ಅವರು ಕಣ್ಣೀರಿಡುತ್ತಾ ಹೇಳಿದ್ದಾರೆ.

ಎಸ್. ಜಾನಕಿ ಸ್ಮಾರಕ ಮಾಡುವ ಯೋಜನೆ:

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯಮಾಲಮ್ಮ ಅವರಿಗೆ ನಮಸ್ಕಾರಗಳು. ಗಾನ ಕೋಗಿಲೆ ಜಾನಕಿ ಅಮ್ಮ, ಕರುನಾಡಿನ ಮೈಸೂರಿನ ಮಣ್ಣಿನಲ್ಲಿ ತಮ್ಮ ಅಂತ್ಯವನ್ನು ಕಂಡಿದ್ದಾರೆ. ಅವರು ಮಣ್ಣಿಗೆ ಹೋಗುವುದಕ್ಕೂ ಮುಂಚೆ ಕರುನಾಡಿನ ಜನರು ಕಣ್ಣು ತೆರೆಯಬೇಕು. ಅವರಿಗಾಗಿ ಇಲ್ಲೊಂದು ಸ್ಮಾರಕ ಮಾಡುವ ಯೋಜನೆಯನ್ನು ಅವರ ಕುಟುಂಬಕ್ಕೆ ನಾವು ವಿನಂತಿಸಬೇಕು’ ಎಂದಿದ್ದಾರೆ ಹಂಸಲೇಖ.

ಸೂಕ್ತವಾದ ಜಾಗ ನಿಗದಿಪಡಿಸಿ:

‘ಕುಟುಂಬದವರು ಒಪ್ಪಿದರೆ ಅದಕ್ಕೆ ಈಗಲೂ ಒಂದು ಸಿದ್ಧತೆ ಆಗುವ ಹಾಗೆ ಒಂದು ಸೂಕ್ತವಾದ ಜಾಗವನ್ನು ನಿಗದಿಪಡಿಸಲು ತಾವು ಸರ್ಕಾರಕ್ಕೆ ಮತ್ತು ಬಲ್ಲವರಿಗೆ ತಿಳಿಸುವ ದೊಡ್ಡ ಮನಸ್ಸು ಮಾಡಬೇಕು ಅಂತ ನಾನು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ’ ಎಂದು ಹಂಸಲೇಖ ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡ ಈ ವಿಡಿಯೋ ನೋಡಿ ಜನರು ಕೂಡ ಸಹಮತ ಸೂಚಿಸಿದ್ದಾರೆ.

ಸರ್ಕಾರಕ್ಕೆ ಹಂಸಲೇಖ ವಿನಂತಿ:

‘ಜಾನಕಿ ಅಂದರೆ ಸೀತೆ. ಸೀತೆ ಎಂದರೆ ನಮಗೆ ಗೀತೆ. ಆಕೆಯ ಆಸೆ ಕರುನಾಡಿನಲ್ಲಿ ಇರೋದು. ನಾವು ಅದಕ್ಕೆ ಇಂಬು ಕೊಡುವುದು ಬೇಡವೇ? ದಯಮಾಡಿ ನೀವು ಈ ಸುದ್ದಿಯನ್ನು ಸರ್ಕಾರಕ್ಕೆ ತಿಳಿಸಬೇಕು ಅಂತ ವಿನಂತಿಸಿಕೊಳ್ಳುತ್ತೇನೆ’ ಎಂದು ಹಂಸಲೇಖ ಅವರು ಹೇಳಿದ್ದಾರೆ. ಇದಕ್ಕೆ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ಪ್ಯಾಲೇಸ್​​ನಂತಹ ಮನೆಯಿದ್ದರೂ ಮೈಸೂರಲ್ಲಿಯೇ ವಾಸ: ಹೇಗಿತ್ತು ಗೊತ್ತಾ ಗಾನಕೋಗಿಲೆ ಎಸ್​. ಜಾನಕಿ ಅಂತಿಮ ದಿನಗಳು?

ತಮ್ಮ ಇಷ್ಟದ ಊರಾದ ಮೈಸೂರಿನಲ್ಲೇ ಎಸ್. ಜಾನಕಿ ಅವರು ಕೊನೆಯ ದಿನಗಳನ್ನು ಕಳೆದರು. ಅಲ್ಲಿಯೇ ಕೊನೆಯುಸಿರು ಎಳೆದರು. ಇಂದು (ಜುಲೈ 12) ಮೈಸೂರಿನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಮಹಾರಾಜ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಗಣ್ಯರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us