ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ನೆನಪಿರಲಿ ಪ್ರೇಮ್; ‘ಕೆಂಪಾಂಬುಧಿ’ ಟೀಸರ್ ರಿಲೀಸ್

‘ನೆನಪಿರಲಿ’ ಪ್ರೇಮ್, ಮೇಘನಾ ಗಾಂವ್ಕರ್, ರಾಜೇಶ್ ನಟರಂಗ ಮುಂತಾದವರು ‘ಕೆಂಪಾಂಬುಧಿ’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ರಮೇಶ್ ಬೇಗಾರ್ ಅವರು ನಿರ್ದೇಶನ ಮಾಡಿದ್ದಾರೆ. ವೀರ್ ಸಮರ್ಥ್ ಅವರು ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಶೀರ್ ಶೃಂಗೇರಿ ಅವರ ಛಾಯಾಗ್ರಹಣ, ಅವಿನಾಶ್ ಶೃಂಗೇರಿ ಅವರ ಸಂಕಲನ, ಅಭಿಷೇಕ್ ಹೆಬ್ಬಾರ್ ಅವರ ಕಲಾ ನಿರ್ದೇಶನ ಈ ಸಿನಿಮಾದಲ್ಲಿ ಇರಲಿದೆ.

ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ನೆನಪಿರಲಿ ಪ್ರೇಮ್; ‘ಕೆಂಪಾಂಬುಧಿ’ ಟೀಸರ್ ರಿಲೀಸ್
Nenapirali Prem

Updated on: Jun 28, 2026 | 8:18 AM

ಮುಖ್ಯಾಂಶಗಳು

  • ನಾಡಪ್ರಭು ಕೆಂಪೇಗೌಡರ ಜೀವನ ಆಧಾರಿತ ಸಿನಿಮಾ ‘ಕೆಂಪಾಂಬುಧಿ’.
  • ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ನಟ ‘ನೆನಪಿರಲಿ’ ಪ್ರೇಮ್.
  • ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಕೌತುಕ ಮೂಡಿಸಿದೆ ‘ಕೆಂಪಾಂಬುಧಿ’ ತಂಡ.

ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ (Nadaprabhu Kempegowda) ಕುರಿತು ಸಿನಿಮಾ ಸಿದ್ಧವಾಗುತ್ತಿದೆ. ಅವರ ಆದರ್ಶಮಯ ಬದುಕು, ದೂರದೃಷ್ಟಿ ಮತ್ತು ಪರಂಪರೆಯನ್ನು ತೆರೆ ಮೇಲೆ ಅನಾವರಣಗೊಳಿಸುವ ಈ ಸಿನಿಮಾಗೆ ‘ಕೆಂಪಾಂಬುಧಿ’ (Kempambudhi) ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ. ‘ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್’ ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದೆ. ‘ಹೊಂಬಾಳೆ ಮ್ಯೂಸಿಕ್’ ಕೂಡ ಸಾಥ್ ನೀಡಿದೆ. ‘ನೆನಪಿರಲಿ’ ಪ್ರೇಮ್ (Nenapirali Prem) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ.

ಬಿಡುಗಡೆ ಆಗಿರುವ ‘ಕೆಂಪಾಂಬುಧಿ’ ಟೀಸರ್ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್ ಜೊತೆ ಮೇಘನಾ ಗಾಂವ್ಕರ್, ರಾಜೇಶ್ ನಟರಂಗ, ಸುಧಾ ಬೆಳವಾಡಿ, ನಾಗಶ್ರೀ ಬೇಗಾರ್, ಸಂಯುಕ್ತಾ ಹೊರನಾಡು, ರಾಜೇಂದ್ರ ಕಾರಂತ್, ರಮೇಶ್ ಪಂಡಿತ್, ನಟರಾಜ್ ರಾವ್, ಬಿ.ಎಲ್. ರವಿಕುಮಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ರಮೇಶ್ ಬೇಗಾರ್ ಅವರು ನಿರ್ದೇಶನ ಮಾಡಿದ್ದಾರೆ.

ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ‘ಕೆಂಪಾಂಬುಧಿ’ ಸಿನಿಮಾ ಮೂಡಿಬರುತ್ತಿದೆ. ಇತಿಹಾಸ, ಜನಪದ, ದಂತಕಥೆಗಳು ಮತ್ತು ಸಾಂಸ್ಕೃತಿಕ ನೆನಪುಗಳನ್ನು ಒಗ್ಗೂಡಿಸಿ ರೂಪುಗೊಂಡ ವಿಶಿಷ್ಟ ಸಿನಿಮಾ ಇದು ಎಂದು ಚಿತ್ರತಂಡ ಹೇಳಿದೆ. ದೂರದೃಷ್ಟಿಯ ಆಡಳಿತಗಾರ, ಜನಪರ ನಾಯಕ ಮತ್ತು ಪರಿಸರದ ಮಹತ್ವವನ್ನು ಬಹಳ ಹಿಂದೆಯೇ ಅರಿತು ಅನುಷ್ಠಾನಗೊಳಿಸಿದ್ದ ಕೆಂಪೇಗೌಡರ ಚಿಂತನೆಗಳು ಈ ಸಿನಿಮಾದಲ್ಲಿ ಕಾಣಿಸಲಿವೆ.

‘ಕೆಂಪಾಂಬುಧಿ’ ಸಿನಿಮಾದ ಟೀಸರ್:

Kempaambudhi Official Teaser | Nenapirali Prem, Meghana Gaonkar | Ramesh Begar | Divo Music

‘ಕೆಂಪಾಂಬುಧಿ ರೀತಿಯ ಕಥೆಗಳು ನಿಜಕ್ಕೂ ಮೌಲ್ಯಯುತವಾದವು. ಕೆಂಪೇಗೌಡರ ಅಪ್ರತಿಮ ಕೊಡುಗೆ ಮತ್ತು ಬೆಂಗಳೂರಿನ ಭವ್ಯ ಇತಿಹಾಸವನ್ನು ಗೌರವಿಸುವ ಇಂತಹದೊಂದು ಸಿನಿಮಾಗೆ ಕೈಜೋಡಿಸಿದ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್‌ನ ಕಾಳಜಿ ಶ್ಲಾಘನೀಯ. ನಮ್ಮ ಹೆಮ್ಮೆಯ ನಗರದ ಇತಿಹಾಸವನ್ನು ಇಂದಿನ ತಲೆಮಾರಿಗೆ ಪರಿಚಯಿಸುತ್ತಾ, ಅದರ ಹಸಿರು ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಮುಂದಿನ ಪೀಳಿಗೆಯಲ್ಲಿ ಮೂಡಿಸುತ್ತಿರುವ ಈ ಪ್ರಯತ್ನ ಇದಾಗಿದೆ’ ಎಂದು ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಹೀರೋಗಳ ರೀತಿ ದೇಹ ಹುರಿಗೊಳಿಸಿದ ನೆನಪಿರಲಿ ಪ್ರೇಮ್

‘ಈ ಸಿನಿಮಾ ಕೇವಲ ಒಂದು ಐತಿಹಾಸಿಕ ಕಥನವಾಗಿಯೇ ಉಳಿಯದೆ, ಅಂದಿನ ಮತ್ತು ಇಂದಿನ ಬೆಂಗಳೂರನ್ನು ಜೋಡಿಸುವ ಪ್ರಯತ್ನವಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ‘ಗಾರ್ಡನ್ ಸಿಟಿ’ಯ ಹಸಿರು ವೈಭವವನ್ನು ಮತ್ತೆ ನೆನಪಿಸುವುದರ ಜೊತೆಗೆ, ಪರಿಸರ ಸಂರಕ್ಷಣೆ ಮತ್ತು ನಗರವನ್ನು ಕಟ್ಟಿದ ಮೂಲ ಮೌಲ್ಯಗಳ ಕಡೆಗೆ ಸಮಾಜದ ಗಮನ ಸೆಳೆಯುವ ಕೆಲಸವನ್ನು ಈ ಸಿನಿಮಾ ಮಾಡುತ್ತದೆ’ ಎಂದು ‘ಕೆಂಪಾಂಬುಧಿ’ ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us