ದರ್ಶನ್​ಗೆ ಮತ್ತೊಂದು ಸಂಕಷ್ಟ, ಹಳೆ ಪ್ರಕರಣಕ್ಕೆ ಮರು ಜೀವ

Darshan Thoogudeepa: ಈಗಾಗಲೇ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್ ತೂಗುದೀಪಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯುವ ನಿರ್ಮಾಪಕನೊಬ್ಬನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಹಳೆ ಪ್ರಕರಣಕ್ಕೆ ಮರು ಜೀವ ನೀಡಲಾಗಿದೆ.

ದರ್ಶನ್​ಗೆ ಮತ್ತೊಂದು ಸಂಕಷ್ಟ, ಹಳೆ ಪ್ರಕರಣಕ್ಕೆ ಮರು ಜೀವ

Updated on: Oct 18, 2024 | 10:26 AM

ಈಗಾಗಲೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದರ್ಶನ್ ವಿರುದ್ಧ ಹಳೆಯ ಪ್ರಕರಣವೊಂದಕ್ಕೆ ಮರು ಜೀವ ದೊರಕಿದೆ. ಕೆಲ ವರ್ಷಗಳ ಹಿಂದೆ ದರ್ಶನ್, ಯುವ ನಿರ್ಮಾಪಕರೊಬ್ಬರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ದೂರು ದಾಖಲಾಗಿತ್ತು. ಆ ಪ್ರಕರಣಕ್ಕೆ ಮತ್ತೆ ಮರು ಜೀವ ಸಿಕ್ಕಂತಿದೆ. 2022 ರಲ್ಲಿ ಪ್ರಕರಣ ದಾಖಲಾಗಿತ್ತು, ಈಗ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತಾಗಿ ಹೊಸದಾಗಿ ಎನ್​ಸಿಆರ್ ದಾಖಲಾಗಿದೆ.

ಯುವ ನಿರ್ಮಾಪಕ ಭರತ್ ಎಂಬುವರು ತಮಗೆ ಕರೆ ಮಾಡಿದ್ದ ದರ್ಶನ್ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಕರೆ ಮಾಹಿತಿ, ಕಾಲ್ ರೆಕಾರ್ಡ್​ಗಳನ್ನು ಸಹ ಆಗ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದರು. 2022 ರಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್​ಸಿಆರ್ ದಾಖಲಾಗಿತ್ತು. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಎನ್​ಸಿಆರ್​ ದಾಖಲಾಗಿದ್ದು, ತನಿಖೆ ನಡೆಯುವ ಸಾಧ್ಯತೆ ಇದೆ.

ಯುವ ನಿರ್ಮಾಪಕ ಭರತ್, ‘ಭಗವಾನ್ ಶ್ರೀಕೃಷ್ಣಾ’ ಹೆಸರಿನ ಸಿನಿಮಾ ಪ್ರಾರಂಭ ಮಾಡಿದ್ದರು. ಸಿನಿಮಾಕ್ಕೆ ಧ್ರುವನ್ ನಾಯಕ ನಟನಾಗಿದ್ದರು. ಆದರೆ ಕೋವಿಡ್ ಬಂದ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ನಿಂತು ಹೋಯ್ತು. ಬಳಿಕ ಧ್ರುವನ್, ದರ್ಶನ್ ಬಳಿ ಹೋಗಿ ಅವರ ಕೈಯಿಂದ ಭರತ್​ಗೆ ಕರೆ ಮಾಡಿಸಿದ್ದರು. ಆಗ ಭರತ್ ಬಿಡುಗಡೆ ಮಾಡಿದ್ದ ಆಡಿಯೋ ರೆಕಾರ್ಡ್​ನಲ್ಲಿದ್ದಂತೆ, ಆರಂಭದಲ್ಲಿ ಕೂಲ್ ಆಗಿಯೇ ಮಾತನಾಡಿದ್ದ ದರ್ಶನ್, ‘ಧ್ರುವನ್ ನಿಮ್ಮನ್ನೆ ನಂಬಿದ್ದಾನೆ, ಸಿನಿಮಾ ನಿಲ್ಲಿಸಬೇಡಿ’ ಎಂದು ಮನವಿ ಮಾಡಿದ್ದರು. ಆದರೆ ಮಾತು ಮುಂದುವರೆದಂತೆ, ‘ಸಿನಿಮಾ ಮುಗಿಸದೇ ಇದ್ದರೆ, ಭೂಮಿ ಮೇಲೆ ಇಲ್ಲದಂತೆ ಮಾಡಿಬಿಡುತ್ತೇನೆ’ ಎಂದೆಲ್ಲ ಬೆದರಿಕೆ ಹಾಕಿದ್ದರು. ಕೆಲವು ಅವಾಚ್ಯ ಶಬ್ದಗಳನ್ನು ಸಹ ದರ್ಶನ್ ಬಳಸಿದ್ದರು.

ಇದನ್ನೂ ಓದಿ:ದರ್ಶನ್ ತೂಗುದೀಪ ಬಂಧನವಾಗಿ ಇಂದಿಗೆ 100 ದಿನ; ಜೂನ್​ 11ರಿಂದ ಇಲ್ಲಿಯವರೆಗೆ ಏನೆಲ್ಲ ಆಯ್ತು?

ಆಗ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಭರತ್ ದೂರು ದಾಖಲಿಸಿದ್ದರು. ಆಗ ಎನ್​ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು ಧ್ರುವನ್, ದರ್ಶನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಈಗ ಧ್ರುವನ್ ಅಲಿಯಾಸ್ ಸೂರಜ್, ದರ್ಶನ್ ಮತ್ತು ದರ್ಶನ್ ಮ್ಯಾನೇಜರ್ ನಾಗರಾಜು ವಿರುದ್ಧ ಹೊಸದಾಗಿ ಎನ್​ಸಿಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಸುವ ಸಾಧ್ಯತೆ ಇದೆ. ತನಿಖೆ ನಡೆಸಲೆಂದೇ ಹೊಸದಾಗಿ ಎನ್​ಸಿಆರ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us