ರಾಜ್​ಕುಮಾರ್-ಪುನೀತ್ ಅವರ ಕಣ್ಣುಗಳಿಂದ ಅನೇಕರಿಗೆ ದೃಷ್ಟಿ ಕೊಟ್ಟಿದ್ದು ಭುಜಂಗ ಶೆಟ್ಟಿ

Bhujanga Shetty: ‘ರಾಜ್​ಕುಮಾರ್ ಅವರ ಕಣ್ಣನ್ನು ತಂದೆವು. ಅಂದು ಬೆಂಗಳೂರು ಹೊತ್ತಿ ಉರಿಯುತ್ತಿತ್ತು. ಇದರ ಮಧ್ಯೆಯೂ ರಾಜ್​ಕುಮಾರ್ ಕಣ್ಣನ್ನು ಇಬ್ಬರಿಗೆ ನೀಡಲಾಯಿತು’ ಎಂದಿದ್ದರು ಭುಜಂಗ ಶೆಟ್ಟಿ.

ರಾಜ್​ಕುಮಾರ್-ಪುನೀತ್ ಅವರ ಕಣ್ಣುಗಳಿಂದ ಅನೇಕರಿಗೆ ದೃಷ್ಟಿ ಕೊಟ್ಟಿದ್ದು ಭುಜಂಗ ಶೆಟ್ಟಿ
ಪುನೀತ್, ರಾಜ್​ಕುಮಾರ್-ಭುಜಂಗ ಶೆಟ್ಟಿ

Updated on: May 20, 2023 | 10:40 AM

ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಅವರು ಇಂದು ನಮ್ಮ ಜೊತೆಗೆ ಇಲ್ಲ. ಹೃದಯಾಘಾತದಿಂದ ಅವರು ಮೇ 19ರಂದು ನಿಧನ ಹೊಂದಿದರು. ರಾಜ್​ಕುಮಾರ್ ಕುಟುಂಬದ ಜೊತೆಗೆ ಅವರು ಒಳ್ಳೆಯ ಒಡನಾಟ ಹೊಂದಿದ್ದರು. ರಾಜ್​ಕುಮಾರ್ (Rajkumar) ಅವರಿಗೆ ಕಣ್ಣಿನ ದಾನ ಮಾಡುವಂತೆ ಪ್ರೇರೇಪಣೆ ನೀಡಿದ್ದು ಭುಜಂಗ ಶೆಟ್ಟಿ ಅವರೇ ಅನ್ನೋದು ವಿಶೇಷ. ಅಣ್ಣಾವ್ರು ನೇತ್ರದಾನ ಮಾಡಲು ನೋಂದಣಿ ಮಾಡಿಸಿದ ನಂತರ ‘ರಾಜ್​ಕುಮಾರ್ ನೇತ್ರದಾನ ಕೇಂದ್ರ’ವನ್ನು ಭುಜಂಗ ಶೆಟ್ಟಿ ಸ್ಥಾಪಿಸಿದರು. ರಾಜ್​ಕುಮಾರ್ ಅವರಿಂದ ಪ್ರೇರಿತರಾಗಿ ಅದೆಷ್ಟೋ ಮಂದಿ ನೇತ್ರದಾನ ಮಾಡಲು ಮುಂದೆ ಬಂದಿದ್ದಾರೆ. ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರ ಕಣ್ಣುಗಳಿಂದ ಅನೇಕರಿಗೆ ದೃಷ್ಟಿ ಬಂದಿದೆ.

1993ರಲ್ಲಿ ನಾರಾಯಣ ನೇತ್ರಾಲಯವನ್ನು ಉದ್ಘಾಟನೆ ಮಾಡಿದ್ದು ರಾಜ್​ಕುಮಾರ್. ನಂತರ 1994ರಲ್ಲಿ ‘ರಾಜ್​ಕುಮಾರ್ ನೇತ್ರದಾನ ಕೇಂದ್ರ’ ಆರಂಭ ಆಗುತ್ತದೆ. ಇದನ್ನು ಉದ್ಘಾಟನೆ ಮಾಡಿದ್ದು ಕೂಡ ರಾಜ್​ಕುಮಾರ್ ಅವರೇ. ಅಂದು ರಾಜ್​ಕುಮಾರ್ ಅವರು ತಮ್ಮ ಜೊತೆ ಕುಟುಂಬದವರೂ ಕಣ್ಣುಗಳನ್ನು ದಾನ ಮಾಡುವ ಘೋಷಣೆ ಮಾಡಿದರು. ಕೆಲ ತಿಂಗಳ ಹಿಂದೆ ಕಲಾಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಡಾ. ಭುಜಂಗ ಶೆಟ್ಟಿ ಅವರು ಮಾತನಾಡಿದ್ದರು.

‘ರಾಜ್​ಕುಮಾರ್ ಅವರು ಮೃತಪಟ್ಟಾಗ ರಾಘಣ್ಣ ಅವರ ಕಾಲ್ ಬಂತು. ಅಣ್ಣಾವ್ರ ಕಣ್ಣನ್ನು ತೆಗೆದುಕೊಂಡು ಹೋಗಬೇಕು ಅಂದರು. ನಾನು ಮನೆಗೆ ಹೋಗಿ ಕಣ್ಣನ್ನು ತೆಗೆದುಕೊಂಡು ಬಂದೆ. ಅಂದು ಬೆಂಗಳೂರು ಹೊತ್ತಿ ಉರಿಯುತ್ತಿತ್ತು. ಇದರ ಮಧ್ಯೆಯೂ ರಾಜ್​ಕುಮಾರ್ ಕಣ್ಣನ್ನು ಇಬ್ಬರಿಗೆ ನೀಡಲಾಯಿತು’ ಎಂದಿದ್ದರು ಭುಜಂಗ ಶೆಟ್ಟಿ.

ಇದನ್ನೂ ಓದಿ: ಅಣ್ಣಾವ್ರ ಜೊತೆ ಡಾ. ಭುಜಂಗ ಶೆಟ್ಟಿಗೆ ಒಡನಾಟ ಬೆಳೆದಿದ್ದು ಹೇಗೆ? ಇಲ್ಲಿದೆ ಹಳೆಯ ದಿನಗಳ ಕಥೆ

‘ಪಾರ್ವತಮ್ಮ ಅವರ ಮೃತಪಟ್ಟಾಗ ಕುಟುಂಬದವರು ನನ್ನನ್ನು ಕರೆದರು. ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಪುನೀತ್ ಮೃತಪಟ್ಟ ಬಳಿಕ ನನ್ನನ್ನು ಕರೆದರು. ಅವರು ಮೃತಪಟ್ಟಿರುವ ವಿಚಾರ ಘೋಷಣೆ ಆಗಿರಲಿಲ್ಲ. ನಾನು ಹೋಗುತ್ತಿದ್ದಂತೆ ಮಾಧ್ಯಮದವರಿಗೆ ಪುನೀತ್ ಮೃತಪಟ್ಟ ವಿಚಾರ ಖಾತ್ರಿ ಆಯಿತು. ನಾನು ಹೋಗಿ ಕಣ್ಣುಗಳನ್ನು ತೆಗೆದುಕೊಂಡು ಬಂದೆ. ವಿಶೇಷ ಎಂದರೆ ನಾಲ್ಕು ಜನರಿಗೆ ಅವರ ಕಣ್ಣುಗಳನ್ನು ದಾನ ಮಾಡಿದೆವು’ ಎಂದು ಹೇಳಿಕೊಂಡಿದ್ದರು ಭುಜಂಗ ಶೆಟ್ಟಿ.

ಪುನೀತ್ ಕಣ್ಣನ್ನು ನಾಲ್ಕು ಜನಕ್ಕೆ ಕೊಟ್ಟಿದ್ದು ಹೇಗೆ?

‘ಕಣ್ಣುಗಳಿಂದ ಕರಿಗುಡ್ಡೆಯನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಕಣ್ಣಿನ ಕರಿಗುಡ್ಡೆ ಡ್ಯಾಮೇಜ್ ಆದಂತಃ ಸಾಕಷ್ಟು ಜನರು ಇರುತ್ತಾರೆ. ಮೃತರ ಕಣ್ಣಿನ ಕರಿಗುಡ್ಡೆಯನ್ನು ನಾವು ಕಣ್ಣು ಇಲ್ಲದವರಿಗೆ ಹಾಕುತ್ತೇವೆ. ಪುನೀತ್ ರಾಜ್​ಕುಮಾರ್ ಅವರ ಕಾರ್ನಿಯಾನ ಬೇರ್ಪಡಿಸಿ ನಾಲ್ಕು ಜನರಿಗೆ ನೀಡಿದೆವು. ಆ ರೀತಿ ಆಗಿದ್ದು ಇದೇ ಮೊದಲು’ ಎಂದು ಮಾಹಿತಿ ನೀಡಿದ್ದರು ಭುಜಂಗ ಶೆಟ್ಟಿ. ಕೆಲವರಿಗೆ ಕಾರ್ನಿಯಾ ಮುಂಭಾಗ ಡ್ಯಾಮೇಜ್ ಆದರೆ, ಇನ್ನೂ ಕೆಲವರಿಗೆ ಹಿಂಭಾಗ ಡ್ಯಾಮೇಜ್ ಆಗಿರುತ್ತದೆ. ಪುನೀತ್ ಕಾರ್ನಿಯಾನ ಬೇರ್ಪಡಿಸಿದ್ದರಿಂದ ಹಿಂಭಾಗ ಡ್ಯಾಮೇಜ್ ಆದವರಿಗೆ ಹಿಂಭಾಗದ ಕಾರ್ನಿಯಾ, ಮುಂಭಾಗ ಡ್ಯಾಮೇಜ್ ಆದವರಿಗೆ ಮುಂಭಾಗದ ಕಾರ್ನಿಯಾ ಹಾಕಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us