Pawan Kalyan: ಬೆಂಗಳೂರಿಗೆ ಬಂದು ಕುವೆಂಪು ಪದ್ಯ ಹೇಳಿದ ಪವನ್ ಕಲ್ಯಾಣ್

|

Updated on: Aug 08, 2024 | 4:22 PM

Pawan Kalyan: ಬೆಂಗಳೂರಿಗೆ ಆಗಮಿಸಿದ್ದ ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈಶ್ವರ್ ಖಂಡ್ರೆ ಜೊತೆಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಕುವೆಂಪು ಪದ್ಯ ಹೇಳಿದರು. ಕನ್ನಡ ಭಾಷೆ ಬಗ್ಗೆ ಇರುವ ಪ್ರೀತಿಯ ಬಗ್ಗೆ ಮಾತನಾಡಿದರು. ಡಾ ರಾಜ್​ಕುಮಾರ್ ಅವರನ್ನು ನೆನಪಿಸಿಕೊಂಡರು.

Pawan Kalyan: ಬೆಂಗಳೂರಿಗೆ ಬಂದು ಕುವೆಂಪು ಪದ್ಯ ಹೇಳಿದ ಪವನ್ ಕಲ್ಯಾಣ್
Follow us on

ಸೂಪರ್ ಸ್ಟಾರ್ ನಟ, ಈಗ ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿಯೂ ಆಗಿರುವ ಪವನ್ ಕಲ್ಯಾಣ್ ಇಂದು (ಆಗಸ್ಟ್ 08) ಬೆಂಗಳೂರಿಗೆ ಬಂದಿದ್ದರು. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆಯಾಡಿದ ಪವನ್ ಕಲ್ಯಾಣ್, ಆ ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಟ್ಟಿಗೆ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಸಹ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕುವೆಂಪು ಅವರ ಕವಿತೆಯ ಸಾಲುಗಳನ್ನು ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದರು ಪವನ್ ಕಲ್ಯಾಣ್.

ಸಚಿವರಿಗೆ, ಅಧಿಕಾರಿಗಳಿಗೆ, ಪತ್ರಕರ್ತರಿಗೆ ನಮಸ್ಕಾರ ಹೇಳಿ ಮಾತು ಆರಂಭಿಸಿದ ಪವನ್ ಕಲ್ಯಾಣ್, ‘ಕರ್ನಾಟಕ ಮತ್ತು ಆಂಧ್ರ ಇಷ್ಟು ಹತ್ತಿರವಿದ್ದು, ಗಡಿಗಳನ್ನು ಹಂಚಿಕೊಳ್ಳುತ್ತಿದ್ದು, ನಾವು ಇಷ್ಟು ಹತ್ತಿರವಿದ್ದರೂ ಸಹ ನಾನು ಇಂದು ಇಲ್ಲಿ ಕನ್ನಡದಲ್ಲಿ ಮಾತನಾಡದೇ ಇರುವುದಕ್ಕೆ ಬೇಸರವಾಗುತ್ತಿದೆ. ನಾನು ಕನ್ನಡ ಕಲಿಯಬಹುದಿತ್ತು ಆದರೆ ನಾನು ಇನ್ನೂ ಕಲಿತಿಲ್ಲ ಎಂಬುದಕ್ಕೆ ಬೇಸರವಿದೆ, ನನಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವವಿದೆ ಆದರೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಿರುವಕ್ಕೆ ಬೇಸರವಿದೆ, ನಾನು ಕನ್ನಡ ಕಲಿತಿದಿದ್ದಿದ್ದರೆ ನನ್ನ ಹೃದಯದಿಂದ ಮಾತನಾಡಬಹುದಿತ್ತು’ ಎಂದಿದ್ದಾರೆ ಪವನ್ ಕಲ್ಯಾಣ್.

ಮುಂದುವರೆದು, ‘ನಾನು ಈ ಸಭೆಗಾಗಿ ತಯಾರಾಗುತ್ತಿರುವಾಗ ನನ್ನ ಕಚೇರಿ ಸಿಬ್ಬಂದಿ ಕುವೆಂಪು ಅವರ ಕವನವೊಂದನ್ನು ನನಗೆ ನೀಡಿದರು. ಅದರ ಕೆಲವು ಸಾಲು ಓದಿದೊಡನೆ ನನಗೆ ಅದ್ಭುತವೆನಿಸಿತು. ‘ಅರಣ್ಯಕ್ಕೆ ಹಾಡು ಹಾಡುವ ಮುನ್ನ ನಾನು ನನ್ನ ಮನದ ಮುಂದೆ…’ ಎನ್ನುತ್ತಾ ಎರಡು ಸಾಲು ಹೇಳಿದ ಪವನ್ ಕಲ್ಯಾಣ್, ನಂತರ ಅದರ ಅರ್ಥವನ್ನು ಇಂಗ್ಲೀಷ್​ನಲ್ಲಿ ಹೇಳಿ, ಕುವೆಂಪು ಅವರಿಗೆ ನಮಿಸಿದರು. ‘ಕುವೆಂಪು ಅವರ ಈ ಸಾಲುಗಳನ್ನು ಓದಿದಾಗ ನಾನು ಕನ್ನಡ ಕಲಿತಿದ್ದಿದ್ದರೆ ಎಷ್ಟು ಒಳ್ಳೆಯದಿತ್ತು ಎನಿಸಿತು. ಇಂದು ನಾನು ಹಾಜರಾಗಿರುವ ಈ ಸಭೆ, ನಾನು ಕನ್ನಡ ಕಲಿಯಲು ನನಗೆ ಸ್ಪೂರ್ತಿ ನೀಡಿದೆ. ನನ್ನನ್ನು ಕನ್ನಡ ಕಲಿಯುವತ್ತ ಸೆಳೆದಿದೆ’ ಎಂದು ಸಹೋದರ ಭಾಷೆಯ ಬಗ್ಗೆ ಇರುವ ಪ್ರೀತಿಯನ್ನು ಸಾರಿದರು.

ಇದನ್ನೂ ಓದಿ:ಬೆಂಗಳೂರು: ವಿಧಾನಸೌಧಕ್ಕೆ ಬಂದ ಪವನ್ ಕಲ್ಯಾಣ್ ನೋಡಲು ಮುಗಿಬಿದ್ದ ಸರ್ಕಾರಿ ನೌಕರರು

‘ನಟನಾಗಿ ನನಗೆ ಕರ್ನಾಟಕದ ಜನ ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ಅವರ ಭಾಷೆಯನ್ನು ಕಲಿಯುವ ಮೂಲಕ ಅವರಿಗೆ ನನ್ನ ಪ್ರೀತಿಯನ್ನು ಮರಳಿ ತಿಳಿಸಬೇಕಿ, ಮಾತ್ರವಲ್ಲದೆ ಕನ್ನಡ ಭಾಷೆ ಕಲಿಯುವ ಮೂಲಕ ಕನ್ನಡ ಸಂಸ್ಕೃತಿಗೆ ನನ್ನ ಗೌರವವನ್ನು ಅರ್ಪಿಸಬೇಕಿದೆ. ನಾನೀಗ ಆಂಧ್ರದ ಅರಣ್ಯ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೀನಿ. ನಾನು ಅರಣ್ಯವನ್ನು ಗಮನಿಸಲು ಪ್ರಾರಂಭಿಸಿದ್ದು, ಕನ್ನಡ ಕಂಠೀರವ ಡಾ ರಾಜ್​ಕುಮಾರ್ ಅವರ ‘ಗಂಧದ ಗುಡಿ’ ಸಿನಿಮಾ ನೋಡಿದ ಮೇಲೆ. 40 ವರ್ಷದ ಹಿಂದೆ ಅರಣ್ಯವನ್ನು ರಕ್ಷಿಸುವವ ಹೀರೋ ಆದರೆ ಈಗ ಅರಣ್ಯವನ್ನು ದೋಚುವವನು ಹೀರೋ’ ಎಂದು ತಮ್ಮದೇ ಭಾಷೆಯ ಸಿನಿಮಾವನ್ನು ವಿಶ್ಲೇಷಿಸಿದರು.

ಕರ್ನಾಟಕದ ಅರಣ್ಯ ಇಲಾಖೆ ಜೊತೆಗೆ ಆನೆ ಹಿಡಿಯುವ ಹಾಗೂ ಪಳಗಿಸುವ ಹಾಗೂ ಇನ್ನೂ ಏಳು ವಿಷಯಗಳಿಗೆ ಸಂಬಂಧಿಸಿದಂತೆ ತಿಳುವಳಿಕೆ ಒಪ್ಪಂದಕ್ಕೆ ಪವನ್ ಕಲ್ಯಾಣ್ ಹಾಗೂ ಈಶ್ವರ್ ಖಂಡ್ರೆ ಸಹಿ ಮಾಡಿದರು. ಆನೆ ಪಳಗಿಸುವ ತರಬೇತಿ, ಗಡಿ ಭಾಗದ ಅರಣ್ಯ ರಕ್ಷಣೆ, ರಕ್ತ ಚಂದನ ಕಳ್ಳಸಾಗಣೆ ತಡೆ, ಅರಣ್ಯ ರಕ್ಷಣೆಗೆ ಐಟಿ ಬಳಕೆ, ಇಕೊ ಟೂರಿಸಮ್, ವನ್ಯ ಜೀವಿಗಳ ಕಳ್ಳಸಾಗಣೆ ವಿಷಯಗಳ ಬಗ್ಗೆ ಆಂಧ್ರ ಹಾಗೂ ಕರ್ನಾಟಕ ಒಪ್ಪಂದ ಮಾಡಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ