
‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳಲ್ಲಿ ಯಶ್ (Yash) ನಿರ್ವಹಿಸಿರುವ ರಾಕಿಭಾಯ್ ಪಾತ್ರಕ್ಕೆ ಭಾರಿ ಜನಮನ್ನಣೆ ಸಿಕ್ಕಿದೆ. ರಾಕಿಭಾಯ್ ಅಭಿಮಾನಿಗಳು ರಾಷ್ಟ್ರದಾದ್ಯಂತ ಇದ್ದಾರೆ. ಯಶ್ ಅವರು ರಾಕಿಭಾಯ್ ಪಾತ್ರಕ್ಕೆ ಜೀವವೇ ತುಂಬಿದ್ದಾರೆ. ಆದರೆ ರಾಕಿಭಾಯ್ ಪಾತ್ರ ಅನುಕರಣೀಯ ಅಲ್ಲ, ಸಮಾಜಕ್ಕೆ ಮಾರಕ ಆಗುವಂಥಹಾ ಪಾತ್ರ ಅದು ಎಂಬ ಟೀಕೆ ಸಹ ವ್ಯಕ್ತವಾಗಿತ್ತು, ‘ಕೆಜಿಎಫ್’ ಸಿನಿಮಾ ನೋಡಿ ಯುವಕನೊಬ್ಬ ಕೊಲೆ ಮಾಡಿದ ಘಟನೆಯೂ ಸಹ ನಡೆದಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು. ರಾಕಿಭಾಯ್ಗೆ ಎರಡು ಮುಖವಿದೆ, ಒಂದು ಹಿಂಸೆಯ ಮುಖವಾದರೆ ಮತ್ತೊಂದು ಛಲಗಾರನದ್ದು. ಏನೂ ಇಲ್ಲದವನು ತನ್ನ ಛಲ, ಧೈರ್ಯದಿಂದ ಎಲ್ಲವನ್ನೂ ಗಳಿಸಬಲ್ಲ ಎಂಬುದನ್ನು ತೋರಿಸಿದ ಪಾತ್ರವದು. ಅದೇ ಆ ಪಾತ್ರದ ಆತ್ಮ ಸಹ. ಆದರೆ ಅದನ್ನು ಅರಿತುಕೊಂಡವರು ಬಹಳ ವಿರಳ.
ಇದೀಗ ಪುಟ್ಟ ಬಾಲಕನೊಬ್ಬನ ವಿಡಿಯೋ ವೈರಲ್ ಆಗಿದೆ. ಆ ಪುಟ್ಟ ಬಾಲಕ ರಾಕಿಭಾಯ್ನ ನಿಜವಾದ ಅಭಿಮಾನಿ. ರಾಕಿಭಾಯ್ ಅನ್ನು ನಿಜವಾಗಿ ಅರ್ಥ ಮಾಡಿಕೊಂಡಿರುವಾತ. ಇದೀಗ ವೈರಲ್ ಆಗಿರುವ ರೀಲ್ನಲ್ಲಿ ಪುಟ್ಟ ಬಾಲಕನೊಬ್ಬ ರಸ್ತೆಯಲ್ಲಿ ಕ್ಯಾರಿ ಬ್ಯಾಗುಗಳನ್ನು ಮಾರಾಟ ಮಾಡುತ್ತಿದ್ದಾನೆ. ಯೂಟ್ಯೂಬರ್ ಒಬ್ಬ ಆತನ ಹತ್ತಿರ ಹೋಗಿ, ಏನಿದು? ಎಂದು ಕೇಳುತ್ತಾನೆ. ಹುಡುಗ ‘ಕ್ಯಾರಿ ಬ್ಯಾಗ್’ ಎನ್ನುತ್ತಾನೆ. ‘ಯಾಕಾಗಿ ಮಾರುತ್ತಿದ್ದೀಯ?’ ಎಂದು ಕೇಳುತ್ತಾನೆ ಯೂಟ್ಯೂಬರ್, ಆ ಪುಟ್ಟ ಬಾಲಕ ‘ಶ್ರೀಮಂತನಾಗಲು’ ಎನ್ನುತ್ತಾನೆ. ಆಗ ಯೂಟ್ಯೂಬರ್, ‘ನೀನು ದೊಡ್ಡವನಾದ ಮೇಲೆ ಯಾರ ರೀತಿ ಆಗಬೇಕು ಎಂದು ನಿನ್ನ ಆಸೆ?’ ಎಂದು ಕೇಳುತ್ತಾನೆ, ಅದಕ್ಕೆ ಆ ಬಾಲಕ ‘ರಾಕಿಭಾಯ್’ ಎನ್ನುತ್ತಾನೆ. ಅದ್ಯಾಕೆ ರಾಕಿಭಾಯ್ ಬಗ್ಗೆ ಆಗಬೇಕು? ಎಂದು ಕೇಳಿದ್ದಕ್ಕೆ, ‘ರಾಕಿಭಾಯ್, ತನ್ನ ತಾಯಿಗೆ ಇಡೀ ಪ್ರಪಂಚದ ಚಿನ್ನವನ್ನು ತಂದುಕೊಡುತ್ತೇನೆಂದು ಹೇಳಿದ್ದ, ನಾನು ಹಾಗೆಯೇ ತನ್ನ ತಾಯಿಗೆ ಚಿನ್ನ ತಂದುಕೊಡುತ್ತೇನೆ’ ಎನ್ನುತ್ತಾನೆ.
ಇದನ್ನೂ ಓದಿ:‘ಟಾಕ್ಸಿಕ್’ಗಾಗಿ ಒಂದಾದ ‘ಕೆಜಿಎಫ್’ ಜೋಡಿ: ಉತ್ತರದ ಹಕ್ಕು ಭಾರಿ ಮೊತ್ತಕ್ಕೆ ಡೀಲ್
ವಿಡಿಯೋ ತುಸು ಹಳೆಯದ್ದಾದರೂ ಈಗ ಮತ್ತೆ ವೈರಲ್ ಆಗುತ್ತಿದೆ. ಪುಟ್ಟ ಬಡ ಬಾಲಕನಿಗೆ ದೊಡ್ಡದಾಗಿ ಯೋಚಿಸುವುದಕ್ಕೆ, ತನ್ನ ತಾಯಿಯನ್ನು ಪ್ರೀತಿಸುವುದಕ್ಕೆ, ಬಡತನದಿಂದ ಹೊರ ಬಂದು ಶ್ರೀಮಂತನಾಗುವುದಕ್ಕೆ ಸ್ಪೂರ್ತಿ ತುಂಬಿದ್ದಾನೆ ರಾಕಿಭಾಯ್. ಇದೀಗ ಈ ವಿಡಿಯೋಕ್ಕೆ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಆದರೆ ಕೆಲವರು ಈ ವಿಡಿಯೋ ಸ್ಕ್ರಿಪ್ಟೆಡ್, ಮೊದಲೇ ಹುಡುಗನಿಗೆ ಅದೇ ಉತ್ತರ ಕೊಡುವಂತೆ ಹೇಳಿಕೊಟ್ಟಿರಬಹುದು ಎಂಬ ಟೀಕೆಗಳೂ ಸಹ ವ್ಯಕ್ತವಾಗುತ್ತಿವೆ.
ಏನೇ ಆಗಲಿ, ರಾಕಿಭಾಯ್, ಹಲವಾರು ಯುವಕರಿಗೆ ಬದುಕಿನಲ್ಲಿ ಗೆಲುವು ಸ್ಪೂರ್ತಿ ತುಂಬಿರುವುದಂತೂ ನಿಜ. ಆದರೆ ಸ್ಪೂರ್ತಿ ಪಡೆದ ಯುವಕರು ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಷ್ಟೆ. ಸಿನಿಮಾನಲ್ಲಿ ಕಮರ್ಶಿಯಲ್ ಕಾರಣಗಳಿಗಾಗಿಯೋ ಅಥವಾ ಮಾಸ್ ಅಂಶಗಳಿಗಾಗಿಯೋ ರಾಕಿಭಾಯ್ ಹಿಂಸೆಯ ದಾರಿ ಹಿಡಿಯುತ್ತಾನೆ ಆದರೆ ನಿಜ ಜೀವನದಲ್ಲಿ ರಾಕಿಭಾಯ್ ಅಭಿಮಾನಿಗಳು ಕಾನೂನಿನ ಗಡಿಯ ಒಳಗೆ ಗೆಲ್ಲುವ ಹೋರಾಟವನ್ನು ಮಾಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ