“ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್” ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಹೊಸ ಯುವಕರ ಹೊಸ ಪ್ರಯತ್ನ "ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್" ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಥ್ರಿಲ್ಲರ್ ಪ್ರೇಮಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ರಾಧಾ ಸರ್ಚಿಂಗ್ ರಮಣ  ಮಿಸ್ಸಿಂಗ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್

Updated on: May 25, 2023 | 11:55 PM

ಕನ್ನಡದಲ್ಲಿ ಹೊಸ ಹುಡುಗರ ಹವಾ ಈಗ ಎದ್ದಿದೆ. ಹೊಸ ಹುಡುಗರು ಹೊಸ ಕಂಟೆಂಟ್ ಮೂಲಕ ಚಿತ್ರರಂಗದಲ್ಲಿ (Sandalwood) ಗಮನ ಸೆಳೆಯುತ್ತಿದ್ದಾರೆ. ಕಳೆದ ವಾರ ಬಿಡುಗಡೆ ಆಗಿರುವ ಹೊಸ ತಂಡದ ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ಸದ್ದು ಮಾಡುತ್ತಿದೆ. ಅದರ ಬೆನ್ನಲ್ಲೆ ಇನ್ನಷ್ಟು ಹೊಸಬರ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದೆ. ಒಂದಕ್ಕಿಂತಲೂ ಒಂದು ಭಿನ್ನ ಕತೆಯೊಟ್ಟಿಗೆ ಚಿತ್ರರಂಗಕ್ಕೆ ಕಾಲಿಡಲು ಹೊಸ ತಂಡಗಳು ಉತ್ಸುಕವಾಗಿವೆ. ಅಂಥಹುದೇ ಒಂದು ಹೊಸ ತಂಡ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಹೆಸರಿನ ಸಿನಿಮಾದೊಟ್ಟಿಗೆ ಬಂದಿದೆ.

ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೆ ಹೆಚ್ಚಾಗಿ ಗೆಲ್ಲುತ್ತಿದೆ. ಅಂತಹ ವಿಭಿನ್ನ ಪ್ರೇಮಕಥೆಯ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್” ಚಿತ್ರ ಇದೇ ಜೂನ್ 2 ರಂದು ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಸಾಕಷ್ಟು ಪ್ರೇಮಕಥೆಯುಳ್ಳ ಚಿತ್ರಗಳು ಬಂದಿದೆ. ಆದರೆ ಇದು ಸ್ವಲ್ಪ ವಿಭಿನ್ನ ಪ್ರೇಮಕಥೆ ಎನ್ನಬಹುದು. ರಾಧಾ – ರಮಣ ಇಬ್ಬರು ಪ್ರೇಮಿಗಳು. ಒಬ್ಬರನೊಬ್ಬರು ಬಿಟ್ಟಿರದಷ್ಟು. ಕಾರಣಾಂತರದಿಂದ ತಪ್ಪಿಸಿಕೊಂಡಿರುವ ರಮಣನನ್ನು ರಾಧಾ ಹುಡುಕುವುದೆ ಚಿತ್ರದ ಪ್ರಮುಖ ಕಥಾಹಂದರ.

ಸಾನ್ವಿ ಪಿಕ್ಚರ್ಸ್ & ಅನಿಮೇಷನ್ಸ್ ಲಾಂಛನದಲ್ಲಿ ಯಶಸ್ವಿ ಶಂಕರ್ ಹಾಗೂ ಸವಿತಾ ಯಶಸ್ವಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಂ.ಎನ್ ಶ್ರೀಕಾಂತ್ ನಿರ್ದೇಶಿಸಿದ್ದಾರೆ. ನವನೀತ್ ಚರಿ ಸಂಗೀತ ನಿರ್ದೇಶನ ಹಾಗೂ ವಿಶ್ವಜಿತ್ ರಾವ್ ಛಾಯಾಗ್ರಹಣ ಈ ಚಿತ್ರಕ್ಕಿದೆ‌. ಕೀ ಕ್ರಿಯೇಷನ್ಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ. ರಾಘವ್ ರಮಣನಾಗಿ ಹಾಗೂ ಸಂಜನ ಬುರ್ಲಿ ರಾಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೇಖಾ, ಗೋಪಿನಾಥ್ ಭಟ್, ಚಿರಾಗ್, ಪ್ರದೀಪ್ ತಿಪಟೂರು ಗುರು ಹೆಗಡೆ ಹಾಗೂ ಯಶಸ್ವಿ ಶಂಕರ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಫೆಬ್ರವರಿ ತಿಂಗಳಲ್ಲಿ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್” ಸಿನಿಮಾದ ಟ್ರೈಲರ್ ಬಿಡುಗಡೆ ಆಗಿತ್ತು, ವಸಿಷ್ಠ ಸಿಂಹ ಹಾಗೂ ಮಾಜಿ ಪೊಲೀಸ್ ಆಯುಕ್ತರು ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಸಿನಿಮಾದ ಟ್ರೈಲರ್ ತುಸು ಸದ್ದು ಮಾಡಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಇದೊಂದು ಕುತೂಹಲಕಾರಿ ಪ್ರೇಮಕತೆಯುಳ್ಳ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್​ಗಳಿವೆ.

ಸಿನಿಮಾದ ನಾಯಕ ಹಾಗೂ ನಿರ್ದೇಶಕರಿಬ್ಬರೂ ಹೊಸಬರಾಗಿದ್ದು ಸಾಕಷ್ಟು ಉತ್ಸಾಹದಲ್ಲಿ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ ಕಾಲೇಜ್‌ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಘವ್‌, ಈ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆ್ಯಕ್ಟಿಂಗ್‌, ಡ್ಯಾನ್ಸಿಂಗ್‌ ಜೊತೆಗೆ ತಿಂಗಳುಗಳ ಕಾಲ ಜಿಮ್‌ನಲ್ಲಿ ವಕೌìಟ್‌ ಮಾಡುವ ಮೂಲಕ ಪಾತ್ರಕ್ಕಾಗಿ ದೇಹವನ್ನು ಸಾಕಷ್ಟು ದಂಡಿಸಿ, ಈ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಿತ್ರದಲ್ಲಿ ಸಂಜನಾ ಬುರ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಯುವ ನಿರ್ದೇಶಕ ಎಂ. ಎನ್‌ ಶ್ರೀಕಾಂತ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಶ್ವಜಿತ್‌ ರಾವ್‌ ಛಾಯಾಗ್ರಹಣವಿದೆ. ಮೈಸೂರು ಮೂಲದವರಾದ ಅನಿವಾಸಿ ಕನ್ನಡಿಗ ಪ್ರಸ್ತುತ ಅಮೆರಿಕಾದ ನಿವಾಸಿ ಯಶಸ್ವಿ ಶಂಕರ್‌ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಜೂನ್ 2 ಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us