‘ದೃಶ್ಯ 2’ ಮಾಡೋಕೆ ರವಿಚಂದ್ರನ್​ ರೆಡಿ! ಯುಗಾದಿ ಹಬ್ಬದ ದಿನವೇ ‘ಕ್ರೇಜಿ ಸ್ಟಾರ್​’ ಅಭಿಮಾನಿಗಳಿಗೆ ಸಿಹಿ ಸುದ್ದಿ

ದೃಶ್ಯ ಚಿತ್ರದಲ್ಲಿ ಕಥಾನಾಯಕ ಮುಚ್ಚಿಹಾಕಿರುವ ಕೊಲೆ ಕೇಸ್​ ಮತ್ತೆ ರಿ-ಓಪನ್​ ಆದರೆ ಅವನ ಕುಟುಂಬದವರ ಪರಿಸ್ಥಿತಿ ಏನಾಗುತ್ತದೆ? ಈ ಬಾರಿಯೂ ಆತ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಾ?

‘ದೃಶ್ಯ 2’ ಮಾಡೋಕೆ ರವಿಚಂದ್ರನ್​ ರೆಡಿ! ಯುಗಾದಿ ಹಬ್ಬದ ದಿನವೇ ‘ಕ್ರೇಜಿ ಸ್ಟಾರ್​’ ಅಭಿಮಾನಿಗಳಿಗೆ ಸಿಹಿ ಸುದ್ದಿ
(ರವಿಚಂದ್ರನ್​ - ದೃಶ್ಯ 2 ಸಿನಿಮಾ)

Updated on: Apr 13, 2021 | 4:39 PM

ಕ್ರೇಜಿ ಸ್ಟಾರ್​ ರವಿಚಂದ್ರನ್​ ನಟಿಸಿದ ‘ದೃಶ್ಯ’ ಚಿತ್ರವನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಮರ್ಡರ್​ ಮಿಸ್ಟರಿ ಕಥೆಯುಳ್ಳ ಆ ಸಿನಿಮಾದಲ್ಲಿ ರವಿಚಂದ್ರನ್​ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​ ಆಗಿ ಕಾಣಿಸಿಕೊಂಡಿದ್ದರು. 2014ರ ಜೂನ್​ 20ರಂದು ಆ ಚಿತ್ರ ತೆರೆಕಂಡಿತ್ತು. ಈಗ ಆ ಚಿತ್ರಕ್ಕೆ ಸೀಕ್ವೆಲ್​ ಮಾಡುವ ಬಗ್ಗೆ ಹೊಸ ಸುದ್ದಿ ಕೇಳಿಬಂದಿದೆ. ಅದು ಕ್ರೇಜಿ ಸ್ಟಾರ್​ ಅಭಿಮಾನಿಗಳಿಗೆ ಖುಷಿ ನೀಡಿದೆ.

ಹೌದು, ‘ದೃಶ್ಯ 2’ ಮಾಡಲು ಪ್ಲ್ಯಾನ್​ ಸಿದ್ಧವಾಗಿದೆ. ಬಹುತೇಕ ‘ದೃಶ್ಯ’ ಸಿನಿಮಾ ತಂಡದಲ್ಲಿದ್ದವರೇ ಸೇರಿಕೊಂಡು ಈಗ ‘ಪಾರ್ಟ್​ 2’ ಮಾಡಲಿದ್ದಾರೆ. ಯುಗಾದಿ ಹಬ್ಬದ ಶುಭದಿನದಂದೇ ಈ ಸುದ್ದಿ ಹೊರಬಿದ್ದಿದೆ. ರಾಜೇಂದ್ರ ಪೊನ್ನಪ್ಪ ಎಂಬ ಪಾತ್ರದಲ್ಲಿ ಮತ್ತೆ ರವಿಚಂದ್ರನ್​ ಬಣ್ಣ ಹಚ್ಚಲಿದ್ದಾರೆ. ಅವರ ಜೊತೆ ‘ದೃಶ್ಯ’ದಲ್ಲಿ ನಟಿಸಿದ್ದ ಕಲಾವಿದರೇ ಈಗ ಸೀಕ್ವೆಲ್​ನಲ್ಲಿ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.

ರವಿಚಂದ್ರನ್​ಗೆ ಜೋಡಿಯಾಗಿ ನಟಿ ನವ್ಯಾ ನಾಯರ್​ ಕಾಣಿಸಿಕೊಳ್ಳಲಿದ್ದಾರೆ. ಮಗಳ ಪಾತ್ರದಲ್ಲಿ ಆರೋಹಿ ನಾರಾಯಣ್​ ಇರಲಿದ್ದಾರೆ. ಎಲ್ಲ ಕಲಾವಿದರ ಜೊತೆಗೆ ನಿರ್ಮಾಪಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮೊದಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಪಿ. ವಾಸು ಅವರೇ ಈಗಲೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ತಮ್ಮ ಕುಟುಂಬದಲ್ಲಿ ನಡೆಯುವ ಅನಿರೀಕ್ಷಿತವಾದ ಒಂದು ಕೊಲೆಯನ್ನು ಮುಚ್ಚಿಹಾಕಲು ಮನೆಯ ಯಜಮಾನ ಕಷ್ಟಪಡುವ ಕಥೆಯನ್ನು ‘ದೃಶ್ಯ’ ಸಿನಿಮಾ ಹೊಂದಿತ್ತು. ಮಲಯಾಳಂನಲ್ಲಿ ಜೀತು ಜೋಸೆಫ್​ ನಿರ್ದೇಶನ ಮಾಡಿದ್ದ ‘ದೃಶ್ಯಂ’ ಚಿತ್ರದ ರಿಮೇಕ್​ ಆಗಿ ಕನ್ನಡದಲ್ಲಿ ದೃಶ್ಯ ಮೂಡಿಬಂದಿತ್ತು. ಮೋಹನ್​ ಲಾಲ್​ ಮಾಡಿದ್ದ ಪಾತ್ರವನ್ನು ರಿಮೇಕ್​ನಲ್ಲಿ ರವಿಚಂದ್ರನ್​ ಮಾಡಿದ್ದರು.

ಈ ವರ್ಷ ಫೆ.19ರಂದು ಮಲಯಾಳಂನಲ್ಲಿ ‘ದೃಶ್ಯಂ 2’ ಬಿಡುಗಡೆ ಆಯಿತು. ಕಥಾನಾಯಕ ಮುಚ್ಚಿ ಹಾಕಿರುವ ಕೊಲೆ ಕೇಸ್​ ಮತ್ತೆ ರಿ-ಓಪನ್​ ಆದರೆ ಅವನ ಕುಟುಂಬದವರ ಪರಿಸ್ಥಿತಿ ಏನಾಗುತ್ತದೆ? ಈ ಬಾರಿಯೂ ಆತ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಾ? ಈ ಪ್ರಶ್ನೆಗಳನ್ನೇ ಇಟ್ಟುಕೊಂಡು ‘ದೃಶ್ಯಂ 2’ ಮಾಡಲಾಗಿತ್ತು. ಅದನ್ನೇ ಈಗ ಕನ್ನಡದಲ್ಲಿ ರಿಮೇಕ್​ ಮಾಡಲು ಪ್ಲ್ಯಾನ್​ ಸಿದ್ಧವಾಗಿದೆ.

ಇದನ್ನೂ ಓದಿ: Ravichandran: ರವಿಚಂದ್ರನ್​ ಸಿಗರೇಟ್​ ಸೇದ್ತಾರಾ? ಸೋಶಿಯಲ್​ ಮೀಡಿಯಾಗೆ ಬಂದು ಸತ್ಯ ಬಹಿರಂಗಪಡಿಸಿದ ಕ್ರೇಜಿ ಸ್ಟಾರ್​!

 

( Ravichandran starrer Drishya 2 movie announced on Yugadi 2021 )

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us