ದರ್ಶನ್ ಜೈಲು ಸೇರಿದ ಬಳಿಕ ಇನ್ನಷ್ಟು ಚುರುಕಾದ ಪೊಲೀಸರು, ಹೊಸ ಸಾಕ್ಷ್ಯಗಳ ಸಂಗ್ರಹ

|

Updated on: Jun 25, 2024 | 10:16 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿದೆ. ಇತ್ತ ಪೊಲೀಸರು ವಿಶ್ರಾಂತಿ ಪಡೆಯದೆ ಕೇಸಿನ ಮೇಲೆ ಕೆಲಸ ಮಾಡುತ್ತಿದ್ದಾರೆ. ಹಲವು ಹೊಸ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ತಂಡಗಳನ್ನು ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.

ದರ್ಶನ್ ಜೈಲು ಸೇರಿದ ಬಳಿಕ ಇನ್ನಷ್ಟು ಚುರುಕಾದ ಪೊಲೀಸರು, ಹೊಸ ಸಾಕ್ಷ್ಯಗಳ ಸಂಗ್ರಹ
ದರ್ಶನ್-ಪವಿತ್ರಾ-ರೇಣುಕಾ ಸ್ವಾಮಿ
Follow us on

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಈವರೆಗೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕವೂ ವಿಶ್ರಮಿಸಿಲ್ಲ. ಬದಲಿಗೆ ಕೆಲವನ್ನು ಇನ್ನಷ್ಟು ತ್ವರಿತಗೊಳಿಸಿದ್ದಾರೆ. ದರ್ಶನ್​ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ಶರವೇಗದಲ್ಲಿ ತಯಾರಾಗುತ್ತಿರುವ ಪೊಲೀಸರು ಕೆಲವು ತಂಡಗಳನ್ನು ರಚಿಸಿಕೊಂಡು ಪರಸ್ಪರ ಸಮನ್ವಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ದರ್ಶನ್ ಹಾಗೂ ಗ್ಯಾಂಗ್ ನ ಸದಸ್ಯರನ್ನು ಸತತವಾಗಿ 12 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರು ಈಗ ಎಲ್ಲರಿಗೂ ನ್ಯಾಯಾಂಗ ಬಂಧನ ವಿಧಿಸಿದ ಬಳಿಕೂ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ತ್ವರಿತಗತಿಯಲ್ಲಿ ಮುಗಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತ್ಯೇಕ ತಂಡಗಳನ್ನು ರೆಡಿ ಮಾಡಿಕೊಂಡಿದ್ದು ಒಂದು ತಂಡ ಆನ್​ಫೀಲ್ಡ್​ನಲ್ಲಿ ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದರೆ ಇನ್ನೊಂದು ತಂಡ ಡಿಜಿಟಲ್ ಸಾಕ್ಷ್ಯ ಸಂಗ್ರಹ ಮಾಡುತ್ತಿದೆ. ಮತ್ತೊಂದು ತಂಡ ಪ್ರಕರಣದ ಪೇಪರ್ ವರ್ಕ್ ಮತ್ತು ಚಾರ್ಜ್ ಶೀಟ್ ತಯಾರಿಯಲ್ಲಿ ನಿರತವಾಗಿದೆ. ಚಾರ್ಜ್ ಶೀಟ್ ತಯಾರಿಗೆ ಕೆಲವು ಅನುಭವಿಗಳ ನೆರವನ್ನು ಸಹ ಕೋರಲಾಗಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಮಹತ್ವದ ಟೆಕ್ನಿಕಲ್ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿನೇಳು ಮೊಬೈಲ್​ಗಳ ಡಾಟಾ ರಿಟ್ರೀವ್ ಕಾರ್ಯ ಪ್ರಾರಂಭಿಸಿದ್ದಾರೆ. ಸಿಐಡಿ ಟೆಕ್ನಿಕಲ್ ಸೆಲ್ ನಲ್ಲಿ ಡಿಜಿಟಲ್ ಸಾಕ್ಷ್ಯಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ದರ್ಶನ್, ಪವಿತ್ರಾ, ಪವನ್ ಮತ್ತು ವಿನಯ್ ಮೊಬೈಲ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಮೊಬೈಲ್ ಡಾಟಾ ರಿಟ್ರೀವ್ ನಡೆಯುತ್ತಿದೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಆರೋಪಿಗಳು ಚಾಪೆ ಕೆಳಗೆ, ಪೊಲೀಸರು ರಂಗೋಲಿ ಕೆಳಗೆ

ಈ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಸಹ ಮಹತ್ವದ ಕಾರ್ಯ ನಿರ್ವಹಿಸಲಿವೆ. ಹಾಗಾಗಿ ಸಿಸಿಟಿವಿ ದೃಶ್ಯಗಳ ಸಂಗ್ರಹ ಕಾರ್ಯವನ್ನೂ ಸಹ ಪೊಲೀಸರು ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬರೋಬ್ಬರಿ 62 ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದೆ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಪಟ್ಟಣಗೆರೆ ಶೆಡ್ ಗೆ ಕರೆತಂದಿದ್ದ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಇದೀಗ ಪಟ್ಟಣಗೆರೆ ಶೆಡ್ ನಿಂದ ಸುಮ್ಮನಹಳ್ಳಿ ಮೋರಿವರೆಗೂ ಕಾರ್ ಮೂಮೆಂಡ್ ಸಿಸಿಟಿವಿ ಸಂಗ್ರಹ ಸಹ ಮಾಡಲಾಗಿದೆ.

ಮೃತದೇಹ ಹೊತ್ತೊಯ್ದ ಕಾರ್ತಿಕ್ ಅಂಡ್ ಟೀಂ ಒಂದು ಕಾರು, ಪ್ರದೂಶ್ ಮತ್ತು ವಿನಯ್ ಹಿಂದೆ ಫಾಲೋ ಮಾಡಿಕೊಂಡು ಬಂದಿದ್ದರು. ಪಟ್ಟಣಗೆರೆ ಶೆಡ್ ನಿಂದ ಸುಮ್ಮನಹಳ್ಳಿ ಮೋರಿವರೆಗೂ ಬರೋಬ್ಬರಿ 36 ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಸಂಗ್ರಹ ಮಾಡಲಾಗಿದೆ. ಪಟ್ಟಣಗೆರೆ ಶೆಡ್ ನಿಂದ ಆರ್ ಆರ್ ನಗರ ಮುಖ್ಯರಸ್ತೆ, ನಾಯಂಡಹಳ್ಳಿ ಜಂಕ್ಷನ್ ಗೆ ಬಂದಿದ್ದ ಕಾರುಗಳು, ನಾಯಂಡಹಳ್ಳಿ ಯಿಂದ ಸುಮ್ಮನಹಳ್ಳಿ ಮಾರ್ಗವಾಗಿ ಹೋಗಿದ್ದ ಆರೋಪಿಗಳು, ಸುಮನಹಳ್ಳಿ ಮಾರ್ಗವಾಗಿ ನೇರವಾಗಿ ಹೋಗಿ ರಾಜ್ ಕುಮಾರ್ ರೋಡ್ ನಲ್ಲಿ ತಿರುಗಿದ್ದರು. ಆ ಬಳಿಕ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ರಾಜಕಾಲುವೆ ಬಳಿ ಬಂದಿದ್ದ ಆರೋಪಿಗಳು, ಅಪಾರ್ಟ್ಮೆಂಟ್ ರೋಡ್ ನಲ್ಲಿ ಹೋಗಿ ಯೂಟರ್ನ್ ತೆಗೆದುಕೊಂಡಿದ್ದರು, ಹೀಗೆ ರಸ್ತೆಯ ಕೊನೆಗೆ ಹೋಗಿ ಮತ್ತೆ ಯೂ ಟರ್ನ್ ತೆಗೆದುಕೊಂಡಾಗ ಮೊದಲು ಪಾಸ್ ಆಗಿದ್ದ ಪ್ರದೂಶ್ ಅಂಡ್ ವಿನಯ್ ಕಾಲುವೆಗೆ ಮೊಬೈಲ್ ಬಿಸಾಡಿದ್ದ, ಆ ಬಳಿಕ ಹಿಂದಿದ್ದ ಆರೋಪಿಗಳು ಮೃತದೇಹ ಎಸೆದು ಎಸ್ಕೇಪ್ ಹೋಗುವಾಗ ಒಂದೇ ದಾರಿಯಲ್ಲಿ ಹೋಗಿ ಬರುವಾಗ ಬದಲಿ ಮಾರ್ಗಗಳನ್ನ ಬಳಸಿದ್ದರು.

ತ್ವರಿತ ಗತಿಯಲ್ಲಿ ಪ್ರಕರಣದ ತನಿಖೆ ಮುಗಿಸಲು ಪೊಲೀಸರು ಯೋಜನೆ ಹಾಕಿಕೊಂಡಿದ್ದಾರೆ.
ಮುಂದಿನ 50ರಿಂದ 60ದಿನಗಳೊಳಗೆ ಚಾರ್ಜ್‌ ಶೀಟ್ ಸಿದ್ದತೆಗೆ ಯೋಜನೆ ಹಾಕಲಾಗಿದೆ. 6-8 ತಿಂಗಳ ಒಳಗೆ ವಿಚಾರಣೆ ಪ್ರಕ್ರಿಯೆಯನ್ನೇ ಮುಗಿಸುವ ಆಲೋಚನೆಯಲ್ಲಿದ್ದಾರೆ ಪೊಲೀಸರು. ಪ್ರಕರಣದಲ್ಲಿ ಆರೋಪಿಗಳ ಬಂಧನ ವೇಳೆ ಸಾಕಷ್ಟು ಒತ್ತಡಗಳಿದ್ದವು, ಹಾಗೆಯೇ ತನಿಖೆ ಸಮಯದಲ್ಲಿಯೂ ಸಾಕಷ್ಟು ಒತ್ತಡಗಳು ಬಂದಿದ್ದವು. ಇದನ್ನೆಲ್ಲ ಪರಿಗಣಿಸಿ ಆದಷ್ಟು ತ್ವರಿತವಾಗಿ ಜಾರ್ಜ್ ಶೀಟ್ ಅನ್ನು ಬೇಗನೆ ಹಾಕಲು ಸಿದ್ಧತೆ ನಡೆಸಲಾಗಿದೆ. ಚಾರ್ಜ್ ಶೀಟ್ ಸಲ್ಲಿಸಲು ತಡ ಮಾಡಿದರೆ ಸಾಕ್ಷ್ಯಗಳ ಮೇಲೆ ಆರೋಪಿಗಳು ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ