‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ

Ravichandran Birthday: ಕನ್ನಡ ಚಿತ್ರರಂಗದ ಕನಸುಗಾರ ವಿ. ರವಿಚಂದ್ರನ್ ಅವರ ಹುಟ್ಟುಹಬ್ಬದ ಸಂಭ್ರಮ. 1991ರ 'ಶಾಂತಿ ಕ್ರಾಂತಿ' ಸಿನಿಮಾ ಅವರಿಗೆ ದೊಡ್ಡ ಆರ್ಥಿಕ ಸಂಕಷ್ಟ ತಂದಿತ್ತು. ಕೋಟ್ಯಂತರ ರೂಪಾಯಿ ವೆಚ್ಚದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಾಗ, ಅವರು 15 ವರ್ಷಗಳ ಕಾಲ ಸಾಲದ ಸುಳಿಯಲ್ಲಿ ಸಿಲುಕಿದರು. ಆದರೆ, ರವಿಚಂದ್ರನ್ ತಮ್ಮ ಛಲದಿಂದ ಈ ಸವಾಲನ್ನು ಮೆಟ್ಟಿ ನಿಂತು, ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.

‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ
ರವಿಚಂದ್ರನ್

Updated on: May 30, 2026 | 9:05 AM

ಕನ್ನಡ ಚಿತ್ರರಂಗದ ‘ಕನಸುಗಾರ’ ಎಂದೇ ಖ್ಯಾತರಾದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಚಿತ್ರರಂಗದಲ್ಲಿ ಸದಾ ಹೊಸತನ, ಭವ್ಯತೆ ಹಾಗೂ ಅದ್ದೂರಿತನಕ್ಕೆ ಹೆಸರಾದ ರವಿಚಂದ್ರನ್ ಅವರ ಬದುಕಿನಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಆರ್ಥಿಕವಾಗಿ ಈ ಚಿತ್ರ ರವಿಚಂದ್ರನ್ ಅವರನ್ನು ಸಾಲದ ಸುಳಿಗೆ ದೂಡಿತ್ತು. ಅವರ ಜನ್ಮದಿನದ ಈ ಸಂದರ್ಭದಲ್ಲಿ ಆ ದಿನಗಳ ಒಂದು ಮೆಲುಕು ಇಲ್ಲಿದೆ.

1991ರಲ್ಲಿ ತೆರೆಕಂಡ ‘ಶಾಂತಿ ಕ್ರಾಂತಿ’ ಚಿತ್ರವು ಕನ್ನಡ ಸೇರಿದಂತೆ ಒಟ್ಟು 3 ಭಾಷೆಗಳಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿತ್ತು. ಚಿತ್ರದ ಭವ್ಯತೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದಾಗ ರವಿಚಂದ್ರನ್ ಅವರು ದೊಡ್ಡ ಸಾಲದ ಸುಳಿಗೆ ಸಿಲುಕಿದರು. ಆರಂಭದಲ್ಲಿ ಸಿನಿಮಾ ವರ್ಕ್ ಆಗಲ್ಲ ಎಂಬುದು ಗೊತ್ತಾದಾಗ ಚಿತ್ರೀಕರಣವನ್ನು ಅರ್ಧಕ್ಕೇ ನಿಲ್ಲಿಸಿಬಿಡುವ ಆಲೋಚನೆ ಹಾಗೂ ಯೋಜನೆಗಳೂ ಕೂಡ ಮೂಡಿದ್ದವು. ಆದರೆ ತಂದೆಯ ನಿರ್ದೇಶನದಂತೆ ಛಲ ಬಿಡದೆ ಸಿನಿಮಾ ಪೂರ್ಣಗೊಳಿಸಿದ್ದರು.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ರವಿಚಂದ್ರನ್, ‘ಶಾಂತಿ ಕ್ರಾಂತಿ ಚಿತ್ರದಿಂದ ಆದ ಸಾಲ ಸಣ್ಣದೇನಲ್ಲ. ಆ ಸಾಲವನ್ನು ಸಂಪೂರ್ಣವಾಗಿ ತೀರಿಸಲು ನನಗೆ ಬರೋಬ್ಬರಿ 15 ವರ್ಷಗಳ ಸುದೀರ್ಘ ಸಮಯ ಬೇಕಾಯಿತು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸಿನಿಮಾ ಸೋತರೂ ಧೃತಿಗೆಡದ ಅವರು ಸತತ ಪರಿಶ್ರಮ ಹಾಗೂ ಮುಂದಿನ ಚಿತ್ರಗಳ ಮೂಲಕ ಆ ಸಾಲವನ್ನು ಮೆಟ್ಟಿ ನಿಂತರು.

ಇದನ್ನೂ ಓದಿ: ‘ಸಿಂಪತಿ ಬೇಡ, ಸೋಲು ಪದ ಕೇಳಿದ್ರೆ ಸಿಟ್ಟು ಬರುತ್ತೆ’; ರವಿಚಂದ್ರನ್

ಸಿನಿಮಾ ಮೇಲಿನ ಅತಿಯಾದ ಪ್ರೀತಿಯಿಂದಾಗಿ ಇಂತಹ ನಷ್ಟಗಳನ್ನು ಎದುರಿಸಿದರೂ, ಕನ್ನಡ ಚಿತ್ರರಂಗದ ಭವ್ಯತೆಯನ್ನು ದೇಶಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ರವಿಚಂದ್ರನ್ ಅವರದ್ದು. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನೆಚ್ಚಿನ ನಟನಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:03 am, Sat, 30 May 26

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us