ವಿಜಯ್ ರಾಘವೇಂದ್ರ ‘ರುದ್ರಾಭಿಷೇಕಂ’ ಹಾಡು ಬಿಡುಗಡೆ: ಗಮನ ಸೆಳೆದ ‘ನವರತ್ನ’ಗಳು

Rudrabhishekam Kannada movie: ವಿಜಯ್ ರಾಘವೇಂದ್ರ ನಟಿಸಿರುವ ಭಿನ್ನ ಕತೆಯುಳ್ಳ ‘ರುದ್ರಾಭಿಷೇಕಂ’ ಸಿನಿಮಾದ ಹಾಡೊಂದು ಇಂದು ಬಿಡುಗಡೆ ಆಯ್ತು. ಆಡಿಯೋ ಲಾಂಚ್​​ನಲ್ಲಿ ಸಿನಿಮಾದ ನಿರ್ಮಾಪಕರುಗಳು ಗಮನ ಸೆಳೆದರು. ಒಂಬತ್ತು ಮಂದಿ ಕೃಷಿಕ ಗೆಳೆಯರು ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ವಿಶಿಷ್ಟವಾದ ಸಿನಿಮಾ ಇದಾಗಿದೆ. ಮಾಹಿತಿ ಇಲ್ಲಿದೆ...

ವಿಜಯ್ ರಾಘವೇಂದ್ರ ‘ರುದ್ರಾಭಿಷೇಕಂ’ ಹಾಡು ಬಿಡುಗಡೆ: ಗಮನ ಸೆಳೆದ ‘ನವರತ್ನ’ಗಳು
Rudrabishekam

Updated on: May 09, 2026 | 8:12 PM

ವಿಜಯ್ ರಾಘವೇಂದ್ರ (Vijay Raghavendra) ನಟಿಸಿರುವ ‘ರುದ್ರಾಭಿಷೇಕಂ’ ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹಾಡೊಂದು ಇಂದು (ಮೇ 09) ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ನಗರದ ಜಿಟಿ ಮಾಲ್​​ನಲ್ಲಿ ಅದ್ಧೂರಿಯಾಗಿ ಆಯೋಜಿಸಿತ್ತು. ವಿಜಯ್ ರಾಘವೇಂದ್ರ, ಸಂಗೀತ ನಿರ್ದೇಶಕ ವಿ ಮನೋಹರ್ ಸೇರಿದಂತೆ ಚಿತ್ರತಂಡದ ಹಲವು ಪ್ರಮುಖರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ‘ನ್ಯಾಚುರಲ್ ಸ್ಟಾರ್’ ಎಂಬ ಬಿರುದನ್ನು ಸಹ ನೀಡಲಾಯ್ತು. ಭಿನ್ನ ಕತೆಯುಳ್ಳ ಈ ಸಿನಿಮಾವನ್ನು ‘ನವರತ್ನ’ಗಳು ನಿರ್ಮಾಣ ಮಾಡಿರುವುದು ವಿಶೇಷ.

‘ರುದ್ರಾಭಿಷೇಕಂ’, ಹೆಸರೇ ಸೂಚಿಸುತ್ತಿರುವಂತೆ ಪೌರಾಣಿಕ ಹಿನ್ನೆಲೆಯುಳ್ಳ, ಗ್ರಾಮ್ಯ ಕತೆಯನ್ನು ಸಿನಿಮಾ ಒಳಗೊಂಡಿದ್ದು, ವಿಜಯ್ ರಾಘವೇಂದ್ರ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ರೊಮ್ಯಾಂಟಿಕ್ ಹಾಡೊಂದನ್ನು ಚಿತ್ರತಂಡ ಒಟ್ಟಿಗೆ ಬಿಡುಗಡೆ ಮಾಡಿದ್ದು, ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಿನಿಮಾದ ಒಂಬತ್ತು ನಿರ್ಮಾಪಕರು ಗಮನ ಸೆಳೆದರು. ಸಿನಿಮಾದ ಸಂಗೀತ ನಿರ್ದೇಶಕ ವಿ ಮನೋಹರ್, ಒಂಬತ್ತು ಉತ್ಸಾಹಿ ನಿರ್ಮಾಪಕರನ್ನು ‘ನವರತ್ನ’ಗಳೆಂದು ಕರೆದು ಕೊಂಡಾಡಿದರು.

‘ರುದ್ರಾಭಿಷೇಕಂ’ ಸಿನಿಮಾವನ್ನು ಒಂಬತ್ತು ಮಂದಿ ಗೆಳೆಯರು ಸೇರಿ ನಿರ್ಮಿಸಿದ್ದಾರೆ. ವಿಶೇಷವೆಂದರೆ ಆ ಒಂಬತ್ತೂ ಮಂದಿಯೂ ಕೃಷಿಯ ಹಿನ್ನೆಲೆಯಿಂದ ಬಂದವರು. ಕೃಷಿಕರೇ ಸೇರಿ ನಿರ್ಮಾಣ ಮಾಡಿರುವ ಸಿನಿಮಾ ‘ರುದ್ರಾಭಿಷೇಕಂ’. ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ಸಿನಿಮಾದ ಬಗೆಗಿನ ತಮ್ಮ ಪ್ರೀತಿ, ಆಸಕ್ತಿಯನ್ನು ವಿವರಿಸಿದರು. ನಾಯಕ ವಿಜಯ್ ರಾಘವೇಂದ್ರ, ನಾಯಕಿ ಪ್ರಿಯಾಂಕಾ ಸೇರಿದಂತೆ ಇತರೆ ಕಲಾವಿದರು, ತಂತ್ರಜ್ಞರು ನೀಡಿದ ಬೆಂಬಲ, ಸಿನಿಮಾ ನಿರ್ಮಾಣದಲ್ಲಿ ಹಾಕಿದ ಶ್ರಮವನ್ನು ಕೊಂಡಾಡಿದರು.

ಇದನ್ನೂ ಓದಿ:ವೀರಗಾಸೆ ವೇಷದಲ್ಲಿ ವಿಜಯ್ ರಾಘವೇಂದ್ರ: ‘ರುದ್ರಾಭಿಷೇಕಂ’ ಅದ್ಧೂರಿ ಕ್ಲೈಮ್ಯಾಕ್ಸ್

ನಟ ವಿಜಯ್ ರಾಘವೇಂದ್ರ ಮಾತನಾಡಿ, ಇಂಥಹಾ ಒಂದು ಪಾತ್ರದಲ್ಲಿ ನಟಿಸಲು ಬಹಳ ವರ್ಷಗಳಿಂದಲೂ ಕಾಯುತ್ತಿದ್ದುದಾಗಿ ಹೇಳಿದರು. ಸಿನಿಮಾನಲ್ಲಿ ಅವರು ಹಲವು ಶೇಡ್​​ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಅದರಲ್ಲೂ ವೀರಗಾಸೆಯ ಲುಕ್ ಹಾಗೂ ವೀರಗಾಸೆಯ ದೃಶ್ಯಗಳು ಇಡೀ ಸಿನಿಮಾದ ಹೈಲೆಟ್ ಎಂದರು. ನಿರ್ಮಾಪಕರು ತಮಗಿತ್ತ ಸಹಕಾರ, ನೋಡಿಕೊಂಡ ರೀತಿಯನ್ನು ಕೊಂಡಾಡಿದ ಅವರು ಇಂಥಹಾ ನಿರ್ಮಾಪಕರುಗಳು ಚಿತ್ರರಂಗಕ್ಕೆ ಬೇಕೆಂದರು.

ನಾಯಕಿ ಪ್ರಿಯಾಂಕಾ ತಿಮ್ಮೇಶ್, ನಿರ್ದೇಶಕ ವಸಂತ್ ಕುಮಾರ್, ಸಂಗೀತ ನಿರ್ದೇಶಕ ವಿ ಮನೋಹರ್, ನಟ ಬಾಲರಾಜ್ವಾಡಿ ಇನ್ನೂ ಹಲವರು ಸಿನಿಮಾದ ಬಗ್ಗೆ, ಸಿನಿಮಾ ಶೂಟಿಂಗ್​​ನ ಅನುಭವಗಳ ಬಗ್ಗೆ ಮಾತನಾಡಿದರು. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ವತಿಯಿಂದ ನಿರ್ಮಾಣ ಮಾಡಲಾಗಿದ್ದು, ಲಾಯರ್ ಜಯರಾಮ್, ವೆಂಕಟೇಶ್, ಮಂಜುನಾಥ್, ರವಿಕುಮಾರ್, ಸುರೇಶ್ ಬಾಬು, ಚಿದಾನಂದ ಮೂರ್ತಿ, ಅಶ್ವತ್ಥನಾರಾಯಣ, ಶಿವಕುಮಾರ್, ಕುಸುಮಾ ವಸಂತ್ ಅವರುಗಳು ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us