ನಿರ್ದೇಶಕ ಸಂಗೀತ್​ ಶಿವನ್​ ನಿಧನ; ಅನಾರೋಗ್ಯದಿಂದ 61ನೇ ವಯಸ್ಸಿಗೆ ವಿಧಿವಶ

ಸಿನಿಮಾ ನಿರ್ದೇಶಕ ಸಂಗೀತ್​ ಶಿವನ್​ ಅವರು ಇಂದು (ಮೇ 8) ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ್​ ಶಿವನ್​ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ. ತುಷಾರ್​ ಕಪೂರ್​, ರಿತೇಶ್​ ದೇಶಮುಖ್​ ಮುಂತಾದ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ನಿರ್ದೇಶಕ ಸಂಗೀತ್​ ಶಿವನ್​ ನಿಧನ; ಅನಾರೋಗ್ಯದಿಂದ 61ನೇ ವಯಸ್ಸಿಗೆ ವಿಧಿವಶ
ಸಂಗೀತ್​ ಶಿವನ್​

Updated on: May 08, 2024 | 10:57 PM

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಹೊಂದಿದ್ದ ನಿರ್ದೇಶಕ ಸಂಗೀತ್​ ಶಿವನ್ (Sangeeth Sivan)​ ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು 61ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಇಂದು (ಮೇ 8) ಕೊನೆಯುಸಿರು ಎಳೆದಿದ್ದಾರೆ. ಸಂಗೀತ್​ ಶಿವನ್​ ಅವರ ನಿಧನಕ್ಕೆ (Sangeeth Sivan Death) ಅನೇಕ ಸೆಲೆಬ್ರಿಟಿಗಳು ಕಂಬಿನಿ ಮಿಡಿದಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಸಂಗೀತ್​ ಶಿವನ್​ ಅವರು ಮೂಲತಃ ಕೇರಳದ ತಿರುವನಂತಪುರಂನವರು. 1989ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆಮಿರ್​ ಖಾನ್​ ನಟನೆಯ ‘ರಾಖ್​’ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಅವರು ಕೆಲಸ ಆರಂಭಿಸಿದರು. ಬಳಿಕ 1990ರಲ್ಲಿ ಮಲಯಾಳಂನ ‘ವ್ಯೂಹಂ’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದರು. ಮೋಹನ್​ಲಾಲ್​ ನಟನೆಯ ‘ಯೋಧ’ ಸಿನಿಮಾಗೆ ನಿರ್ದೇಶನ ಮಾಡಿ ಅವರು ಗುರುತಿಸಿಕೊಂಡರು.

ಇದನ್ನೂ ಓದಿ: ಸೌಂದರ್ಯ ಜಗದೀಶ್​ ಸಾವಿನ ಹಿಂದಿರುವ 2 ಅನುಮಾನದ ಬಗ್ಗೆ ಸ್ನೇಹಿತರ ಸ್ಪಷ್ಟನೆ

ಬಾಲಿವುಡ್​ನಲ್ಲಿ ಸಂಗೀತ್​ ಶಿವನ್​ ಅವರು ತಮ್ಮದೇ ಚಾಪು ಮೂಡಿಸಿದ್ದರು. ‘ಚುರಾ ಲಿಯಾ ಹೈ ತುಮ್ ನೇ’, ‘ಕ್ಯಾ ಕೂಲ್​ ಹೈ ಹಮ್​’, ‘ಅಪ್ನ ಸಪ್ನ ಮನಿ ಮನಿ’, ‘ಯಮ್ಲಾ ಪಗ್ಲ ದೀವಾನ 2’ ಮುಂತಾದ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು. ಮಲಯಾಳಂನ ‘ರೋಮಾಂಚಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡಲು ಅವರು ಮುಂದಾಗಿದ್ದರು. ಆ ಕೆಲಸ ಪೂರ್ಣಗೊಳ್ಳುವುದಕ್ಕೂ ಮೊದಲೇ ಅವರು ನಿಧನರಾಗಿರುವುದು ನೋವಿನ ಸಂಗತಿ.

ಸುನೀಲ್​ ಶೆಟ್ಟಿ, ರಿತೇಶ್​ ದೇಶಮುಖ್​, ಜಾಕಿ ಶ್ರಾಫ್​, ಸೆಲಿನಾ ಜೇಟ್ಲಿ, ಚಂಕಿ ಪಾಂಡೆ, ರಾಜ್​ಪಾಲ್​ ಯಾದವ್​, ತುಷಾರ್​ ಕಪೂರ್​, ಇಶಾ ಕೊಪ್ಪಿಕರ್​, ನೇಹಾ ದೂಪಿಯಾ, ಅನುಪಮ್​ ಖೇರ್​ ಮುಂತಾದ ಸೆಲೆಬ್ರಿಟಿಗಳ ಜೊತೆ ಸಂಗೀತ್​ ಶಿವನ್​ ಕೆಲಸ ಮಾಡಿದ್ದರು. ನಿರ್ದೇಶಕನ ಅಗಲಿಕೆಗೆ ರಿತೇಶ್​ ದೇಶಮುಖ್​ ಸಂತಾಪ ಸೂಚಿಸಿದ್ದಾರೆ. ‘ಸಂಗೀತ್​ ಶಿವನ್​ ಸರ್​ ಇನ್ನಿಲ್ಲ ಎಂಬುದು ತಿಳಿದು ಶಾಕ್​ ಆಯಿತು. ಅವರು ತುಂಬ ಒಳ್ಳೆಯ ವ್ಯಕ್ತಿ ಆಗಿದ್ದರು. ಅವರ ಕುಟುಂಬದವರಿಗೆ ನನ್ನ ಸಂತಾಪಗಳು. ಅವರನ್ನು ಮತ್ತು ಅವರ ನಗುವನ್ನು ಮಿಸ್​ ಮಾಡಿಕೊಳ್ಳುತ್ತೇನೆ’ ಎಂದು ರಿತೇಶ್​ ದೇಶಮುಖ್​ ಟ್ವೀಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us