‘ಧುರಂಧರ್’ ಯಶಸ್ಸು ಸಹಿಸದವರಿಂದ ರಣ್ವೀರ್ ಸಿಂಗ್ ವಿರುದ್ಧ ಪಿತೂರಿ’

Ban on Ranveer Singh: ರಣ್ವೀರ್ ಸಿಂಗ್ ಮೇಲೆ ಹೇರಲಾಗಿರುವ ಅನಧಿಕೃತ ನಿಷೇಧದ ಬಗ್ಗೆ ಚಿತ್ರರಂಗಕ್ಕೆ ಸಂಬಂಧಿಸಿದವರು ನಾನಾ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖ್ಯಾತ ಲೇಖಕಿ ಶೋಭಾ ಡೇ ಸಹ ಈ ಬಗ್ಗೆ ಮಾತನಾಡಿದ್ದು, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಯಶಸ್ಸನ್ನು ತಡೆದುಕೊಳ್ಳಲಾಗದು ಕೆಲವರು ರಣ್ವೀರ್ ಸಿಂಗ್ ವಿರುದ್ಧ ಹೀಗೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

‘ಧುರಂಧರ್’ ಯಶಸ್ಸು ಸಹಿಸದವರಿಂದ ರಣ್ವೀರ್ ಸಿಂಗ್ ವಿರುದ್ಧ ಪಿತೂರಿ’
Ranveer Singh

Updated on: May 29, 2026 | 3:35 PM

ಡಾನ್ 3’ (Don 3) ಸಿನಿಮಾದ ಒಪ್ಪಂದ ಮುರಿದು ಚಿತ್ರದಿಂದ ಹೊರನಡೆದ ಕಾರಣ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಅಸಹಕಾರವನ್ನು ಸಿನಿಮಾ ನೌಕರರ ಸಂಘ ಘೋಷಿಸಿದೆ. ರಣ್ವೀರ್ ಸಿಂಗ್ ಅವರು ಒಪ್ಪಂದ ಮುರಿದಿದ್ದು ಮಾತ್ರವಲ್ಲದೆ ಸಿನಿಮಾದ ಪ್ರೀ ಪ್ರೊಡಕ್ಷನ್​​ಗೆ ಆಗಿರುವ ಖರ್ಚನ್ನು ಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಸಿನಿಮಾದ ನಿರ್ಮಾಪಕ ಫರ್ಹಾನ್ ಅಖ್ತರ್ ಸಿನಿಮಾ ಒಕ್ಕೂಟಕ್ಕೆ ದೂರು ನೀಡಿದ್ದರು. ಈಗ ರಣ್ವೀರ್ ಸಿಂಗ್ ಮೇಲೆ ಹೇರಲಾಗಿರುವ ಅನಧಿಕೃತ ನಿಷೇಧದ ಬಗ್ಗೆ ಚಿತ್ರರಂಗಕ್ಕೆ ಸಂಬಂಧಿಸಿದವರು ನಾನಾ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖ್ಯಾತ ಲೇಖಕಿ ಶೋಭಾ ಡೇ ಸಹ ಈ ಬಗ್ಗೆ ಮಾತನಾಡಿದ್ದು, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಯಶಸ್ಸನ್ನು ತಡೆದುಕೊಳ್ಳಲಾಗದು ಕೆಲವರು ರಣ್ವೀರ್ ಸಿಂಗ್ ವಿರುದ್ಧ ಹೀಗೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಶೋಭಾ ಡೇ, ಫರ್ಹಾನ್ ಅಖ್ತರ್ ಅವರೊಂದಿಗಿನ ಈ ವಿವಾದವನ್ನು ರಣವೀರ್ ಸಿಂಗ್ ಅತ್ಯಂತ ಪ್ರಬುದ್ಧತೆಯಿಂದ ನಿಭಾಯಿಸುತ್ತಿರುವುದನ್ನು ಶ್ಲಾಘಿಸಿದ್ದಾರೆ. ಚಲನಚಿತ್ರ ಕಾರ್ಮಿಕರ ಒಕ್ಕೂಟವಾದ ಎಫ್​​ಡಬ್ಲುಐಸಿಇ (FWICE) ರಣವೀರ್ ವಿರುದ್ಧ ಕೈಗೊಂಡಿರುವ ಅಸಹಕಾರ ನಿರ್ಧಾರವು ಕೇವಲ ರಣವೀರ್ ಅವರನ್ನಷ್ಟೇ ಅಲ್ಲದೆ, ಇತ್ತೀಚೆಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಆದಿತ್ಯ ಧರ್ ಮತ್ತು ಅವರ ತಂಡವನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ವ್ಯವಸ್ಥಿತ ಸಂಚು ಎಂದು ಅವರು ಹೇಳಿದ್ದಾರೆ.

ತಮ್ಮ ವಿಡಿಯೋದಲ್ಲಿ ಈ ವಿವಾದವನ್ನು ದೆಹಲಿಯ ಪ್ರಸಿದ್ಧ ‘ಜಿಮ್ಖಾನಾ ಕ್ಲಬ್’ ವಿವಾದಕ್ಕೆ ಹೋಲಿಸಿರುವ ಶೋಭಾ ಡೇ, ‘ಇದೆಲ್ಲವೂ ಅಧಿಕಾರ, ನಿಯಂತ್ರಣ ಮತ್ತು ಜನರನ್ನು ಹತ್ತಿಕ್ಕುವ ಆಟವಾಗಿದೆ. ರಣವೀರ್ ಸಿಂಗ್ ಅತ್ಯಂತ ಬುದ್ಧಿವಂತ ಮತ್ತು ಸರಿಯಾದ ಮಾರ್ಗದರ್ಶನ ಹೊಂದಿರುವ ನಟ. ಅವರು ಈ ವಿಷಯದಲ್ಲಿ ಸಂಪೂರ್ಣ ಮೌನ ಕಾಯ್ದುಕೊಂಡಿದ್ದಾರೆ. ತಮ್ಮ ಅಭಿಮಾನಿಗಳೇ ತಮ್ಮ ಪರವಾಗಿ ಹೋರಾಡುವಂತೆ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಒಕ್ಕೂಟವು ದೇಶದ ಅತ್ಯಂತ ಯಶಸ್ವಿ ನಟನಿಗೆ ಸ್ಟುಡಿಯೋ ಪ್ರವೇಶಿಸದಂತೆ ತಡೆಯುವ ಮೂಲಕ ತಮಗೆ ತಾವೇ ಪ್ರಾಮುಖ್ಯತೆ ತಂದುಕೊಳ್ಳಲು ಯತ್ನಿಸುತ್ತಿದೆ. ಆದರೆ ಇದರಿಂದಾಗಿ ಯಾವುದೇ ತಪ್ಪಿಲ್ಲದ ಎಷ್ಟೋ ತಂತ್ರಜ್ಞರು ಮತ್ತು ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಒಂದು ವೇಳೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್, ಫರ್ಹಾನ್ ಅಖ್ತರ್ ಮತ್ತು ರಣವೀರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೆ, ಅವರು ವಕೀಲರನ್ನು ನೇಮಿಸಿಕೊಂಡು ನ್ಯಾಯಾಲಯಕ್ಕೆ ಹೋಗಬೇಕಿತ್ತೇ ವಿನಃ ಇಂತಹ ಚಿತ್ರರಂಗದ ಸಂಘಟನೆಗಳನ್ನು ಮಧ್ಯೆ ತರಬಾರದಿತ್ತು’ ಎಂದು ಶೋಭಾ ಡೇ ಕಿಡಿಕಾರಿದ್ದಾರೆ.

ಇದನ್ನೂ ಓದಿ:

‘ಧುರಂಧರ್’ ಚಿತ್ರದ ಭಾರಿ ಯಶಸ್ಸಿನ ನಂತರ ನಿರ್ದೇಶಕ ಆದಿತ್ಯ ಧರ್ ಅವರು ಬಾಲಿವುಡ್‌ನ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದ್ದಾರೆಯೇ? ಎಂದು ಪ್ರಶ್ನಿಸಿರುವ ಶೋಭಾ, ರಣವೀರ್ ಮೌನವಾಗಿರುವುದೇ ಅವರ ಬ್ರ್ಯಾಂಡ್ ಮೌಲ್ಯ ಮತ್ತು ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊನೆಯಲ್ಲಿ ಅವರು ಫರ್ಹಾನ್ ಅಖ್ತರ್ ಅವರಿಗೆ ಈ ಸಮಸ್ಯೆಯನ್ನು ಕಾನೂನುಬದ್ಧವಾಗಿ ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ಅವರನ್ನು ನಾಯಕನನ್ನಾಗಿ 2023 ರಲ್ಲಿ ಘೋಷಿಸಲಾಗಿತ್ತು. ಆದರೆ, ಆದಿತ್ಯ ಧರ್ ಅವರ ‘ಧುರಂಧರ್’ ಚಿತ್ರದ ದೊಡ್ಡ ಯಶಸ್ಸಿನ ನಂತರ, ಡಿಸೆಂಬರ್ 2025 ರಲ್ಲಿ ರಣವೀರ್ ಸಿಂಗ್ ಹಠಾತ್ ಆಗಿ ‘ಡಾನ್ 3’ ಚಿತ್ರದಿಂದ ಹೊರನಡೆದರು. ಇದರಿಂದ ತಮಗೆ 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ನಿರ್ಮಾಪಕ ಫರ್ಹಾನ್ ಅಖ್ತರ್ ಕಳೆದ ಏಪ್ರಿಲ್‌ನಲ್ಲಿ ಸಿನಿಮಾ ನೌಕರರ ಒಕ್ಕೂಟದ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ ಒಕ್ಕೂಟವು ರಣವೀರ್ ಸಿಂಗ್ ವಿರುದ್ಧ ಅಸಹಕಾರದ ನಿರ್ದೇಶನವನ್ನು ಹೊರಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us