ರಣವೀರ್ ಸಿಂಗ್, ಫರ್ಹಾನ್ ಅಖ್ತರ್ ನಡುವಿನ ಜಗಳ ಬಿಡಿಸಲು ಸಲ್ಮಾನ್ ಖಾನ್ ಎಂಟ್ರಿ?
‘ಡಾನ್ 3’ ಸಿನಿಮಾಗೆ ಸಂಬಂಧಿಸಿದ ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ನಡುವಿನ ವಿವಾದ ಬಗೆಹರಿಸಲು ಸಲ್ಮಾನ್ ಖಾನ್ ಅವರು ಮಧ್ಯಸ್ಥಿಕೆ ವಹಿಸಿದ್ದಾರೆ ಎನ್ನಲಾಗಿದೆ. ವಿವಾದದ ಬಿಸಿ ತಣ್ಣಗಾದ ಮೇಲೆ, ಇಬ್ಬರೂ ಒಂದೇ ಚಿತ್ರರಂಗದ ಭಾಗ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಒಟ್ಟಿಗೆ ಮತ್ತೊಂದು ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುವಂತೆ ಸಲ್ಲು ಸಲಹೆ ನೀಡಿದ್ದಾರಂತೆ.

ಹಿಂದಿ ಚಿತ್ರರಂಗದಲ್ಲಿ ಯಾರಾದರೂ ಸಂಕಷ್ಟದಲ್ಲಿದ್ದರೆ ಮೊದಲು ಧಾವಿಸುವುದೇ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan). ಅದಕ್ಕಾಗಿಯೇ ಬಾಲಿವುಡ್ನ ಹಲವು ಮಂದಿಗೆ ಅವರು ಗಾಡ್ಫಾದರ್ ಆಗಿದ್ದಾರೆ. ಇದೀಗ ‘ಡಾನ್ 3’ (Don 3) ಚಿತ್ರದ ವಿಚಾರವಾಗಿ ನಟ ರಣವೀರ್ ಸಿಂಗ್ (Ranveer Singh) ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಇಡೀ ಹಿಂದಿ ಚಿತ್ರರಂಗವನ್ನು ಇಬ್ಭಾಗ ಮಾಡಿದೆ. ಆದರೆ, ಮೀಡಿಯಾ ಮುಂದೆ ಈ ವಿವಾದ ದೊಡ್ಡ ಸರ್ಕಸ್ ಆಗುವುದನ್ನು ತಡೆಯಲು ಸಲ್ಮಾನ್ ಖಾನ್ ಈಗ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
‘ಬಾಲಿವುಡ್ ಹಂಗಾಮಾ’ ವರದಿ ಮಾಡಿರುವ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ ರಣವೀರ್ ಸಿಂಗ್ ಮೇಲೂ ಪ್ರೀತಿಯಿದೆ ಹಾಗೂ ಅಖ್ತರ್ ಕುಟುಂಬದೊಂದಿಗೂ ಆತ್ಮೀಯ ಒಡನಾಟವಿದೆ. ಹೀಗಾಗಿ, ಅವರು ಇಬ್ಬರೊಂದಿಗೂ ಫೋನ್ನಲ್ಲಿ ಮಾತನಾಡಿ, ತಮ್ಮ ವೈಯಕ್ತಿಕ ಪ್ರಾಜೆಕ್ಟ್ಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
‘ಸಿನಿಮಾ ಇಂಡಸ್ಟ್ರಿಯಲ್ಲಿ ಕ್ರಿಯೇಟಿವ್ ಭಿನ್ನಾಭಿಪ್ರಾಯಗಳು ದಶಕಗಳಿಂದಲೂ ಸಾಮಾನ್ಯ ಎಂದು ಸಲ್ಮಾನ್ ಅವರು ಫರ್ಹಾನ್ ಅಖ್ತರ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದೇ ರೀತಿ ರಣವೀರ್ ಸಿಂಗ್ ಜೊತೆಯೂ ಸುದೀರ್ಘವಾಗಿ ಮಾತನಾಡಿ ಅವರ ನಿಲುವನ್ನು ಅರ್ಥಮಾಡಿಕೊಂಡಿದ್ದಾರೆ. ಯಾರೊಬ್ಬರಿಗೂ ಅನ್ಯಾಯವಾಗದಂತೆ ಈ ವಿವಾದವನ್ನು ಹತ್ತಿಕ್ಕಲು ಸಲ್ಮಾನ್ ಸಂಧಾನಕಾರನ ಪಾತ್ರ ವಹಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.
ಸಲ್ಮಾನ್ ಖಾನ್ ಅವರ ಈ ಮಾತನ್ನು ಫರ್ಹಾನ್ ಅಖ್ತರ್ ಮತ್ತು ರಣವೀರ್ ಸಿಂಗ್ ಇಬ್ಬರೂ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ದೊಡ್ಡ ವಿವಾದ ಸೃಷ್ಟಿಸದೆ ಕಾನೂನು ಹೋರಾಟ ಅಥವಾ ಚಲನಚಿತ್ರ ವಾಣಿಜ್ಯ ಮಂಡಳಿಗಳ ಮಧ್ಯಸ್ಥಿಕೆ ಇಲ್ಲದೆ ಪರಸ್ಪರ ಮಾತುಕತೆಯ ಮೂಲಕವೇ ಇತ್ಯರ್ಥಕ್ಕೆ ಬರಲು ಆಲೋಚಿಸುತ್ತಿದ್ದಾರೆ. ತಮ್ಮನ್ನು ಒಳಗೊಂಡಂತೆ, ಯಾವುದೇ ಮೂರನೇ ವ್ಯಕ್ತಿಯನ್ನು ಇದರಲ್ಲಿ ಎಳೆದು ತರದೆ ನೇರವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಲ್ಮಾನ್ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಚಿತ್ರರಂಗದಿಂದ ರಣವೀರ್ ಸಿಂಗ್ ಬ್ಯಾನ್; ಸಿನಿಮಾ ನೌಕರರ ಒಕ್ಕೂಟದಿಂದ ಕಠಿಣ ನಿರ್ಧಾರ
ಮತ್ತೊಂದೆಡೆ, ಸಿನಿಮಾ ತಡವಾಗಿದ್ದರಿಂದ ಫರ್ಹಾನ್ ಅಖ್ತರ್ ಅವರಿಗೆ ಆಗಿರುವ ಆರ್ಥಿಕ ನಷ್ಟಕ್ಕೆ ಸಲ್ಮಾನ್ ಬೆಂಬಲವಾಗಿ ನಿಂತಿದ್ದಾರೆ. ಹಾಗೆಯೇ, ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್ನಲ್ಲಿ ಐತಿಹಾಸಿಕ ಯಶಸ್ಸು ಸಾಧಿಸಿದ ‘ಧುರಂಧರ್’ ಚಿತ್ರದ ಗೆಲುವಿನ ಅಲೆಯನ್ನು ಬಳಸಿಕೊಂಡು ಹೊಸ ಪ್ರಾಜೆಕ್ಟ್ ಆರಂಭಿಸುವಂತೆ ರಣವೀರ್ ಸಿಂಗ್ ಅವರಿಗೂ ಸಲ್ಮಾನ್ ಖಾನ್ ಉತ್ತೇಜನ ನೀಡುತ್ತಿದ್ದಾರೆ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





