AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉಚಿತ ಎಲೆಕ್ಟ್ರಿಕ್ ಸ್ಟೌ’ ಸುಳ್ಳು ಸಂದೇಶ: ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ

ಕೇಂದ್ರದಿಂದ ‘ಉಚಿತ ಎಲೆಕ್ಟ್ರಿಕ್ ಸ್ಟೌ’ ವಿತರಣೆ ಎಂಬುದು ನಕಲಿ ಸಂದೇಶ ಎಂದು ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದು, MNRE ಹೆಸರಿನಲ್ಲಿ ಹರಡುತ್ತಿರುವ ಈ ಸುಳ್ಳು ಸುದ್ದಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಇಂತಹ ವಂಚನೆಗೆ ಒಳಗಾಗಬಾರದು. ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ, ಅಧಿಕೃತ ಮಾಹಿತಿಗಳಿಗೆ ಮಾತ್ರ ಒತ್ತು ನೀಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.

‘ಉಚಿತ ಎಲೆಕ್ಟ್ರಿಕ್ ಸ್ಟೌ’ ಸುಳ್ಳು ಸಂದೇಶ: ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ
ಸುಳ್ಳು ಸಂದೇಶ ನಂಬಿ ಮೋಸಹೋಗದಂತೆ ಪ್ರಲ್ಹಾದ್ ಜೋಶಿ ಕರೆImage Credit source: PTI
ಗಣಪತಿ ಶರ್ಮಾ
|

Updated on: Aug 17, 2026 | 12:03 PM

Share

ಮುಖ್ಯಾಂಶಗಳು

  • MNRE ಹೆಸರಿಲ್ಲಿ ನಕಲಿ ಸಂದೇಶ
  • ನಕಲಿ ಸಂದೇಶ ನಂಬದಿರಲು ಸಚಿವರ ಮನವಿ
  • ಸಾಮಾಜಿಕ ಜಾಲತಾಣಗಳಲ್ಲಿನ ಫೇಕ್ ಸಂದೇಶಗಳ ಮೇಲೆ ಕ್ಲಿಕ್ ಮಾಡದೇ ಇರಲು ಸಲಹೆ

ನವದೆಹಲಿ, ಆಗಸ್ಟ್ 17: ‘ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ಎಂಬುದು ನಕಲಿ ಸಂದೇಶವಾಗಿದ್ದು, ಸಾರ್ವಜನಿಕರು ಇದನ್ನು ನಂಬಿ ಮೋಸ ಹೋಗಬಾರದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಹೆಸರಿನಲ್ಲಿ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ, ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ‎ ಕೇಂದ್ರ ನವೀಕರಿಸಬಹುದಾದ ಇಲಾಖೆಯು ‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ಯೋಜನೆಯನ್ನು ಪರಿಚಯಿಸಿಲ್ಲ. ‎ನಾಗರಿಕರನ್ನು ದಾರಿ ತಪ್ಪಿಸುವ, ವಂಚಿಸುವ ಉದ್ದೇಶದಿಂದ ಕೆಲವರು MNRE ಹೆಸರಲ್ಲಿ ಹೀಗೆ ಸುಳ್ಳು ಸಂದೇಶಗಳನ್ನು ಹರಿ ಬಿಡುತ್ತಿದ್ದಾರೆ. ಇದೆಲ್ಲಾ ಫೇಕ್ ಆಗಿರುತ್ತದೆ ಎಂದು ನವೀಕರಿಸಬಹುದಾದ ಇಂಧನ ಸಚಿವರೂ ಆಗಿರುವ ಪ್ರಲ್ಹಾದ ಜೋಶಿ ಅವರೇ ಸ್ಪಷ್ಟಪಡಿಸಿದ್ದಾರೆ.

ಸಚಿವಾಲಯದ ಅಧಿಕೃತ ವೆಬ್​ಸೈಟ್, ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನಷ್ಟೇ ಗಮನಿಸಲು ಕರೆ

ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಹೆಸರಿನಲ್ಲಿ ನಕಲಿ ಸಂದೇಶಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ನಾಗರಿಕರು ಇಂಥ ನಕಲಿ ಸಂದೇಶಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಸಚಿವಾಲಯದ ಅಧಿಕೃತ ವೆಬ್‌ಸೈಟ್ ಮತ್ತು ಪರಿಶೀಲಿತ (Verified) ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ತಿಳಿಸಿದ್ದಾರೆ.

ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ: ಜೋಶಿ

ಸಾಮಾಜಿಕ ಜಾಲತಾಣಗಳಲ್ಲಿನ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಪರಿಶೀಲಿಸದೇ ಯಾವುದೇ ಸಂದೇಶಗಳನ್ನು ಫಾರ್ವರ್ಡ್ ಮಾಡಬಾರದು ಹಾಗೂ ಬ್ಯಾಂಕಿಂಗ್, ಹಣಕಾಸು ಅಥವಾ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಲೂಬಾರದು ಎಂದು ಎಚ್ಚರಿಸಿದ್ದಾರೆ.

ಯಾವುದೇ ಸುದ್ದಿ, ಸಂದೇಶಗಳ ಬಗೆಗೆ ಅಧಿಕೃತ ವೆಬ್ ಸೈಟ್ ಹಾಗೂ ಸುದ್ದಿ ಸಂಸ್ಥೆಗಳನ್ನಷ್ಟೇ ಅನುಸರಿಸಬೇಕು. ಸರ್ಕಾರದ ಯೋಜನೆಗಳಿಗೆ ಇಲಾಖಾ ಅಧಿಕೃತ ವೆಬ್ ಸೈಟ್, ಜಾಹೀರಾತು, ಮಾಧ್ಯಮ ಪ್ರಕಟಣೆಗಳನ್ನು ಮಾತ್ರ ನಂಬಬೇಕು. ನಕಲಿ ಸಂದೇಶಗಳಿಂದ ಜಾಗರೂಕರಾಗಿರಬೇಕು ಎಂದು ನಾಗರೀಕರಿಗೆ ಪ್ರಲ್ಹಾದ ಜೋಶಿ ಕಿವಿಮಾತು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us