ಹಿಂದೂ ಭಾವನೆಗೆ ಧಕ್ಕೆ; ರಾಜಮೌಳಿ ವಿರುದ್ಧ ದಾಖಲಾಯ್ತು ದೂರು

ನಿರ್ದೇಶಕ ಎಸ್.ಎಸ್. ರಾಜಮೌಳಿ 'ವಾರಣಾಸಿ' ಚಿತ್ರದ ಕಾರ್ಯಕ್ರಮದಲ್ಲಿ ತಾಂತ್ರಿಕ ದೋಷದಿಂದ ಹನುಮಂತ ದೇವರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇದು ಹಿಂದೂ ಭಾವನೆಗೆ ಧಕ್ಕೆ ತಂದಿದೆ ಎಂದು ರಾಷ್ಟ್ರೀಯ ವಾನರ ಸೇನಾ ದೂರು ದಾಖಲಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.

ಹಿಂದೂ ಭಾವನೆಗೆ ಧಕ್ಕೆ; ರಾಜಮೌಳಿ ವಿರುದ್ಧ ದಾಖಲಾಯ್ತು ದೂರು
ರಾಜಮೌಳಿ

Updated on: Nov 18, 2025 | 2:57 PM

ಖ್ಯಾತ ನಿರ್ದೇಶಕ ಎಸ್​ಎಸ್ ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಸಿನಿಮಾದ ದೊಡ್ಡ ಈವೆಂಟ್ ಆಯೋಜನೆ ಮಾಡಲಾಗಿತ್ತು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಈವೆಂಟ್ ನಡೆದಿತ್ತು. ಈ ವೇಳೆ ರಾಜಮೌಳಿ ಅವರು ಹಿಂದೂ ಭಾವನೆಗೆ ಧಕ್ಕೆ ತಂದ ಆರೋಪ ಹೊತ್ತಿದ್ದಾರೆ. ಅವರ ವಿರುದ್ಧ ದೂರು ಕೂಡ ದಾಖಲಾಗಿದೆ.

‘ವಾರಣಾಸಿ’ ಟೈಟಲ್ ಲಾಂಚ್ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸರಿಯಾದ ಸಮಯಕ್ಕೆ ಟೀಸರ್ ಪ್ರದರ್ಶನ ಮಾಡಲು ಸಾಧ್ಯವಾಗಲೇ ಇಲ್ಲ. ಈ ಬಗ್ಗೆ ರಾಜಮೌಳಿಗೆ ಬೇಸರ ಉಂಟಾಗಿದೆ. ಹೀಗಾಗಿ, ಹನುಮಾನ್ ದೇವರನ್ನು ರಾಜಮೌಳಿ ದೂಷಿಸಿದರು. ‘ಹನುಮಂತ ಒಳ್ಳೇದು ಮಾಡ್ತಾನೆ ಎಂದು ತಂದೆ ಹೇಳಿದ್ರು. ಆದರೆ, ಒಳ್ಳೇದು ಮಾಡೋದು ಅಂದ್ರೆ ಹೀಗೇನಾ’ ಎಂದು ರಾಜಮೌಳಿ ಪ್ರಶ್ನೆ ಮಾಡಿದ್ದರು.

ತಾಂತ್ರಿಕ ದೋಷ ಉಂಟಾಗಿದ್ದಕ್ಕೆ ಹನುಮಂತ ಕಾರಣ ಎಂದು ರಾಜಮೌಳಿ ಹೇಳಿದ್ದರು. ಇದರಿಂದ ಸಿಟ್ಟಾಗಿರೋ ರಾಷ್ಟ್ರೀಯ ವಾನರ ಸೇನಾ ಅವರು ಹೈದರಾಬಾದ್​ನ ಸರೂರ್​ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

‘ರಾಜಮೌಳಿ ಅವರ ಹೇಳಿಕೆ ಹಿಂದೂಗಳ ಭಾವನೆಗೆ ಸಾಕಷ್ಟು ಧಕ್ಕೆ ತಂದಿದೆ. ಸಿನಿಮಾ ರಂಗದಲ್ಲಿ ಹಿಂದೂ ದೇವರನ್ನು ಅಗೌರವಿಸುವ ಪ್ರವೃತ್ತಿ ಹೆಚ್ಚುತ್ತಲೇ ಇದೆ.  ಹೀಗಾಗಿ, ಈ ದೂರು ಆಧರಿಸಿ ಕೇಸ್ ದಾಖಲಿಸಿಕೊಳ್ಳಬೇಕು ಮತ್ತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಬೇಕು’ ಎಂದು ದೂರುದಾರರು ಕೋರಿದ್ದಾರೆ. ಸರೂರ್​ ನಗರ ಪೊಲೀಸರು ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ವಾರಣಾಸಿ’ ಚಿತ್ರಕ್ಕಾಗಿ ಹಾಲಿವುಡ್ ದೃಶ್ಯಗಳ ಕಾಪಿ ಮಾಡಿದ್ರಾ ರಾಜಮೌಳಿ? ಶುರುವಾಗಿದೆ ಚರ್ಚೆ

27 ಕೋಟಿ ವ್ಯಯ

ಶನಿವಾರ ನಡೆದ ಈ ಈವೆಂಟ್​ಗೆ ರಾಜಮೌಳಿ ಹಾಗೂ ತಂಡದವರು 27 ಕೋಟಿ ರೂಪಾಯಿ ವ್ಯಯಿಸಿದ್ದಾರೆ ಎನ್ನಲಾಗುತ್ತಿದೆ. ಅದ್ದೂರಿಯಾಗಿ ಡ್ಯಾನ್ಸ್ ಮಾಡಲಾಯಿತು. ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಿಂದ ಹೈದರಾಬಾದ್​ಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:32 am, Tue, 18 November 25

Loading...
Unable to load recommendations.
Follow Us