
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ವಾರಾಣಸಿ’ ಬಗ್ಗೆ ದಿನಕ್ಕೊಂದು ರೋಚಕ ಸುದ್ದಿಗಳು ಹೊರಬರುತ್ತಿವೆ. ಈಗ ಚಿತ್ರದ ಕಥೆಯ ಬಗ್ಗೆ ಸ್ವತಃ ರಾಜಮೌಳಿ ಅವರ ತಂದೆ ಹಾಗೂ ಖ್ಯಾತ ಚಿತ್ರಕಥೆ ಲೇಖಕ ವಿಜಯೇಂದ್ರ ಪ್ರಸಾದ್ ಅವರು ಬಿಗ್ ಅಪ್ಡೇಟ್ ಒಂದನ್ನು ನೀಡಿದ್ದಾರೆ. ರಾಮಾಯಣದ ಪ್ರಮುಖ ಘಟ್ಟವಾದ ರಾಮ ಮತ್ತು ಕುಂಭಕರ್ಣನ ನಡುವಿನ ಮಹಾಯುದ್ಧ ಈ ಸಿನಿಮಾದಲ್ಲಿ ಇರಲಿದ್ದು, ಅದು ಬರೋಬ್ಬರಿ 30 ನಿಮಿಷಗಳ ಕಾಲ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿನಿಮಾ ಬಗ್ಗೆ ವಿಜಯೇಂದ್ರ ಪ್ರಸಾದ್ ಅವರಿಗೆ ಪ್ರಶ್ನೆ ಎದುರಾಗಿತ್ತು. ಈ ಸಿನಿಮಾ ರಾಜಕೀಯ ಹಿನ್ನೆಲೆ ಹೊಂದಿದೆಯೇ ಅಥವಾ ಪೌರಾಣಿಕವೇ ಎಂದು ಕೇಳಿದಾಗ, ‘ಇದು ರಾಮ ಮತ್ತು ಕುಂಭಕರ್ಣನ ನಡುವೆ ನಡೆಯುವ ಯುದ್ಧ. ನೀವು ಈಗಾಗಲೇ ಟೀಸರ್ನಲ್ಲಿ ರಾಮ-ಕುಂಭಕರ್ಣರನ್ನು ನೋಡಿದ್ದೀರಿ ಅಲ್ಲವೇ? ಹನುಮಂತನ ಬಾಲ ಮತ್ತು ಅದರ ಮೇಲಿರುವ ರಥವನ್ನು ಗಮನಿಸಿರಬಹುದು. ನಾನು ಅದೇ ದೃಶ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ಅದು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲಿದೆ’ ಎಂದು ಹೇಳಿದ್ದಾರೆ
ಚಿತ್ರದಲ್ಲಿ ಮಹೇಶ್ ಬಾಬು ಅವರು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ರಾಜಮೌಳಿ ಈ ಹಿಂದೆಯೇ ಖಚಿತಪಡಿಸಿದ್ದರು. ‘ಮೊದಲ ದಿನ ಮಹೇಶ್ ಬಾಬು ರಾಮನ ಗೆಟಪ್ನಲ್ಲಿ ಫೋಟೋಶೂಟ್ಗೆ ಬಂದಾಗ ನನಗೆ ಮೈ ರೋಮಾಂಚನಗೊಂಡಿತ್ತು. ಅವರಲ್ಲಿ ಕೃಷ್ಣನ ಕಳೆ ಮತ್ತು ರಾಮನ ಶಾಂತತೆ ಎರಡೂ ಇವೆ’ ಎಂದು ರಾಜಮೌಳಿ ನೆನಪಿಸಿಕೊಂಡಿದ್ದಾರೆ.
ರಾಮ ಹಾಗೂ ಕುಂಭಕರ್ಣನ ಯುದ್ಧದ ದೃಶ್ಯವನ್ನು ಸತತ 60 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು, ಇತ್ತೀಚೆಗಷ್ಟೇ ಶೂಟಿಂಗ್ ಮುಕ್ತಾಯಗೊಂಡಿದೆ. ಇದು ಮಹೇಶ್ ಬಾಬು ಹಾಗೂ ತಮ್ಮ ಸಿನಿಮಾ ಜರ್ನಿಯಲ್ಲೇ ಅತ್ಯಂತ ಸ್ಮರಣೀಯ ದೃಶ್ಯವಾಗಲಿದೆ ಎಂಬ ನಂಬಿಕೆ ರಾಜಮೌಳಿ ಅವರಿಗಿದೆ.
ಚಿತ್ರದಲ್ಲಿ ರಾಮನಾಗಿ ಮಹೇಶ್ ಬಾಬು ನಟಿಸುತ್ತಿದ್ದರೆ, ಕುಂಭಕರ್ಣನ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಡಿಲ್ಲ.
ಇದನ್ನೂ ಓದಿ: ರಾಜಮೌಳಿಯ ಐಮ್ಯಾಕ್ಸ್ ಥಿಯೇಟರ್ ಕನಸು ನನಸು ಮಾಡಿದ ನಟ ಮಹೇಶ್ ಬಾಬು
ಈ ಚಿತ್ರದಲ್ಲಿ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ನಟಿಸುತ್ತಿದ್ದಾರೆ. ಮಹೇಶ್ ಬಾಬು ರಾಮನಾದರೆ, ಪ್ರಿಯಾಂಕಾ ಅವರದ್ದು ಸೀತೆ ಪಾತ್ರವೇ ಎಂಬ ಪ್ರಶ್ನೆ ಮೂಡಿದೆ. ಪ್ರಿಯಾಂಕಾ ಸುದೀರ್ಘ ಗ್ಯಾಪ್ ನಂತರ ಭಾರತೀಯ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಭಾರಿ ಕುತೂಹಲ ಕೆರಳಿಸಿರುವ ಈ ಸಿನಿಮಾ 2027ರಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.