ಅವಮಾನ ಆದಲ್ಲೆ ಕರ್ನಾಟಕದ ಬಾವುಟ ಹಾರಿಸಿದ ಕಿಚ್ಚ: ಸಾಧನೆ ಬಗ್ಗೆ ಹೇಳಿದ್ದೇನು?

Kichcha Sudeep: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಸಿಸಿಎಲ್ 2026 ಫೈನಲ್ ಪಂದ್ಯದಲ್ಲಿ ಬೆಂಗಾಲ್ ತಂಡವನ್ನು ಎದುರಿಸಿದ ಕರ್ನಾಟಕ ತಂಡ ಅದ್ಧೂರಿ ವಿಜಯ ಸಾಧಿಸಿತು. ಆ ಮೂಲಕ ಮೂರನೇ ಬಾರಿ ಚಾಂಪಿಯನ್ ಎನಿಸಿಕೊಂಡಿತು. ಈ ಅದ್ಭುತ ಸಾಧನೆಯ ಬಳಿಕ ಮೊದಲ ಬಾರಿಗೆ ಕರ್ನಾಟಕ ಬುಲ್ಡೊಜರ್ಸ್ ತಂಡ ಮಾಧ್ಯಮಗಳ ಎದುರು ಬಂದು ತಮ್ಮ ಸಂಭ್ರಮ ಹಂಚಿಕೊಂಡಿತು. ಈ ವೇಳೆ ಟಿವಿ9 ಪ್ರತಿನಿಧಿ ಕೇಳಿದ ಪ್ರಶ್ನೆಗೆ ಸುದೀಪ್ ನೀಡಿದ ಉತ್ತರ ಚಪ್ಪಾಳೆ ಗಿಟ್ಟಿಸಿಕೊಂಡಿತು.

ಅವಮಾನ ಆದಲ್ಲೆ ಕರ್ನಾಟಕದ ಬಾವುಟ ಹಾರಿಸಿದ ಕಿಚ್ಚ: ಸಾಧನೆ ಬಗ್ಗೆ ಹೇಳಿದ್ದೇನು?
Kichcha Sudeep

Updated on: Feb 07, 2026 | 10:17 PM

ಸುದೀಪ್ (Sudeep) ಹಾಗೂ ಅವರ ನೇತೃತ್ವದ ಕರ್ನಾಟಕ ಬುಲ್ಡೊಜರ್ಸ್ ತಂಡ 2026ರ ಸಿಸಿಎಲ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ಸ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ತಂಡವನ್ನು ಎದುರಿಸಿದ ಕರ್ನಾಟಕ ತಂಡ ಅದ್ಧೂರಿ ವಿಜಯ ಸಾಧಿಸಿತು. ಆ ಮೂಲಕ ಮೂರನೇ ಬಾರಿ ಚಾಂಪಿಯನ್ ಎನಿಸಿಕೊಂಡಿತು. ಈ ಅದ್ಭುತ ಸಾಧನೆಯ ಬಳಿಕ ಮೊದಲ ಬಾರಿಗೆ ಕರ್ನಾಟಕ ಬುಲ್ಡೊಜರ್ಸ್ ತಂಡ ಮಾಧ್ಯಮಗಳ ಎದುರು ಬಂದು ತಮ್ಮ ಸಂಭ್ರಮ ಹಂಚಿಕೊಂಡಿತು. ಈ ವೇಳೆ ಟಿವಿ9 ಪ್ರತಿನಿಧಿ ಕೇಳಿದ ಪ್ರಶ್ನೆಗೆ ಸುದೀಪ್ ನೀಡಿದ ಉತ್ತರ ಚಪ್ಪಾಳೆ ಗಿಟ್ಟಿಸಿಕೊಂಡಿತು.

ಸಿಸಿಎಲ್ 2026 ಫೈನಲ್ ಗೆದ್ದ ಬಳಿಕ ಕರ್ನಾಟಕ ಬುಲ್ಡೊಜರ್ಸ್ ತಂಡ ಕೊಯಮತ್ತೂರಿನ ಕ್ರಿಕೆಟ್ ಗ್ರೌಂಡ್​​ನಲ್ಲಿ ಸಂಭ್ರಮಾಚರಣೆ ಮಾಡಿತು. ಈ ವೇಳೆ ಸುದೀಪ್ ಹಾಗೂ ಇಡೀ ತಂಡ ಕನ್ನಡ ಬಾವುಟಗಳನ್ನು ಹಾರಾಡಿಸಿತು. ನೆರೆಯ ತಮಿಳುನಾಡಿನಲ್ಲಿ ಅದರಲ್ಲೂ ಕರ್ನಾಟಕದೊಂದಿಗೆ ಗಡಿ, ನೀರು, ಭಾಷೆಯ ವಿಚಾರವಾಗಿ ಪದೇ ಪದೇ ಕಿರಿಕ್ ಮಾಡುತ್ತಲೇ ಬರುತ್ತಿರುವ ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾರಿಸಿದ್ದು ಸಾಮಾನ್ಯ ವಿಷಯ ಅಲ್ಲ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಮಾತನಾಡಿದರು.

ಸುದೀಪ್ ಅವರು ಫೈನಲ್ ಗೆದ್ದು ಕನ್ನಡ ಬಾವುಟ ಹಾರಿಸುವ ಕೆಲವೇ ದಿನಗಳ ಮುಂಚೆ, ಕರ್ನಾಟಕದಿಂದ ಶಬರಿಮಲೆಗೆ ತಮಿಳುನಾಡು ಮಾರ್ಗವಾಗಿ ತೆರಳುತ್ತಿದ್ದ ಕನ್ನಡಿಗರನ್ನು ತಡೆದಿದ್ದ ತಮಿಳರು ಕನ್ನಡಿಗರ ವಾಹನಗಳ ಮೇಲಿದ್ದ ಕನ್ನಡ ಬಾವುಟಗಳನ್ನು ಕಿತ್ತು ತೆಗೆದಿದ್ದರು. ಬಾವುಟಕ್ಕೆ ಅವಮಾನ ಮಾಡಿದ ತಮಿಳುನಾಡಿನಲ್ಲೇ ಸುದೀಪ್ ಮತ್ತು ತಂಡ ಕನ್ನಡ ಬಾವುಟ ಹಾರಿಸಿದ್ದರು. ಇದೇ ವಿಷಯವಾಗಿ ಟಿವಿ9 ಪ್ರತಿನಿಧಿ ಸುದೀಪ್ ಅವರನ್ನು ಪ್ರಶ್ನೆ ಕೇಳಿದರು. ಅವಮಾನ ಆದ ಸ್ಥಳದಲ್ಲೇ ಬಾವುಟ ಹಾರಿಸಿದ ಅನುಭವ ಹೇಗಿತ್ತು ಎಂದು ಕೇಳಿದರು.

ಇದನ್ನೂ ಓದಿ:ಸುದೀಪ್​​​ಗೆ ಈ ವಿಷಯ ಗೊತ್ತಾದ್ರೆ ಚಕ್ರವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಕೆ ಮಂಜು

ಪ್ರಶ್ನೆಗೆ ಉತ್ತರಿಸಿದ ಸುದೀಪ್, ‘ನಮ್ಮ ಬಾವುಟವನ್ನು ಹಾರಿಸಲು ಸಮಯ, ಸ್ಥಳದ ಮುಲಾಜೇಕೆ. ನಮ್ಮ ಬಾವುಟವನ್ನು ಬುರ್ಜ್ ಖಲೀಫಾ ಮೇಲೆಯೇ ಹಾರಿಸಿದ್ದೀವಿ. ಬೇರೆ ಕಡೆ ಹಾರಿಸೋದಿಲ್ವ’ ಎಂದರು. ಸುದೀಪ್ ಅವರ ಉತ್ತರಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಯ್ತು. ಸುದ್ದಿಗೋಷ್ಠಿಯಲ್ಲಿ ಹಲವು ವಿಷಯಗಳ ಬಗ್ಗೆ ಸುದೀಪ್ ಮಾತನಾಡಿದರು. ‘ಸಿಸಿಎಲ್’ನಲ್ಲಿ ಯಾವುದೇ ಸಂಭಾವನೆ ಪಡೆಯದೆ ಹಲವು ವರ್ಷಗಳಿಂದಲೂ ಆಡುತ್ತಾ ಬರುತ್ತಿರುವುದಾಗಿ ಸುದೀಪ್ ಹೇಳಿದರು. ಅಲ್ಲದೆ, ಗೆದ್ದರೂ, ಸೋತರೂ ತಮಗೆ ಈ ಸಿಸಿಎಲ್ ಸಾಕು ಎನಿಸಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದರು.

ಸುದೀಪ್ ಅವರಿಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿ. ಕ್ರಿಕೆಟ್ ಮೇಲಿರುವ ಪ್ರೀತಿಯ ಕಾರಣಕ್ಕೆ ಅವರು ಪ್ರತಿ ವರ್ಷವೂ ತಪ್ಪದೇ ಸಿಸಿಎಲ್ ನಲ್ಲಿ ಪಾಲ್ಗೊಳ್ಳುತ್ತಾರೆ. ಟೂರ್ನಿ ಆರಂಭವಾದಾಗಿನಿಂದ ಈಗಿನವರೆಗೂ ಸುದೀಪ್ ಅವರು ಪ್ರತಿ ವರ್ಷವೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಬಾರಿ ಮೂರನೇ ಬಾರಿ ಚಾಂಪಿಯನ್ ಸಹ ಎನಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:15 pm, Sat, 7 February 26