ಬಿಗ್​ಬಾಸ್ 10: ಈ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದು ಯಾರು?

|

Updated on: Oct 22, 2023 | 11:15 PM

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10: ಬಿಗ್​ಬಾಸ್ ಮನೆಯಿಂದ ಮೊದಲ ವಾರ ಸ್ನೇಕ್ ಶ್ಯಾಮ್ ಅವರು ಹೊರಗೆ ಬಂದಿದ್ದರು. ಎರಡನೇ ಭಾಗ್ಯಶ್ರೀ, ಸಂಗೀತಾ. ತನಿಷಾ, ಗೌರೀಶ್ ಅವರುಗಳು ಎಲಿಮಿನೇಷನ್ ಪಟ್ಟಿಯಲ್ಲಿ ಉಳಿದುಕೊಂಡಿದ್ದರು. ಇವರಲ್ಲಿ ಹೊರ ಬಂದಿದ್ಯಾರು?

ಬಿಗ್​ಬಾಸ್ 10: ಈ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದು ಯಾರು?
ಬಿಗ್ ಬಾಸ್
Follow us on

ಬಿಗ್​ಬಾಸ್ 10ರ (Bigg Boss Kannada) ಎರಡನೇ ವಾರದ ಕಿಚ್ಚ ಪಂಚಾಯಿತಿ ಭಾನುವಾರ ನಡೆದಿದೆ. ಕಾರ್ತಿಕ್, ಸಂಗೀತಾ, ತುಕಾಲಿ ಸಂತು, ಭಾಗ್ಯಶ್ರೀ, ಗೌರೀಶ್, ತನಿಷಾ, ನೀತು ಇನ್ನೂ ಹಲವರು ಪ್ರಮುಖ ಸದಸ್ಯರು ಈ ವಾರ ನಾಮಿನೇಟ್ ಆಗಿದ್ದರು. ಶನಿವಾರದ ಎಪಿಸೋಡ್​ನಲ್ಲಿ ತುಕಾಲಿ ಸಂತು, ಕಾರ್ತಿಕ್ ಅವರುಗಳು ನಾಮಿನೇಷನ್​ನಿಂದ ಪಾರಾಗಿದ್ದರು. ಭಾನುವಾರಕ್ಕೆ ಸಂಗೀತಾ, ಭಾಗ್ಯಶ್ರೀ, ಗೌರೀಶ್, ತನಿಷಾ ಅವರುಗಳು ಉಳಿದುಕೊಂಡಿದ್ದರು. ಇವರಲ್ಲಿ ಒಬ್ಬರು ಮನೆಯಿಂದ ಹೊರಗೆ ಬಂದಿದ್ದಾರೆ.

ಶನಿವಾರದ ಎಪಿಸೋಡ್​ನಲ್ಲಿ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ನಟ ಸುದೀಪ್, ಭಾನುವಾರದ ಎಪಿಸೋಡ್​ನಲ್ಲಿ ತಮಾಷೆಯಾಗಿಯೇ ಶೋ ಅನ್ನು ನಡೆಸಿಕೊಟ್ಟರು. ನಡು-ನಡುವೆ ಕೆಲ ಬುದ್ಧಿವಾದಗಳನ್ನು, ಕೆಲವರು ನಡೆದುಕೊಂಡ ರೀತಿ, ಆಡಿದ ಮಾತುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಹ ಸುದೀಪ್ ಹಂಚಿಕೊಂಡರು. ನಗುತ್ತಾ-ನಗಿಸುತ್ತಾ ಎಪಿಸೋಡ್​ನ ಕೊನೆಯಲ್ಲಿ ಈ ವಾರ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಕರೆದರು ಸುದೀಪ್.

ನಾಮಿನೇಟ್ ಆದವರಲ್ಲಿ ಭಾನುವಾರ ಸಂಗೀತಾ, ಭಾಗ್ಯಶ್ರೀ, ಗೌರೀಶ್, ತನಿಷಾ ಅವರುಗಳು ಉಳಿದುಕೊಂಡಿದ್ದರು. ಇವರಲ್ಲಿ ಮೊದಲಿಗೆ ಸಂಗೀತಾ ಅವರು ಎಲಿಮಿನೇಷನ್​ನಿಂದ ಪಾರಾದರು. ಆ ನಂತರ ತನಿಷಾ ಅವರು ಸಹ ಎಲಿಮಿನೇಷನ್​ನಿಂದ ಪಾರಾದರು. ಅಂತಿಮವಾಗಿ ಪತ್ರಕರ್ತ ಗೌರೀಶ್ ಅಕ್ಕಿ ಅವರನ್ನು ಬಿಗ್​ಬಾಸ್ ಮನೆಯಿಂದ ಹೊರಗೆ ಕರೆದರು ಸುದೀಪ್. ಭಾಗ್ಯಶ್ರೀ ಅವರಿಗೆ ಮನೆಯಲ್ಲಿ ಉಳಿಯಲು ಇನ್ನೊಂದು ವಾರದ ಕಾಲಾವಕಾಶ ದೊರಕಿತು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಬೃಂದಾವನ ಕುಟುಂಬ: ಹಾಡು-ಕುಣಿತ ಕೊನೆಯಲ್ಲಿ ಕಣ್ಣೀರು

ಮನೆಯ ಸದಸ್ಯರು ಗೌರೀಶ್ ಅವರನ್ನು ತಬ್ಬಿ ಬೇಸರದಿಂದ ಕಳಿಸಿಕೊಟ್ಟರು. ಬಳಿಕ ಸುದೀಪ್​ ಅವರನ್ನು ಭೇಟಿಯಾಗಲು ತೆರಳುವ ಮುನ್ನ, ನೀತು ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದರು ಗೌರೀಶ್ ಅಕ್ಕಿ. ಸುದೀಪ್ ಮುಂದೆ ಬಂದಾಗಲೂ, ಎರಡು ವಾರ ನನಗೆ ಒಳ್ಳೆಯ ಅನುಭವಗಳು ದೊರಕಿತು, ಬಿಗ್​ಬಾಸ್ ಒಂದು ಸುಂದರವಾದ ಪಂಜರ, ಆ ಪಂಜರದಲ್ಲಿ ವ್ಯಕ್ತಿತ್ವಗಳ ಕಿತ್ತಾಟ ನಡೆಯುತ್ತಿದೆ ಎಂದು ಬಣ್ಣಿಸಿದರು. ನಾನು ಸಾಧ್ಯವಾದಷ್ಟು ಶಕ್ತಿ ಮೀರಿ ಪ್ರಯತ್ನ ಪಟ್ಟೆ, ಟಾಸ್ಕ್​ಗಳಲ್ಲಿ ಆಟವಾಡಿದೆ ವಯೋಸಹಜ ಕಾರಣದಿಂದ ಅಥವಾ ಉಳಿದವರು ನನಗಿಂತಲೂ ಶಕ್ತರಾಗಿರುವ ಕಾರಣ ನಾನು ಅಂದುಕೊಂಡಂತೆ ಫಲಿತಾಂಶ ನನಗೆ ಬರಲಿಲ್ಲ ಎಂದರು ಗೌರೀಶ್.

ಮೊದಲ ವಾರ ಸ್ನೇಕ್ ಶ್ಯಾಮ್ ಅವರು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಎರಡನೇ ವಾರ ಗೌರೀಶ್ ಅಕ್ಕಿ ಅವರು ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಮುಂದಿನ ವಾರಕ್ಕೆ ನೀತು ವನಜಾಕ್ಷಿ ನೇರವಾಗಿ ನಾಮಿನೇಟ್ ಆಗಿದ್ದಾರೆ. ಭಾಗ್ಯಶ್ರೀ ಸಹ ಇನ್ನೂ ಅಪಾಯದಲ್ಲಿಯೇ ಇದ್ದಾರೆ. ಹಾಗಾಗಿ ಮುಂದಿನ ವಾರ ಯಾರು ಹೊರಗೆ ಬರಬಹುದು ಎಂಬ ಕುತೂಹಲ ಇದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ