ಗಿಲ್ಲಿ ನಟ Vs ಅಶ್ವಿನಿ ಗೌಡ: ಜಾತಿ, ಭಾಷೆ ಆಯಾಮ ಪಡೆದ ಬೆಂಬಲಿಗರ ಚರ್ಚೆ

ಕಾಮಿಡಿ ಕಲಾವಿದ ಗಿಲ್ಲಿ ನಟ, ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಫಿನಾಲೆ ತಲುಪಿದ್ದಾರೆ. ಅವರಿಬ್ಬರ ನಡುವೆ ಪೈಪೋಟಿ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬೆಂಬಲಿಗರು ಪ್ರಚಾರಕ್ಕೆ ಇಳಿದಿದ್ದಾರೆ. ಬಿಗ್ ಬಾಸ್ ಪ್ರಚಾರದಲ್ಲಿ ಭಾಷೆ ಮತ್ತು ಜಾತಿಯ ವಿಷಯ ಎಳೆದು ತಂದಿರುವುದು ಟೀಕೆಗೆ ಕಾರಣ ಆಗಿದೆ.

ಗಿಲ್ಲಿ ನಟ Vs ಅಶ್ವಿನಿ ಗೌಡ: ಜಾತಿ, ಭಾಷೆ ಆಯಾಮ ಪಡೆದ ಬೆಂಬಲಿಗರ ಚರ್ಚೆ
Ashwini Gowda, Gilli Nata

Updated on: Jan 15, 2026 | 9:36 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಫಿನಾಲೆ (Bigg Boss Kannada Finale) ಜನವರಿ 17 ಮತ್ತು 18ರಂದು ನಡೆಯಲಿದೆ. ಈ ರಿಯಾಲಿಟಿ ಶೋನಲ್ಲಿ ಯಾರು ವಿನ್ ಆಗುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ. ಎಲ್ಲರಿಗೂ ಕುತೂಹಲ ಇದೆ. ಗಿಲ್ಲಿ ನಟ (Gilli Nata) ಅವರೇ ಗೆಲ್ಲುತ್ತಾರೆ ಎಂಬುದು ಬಹುತೇಕ ವೀಕ್ಷಕರ ಅಭಿಪ್ರಾಯ ಆಗಿದೆ. ಅವರಿಗೆ ಅಶ್ವಿನಿ ಗೌಡ (Ashwini Gowda) ಕೂಡ ಪೈಪೋಟಿ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಗರು ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದ ಭರದಲ್ಲಿ ಜಾತಿ ಮತ್ತು ಭಾಷೆಯ ವಿಷಯವನ್ನು ಎಳೆದು ತರಲಾಗುತ್ತಿದೆ.

ಅಶ್ವಿನಿ ಗೌಡ ಅವರು ಕನ್ನಡಪರ ಹೋರಾಟಗಾರ್ತಿ. ಅವರು ನಟಿ ಕೂಡ ಹೌದು. ‘ಬಿಗ್ ಬಾಸ್ ಕನ್ನಡ ಸೀನಸ್ 12’ ಶೋಗೆ ಬಂದ ಬಳಿಕ ಅಶ್ವಿನಿ ಗೌಡ ಅವರ ಖ್ಯಾತಿ ಹೆಚ್ಚಾಗಿದೆ. ಅಶ್ವಿನಿ ಪರವಾಗಿ ಕನ್ನಡ ಪರ ಹೋರಾಟಗಾರರು ಪ್ರಚಾರ ಮಾಡಿ ವೋಟ್ ಕೇಳುತ್ತಿದ್ದಾರೆ. ಈ ವಿಚಾರದಲ್ಲಿ ಕನ್ನಡ ಭಾಷೆಯ ವಿಷಯವನ್ನು ಮುಂದಿಟ್ಟುಕೊಂಡು ಅಶ್ವಿನಿಗೆ ಜನರ ವೋಟ್ ಕೇಳಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಕೇವಲ ಅಶ್ವಿನಿ ಮಾತ್ರವೇ ಕನ್ನಡಿಗರೇನಲ್ಲ. ಬಿಗ್ ಬಾಸ್ ಮನೆಯಲ್ಲಿ ಇರುವವರು ಎಲ್ಲರೂ ಕನ್ನಡಿಗರು. ಹಾಗಾಗಿ ಕೇವಲ ಕನ್ನಡದ ವಿಷಯವನ್ನು ಮುಂದಿಟ್ಟುಕೊಂಡು ಯಾಕೆ ವೋಟ್ ಕೇಳುತ್ತಿದ್ದೀರಿ’ ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೇ, ಅಶ್ವಿನಿ ಗೌಡ ಅವರಿಗೆ ಸರಿಯಾಗಿ ಕನ್ನಡ ಬರೆಯಲು ಬರುವುದಿಲ್ಲ ಹಾಗೂ ಮಾತಿನ ನಡುವೆ ಅವರು ಹೆಚ್ಚು ಇಂಗ್ಲಿಷ್ ಬಳಸುತ್ತಾರೆ ಎಂಬ ಟೀಕೆ ಕೂಡ ಇದೆ. ಅದಕ್ಕೆ ಕನ್ನಡ ಪರ ಹೋರಾಟಗಾರರು ಉತ್ತರ ನೀಡಿದ್ದಾರೆ.

‘ಕನ್ನಡದ ಪರ ಹೋರಾಟ ಮಾಡಲು ಕನ್ನಡ ಭಾಷೆಯ ಬಗ್ಗೆ ಸಂಪೂರ್ಣ ಜ್ಞಾನ ಇರಲೇಬೇಕು ಅಂತೇನೂ ಇಲ್ಲ. ಅದೇ ರೀತಿ, ಚೆನ್ನಾಗಿ ಕನ್ನಡ ಬಲ್ಲವರು ಎಷ್ಟು ಜನರು ಕನ್ನಡಪರ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದಾರೆ? ಎಷ್ಟು ಜನರ ಮೇಲೆ ಕೇಸ್ ಇದೆ’ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನಿಸಿದ್ದಾರೆ. ಈ ಚರ್ಚೆಯ ನಡುವೆ ಜಾತಿಯ ವಿಷಯ ಕೂಡ ನುಸುಳಿದು.

ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ: ಅಶ್ವಿನಿ ಗೌಡ ಪರವಾಗಿ ಸುದೀಪ್ ಮನೆಗೆ ಕರವೇ ನಾರಾಯಣ ಗೌಡ ಹೋಗಿದ್ದು ನಿಜವೇ?

‘ಗಿಲ್ಲಿ ಉತ್ತಮ ಕಲಾವಿದ. ಹಾಗೇ ಕುರುಬ ಎಂಬ ಕಾರಣಕ್ಕೆ ಕುರುಬ ಸಮುದಾಯದ ಜನರೆಲ್ಲಾ ವೋಟ್ ಮಾಡಿ ಅನ್ನೋದು ಗಿಲ್ಲಿಯ ಪ್ರತಿಭೆಗೆ ಮಾಡಿದ ಅವಮಾನ. ನೈಜ ಪ್ರತಿಭೆ. ಈಗ ಜಾತಿ ಪ್ರತಿಭೆ’ ಎಂಬ ಕಮೆಂಟ್ ಕೂಡ ಬಂದಿದೆ. ಬಿಗ್ ಬಾಸ್ ಫಿನಾಲೆ ಹತ್ತಿರ ಆದಾಗಿನಿಂದ ಈ ರೀತಿಯ ಚರ್ಚೆಗಳು ಶುರುವಾಗಿವೆ. ಈ ಮೊದಲು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದ್ದರು. ಇಂದು ಕನ್ನಡಪರ ಹೋರಾಟಗಾರರಿಂದ ಅಶ್ವಿನಿ ಗೌಡ ಅವರಿಗೆ ಸಿಗುತ್ತಿರುವ ಬೆಂಬಲ ಅಂದು ರೂಪೇಶ್ ರಾಜಣ್ಣ ಅವರಿಗೆ ಸಿಕ್ಕಿರಲಿಲ್ಲ ಎಂಬ ಟೀಕೆ ಸಹ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us