
ಮನೆಯಲ್ಲಿ ಎಲ್ಲವೂ ಪ್ರೇಕ್ಷಕ ಅಂದುಕೊಂಡಂತೆ ನಡೆಯುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಬಿಗ್ಬಾಸ್ (BiggBoss) ಹೊಸದೊಂದು ಟ್ವಿಸ್ಟ್ ಕೊಡುತ್ತಾರೆ. ಈ ವಾರ ಡಬಲ್ ಎಲಿಮಿನೇಷನ್ ಎಂಬ ಸುಳಿವನ್ನು ಬಿಗ್ಬಾಸ್ ಮೊದಲೇ ಕೊಟ್ಟಿದ್ದರು. ಅದರಂತೆ ಶನಿವಾರದ ಎಪಿಸೋಡ್ನಲ್ಲಿ ಎಲ್ಲರಿಗೂ ಅಚ್ಚರಿ ಆಗುವಂತೆ ಸೂರಜ್ ಅವರು ಮನೆಯಿಂದ ಹೊರಗೆ ಹೋಗಿದ್ದರು. ಸಹ ಸ್ಪರ್ಧಿಗಳು ವಿದಾಯ ಸಹ ಹೇಳಲಾಗದೆ ಸೂರಜ್ ಅವರನ್ನು ಹೊರಗೆ ಕಳಿಸಲಾಗಿತ್ತು. ಇದೀಗ ಭಾನುವಾರವೂ ಸಹ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಈ ಬಾರಿಯೂ ಅಚ್ಚರಿಯ ಸ್ಪರ್ಧಿಯನ್ನು ಹೊರಗೆ ಕಳಿಸಲಾಗಿದೆ.
ಈ ವಾರ ಸುದೀಪ್ ಬಂದಿರಲಿಲ್ಲ ಬದಲಿಗೆ ಮಾಜಿ ಸ್ಪರ್ಧಿ, ನಟಿ ಅನುಪಮಾ ಅವರು ಬಿಗ್ಬಾಸ್ ಮನೆಗೆ ಬಂದು ಸ್ಪರ್ಧಿಗಳೊಟ್ಟಿಗೆ ಕೆಲವು ಫನ್ ಆಕ್ಟಿವಿಟಿಗಳನ್ನು ಮಾಡಿಸಿದರು. ಜೊತೆಗೆ ಈ ಬಾರಿ ನಾಮಿನೇಷನ್ನಲ್ಲಿದ್ದ ಸ್ಪರ್ಧಿಗಳಲ್ಲಿ ಕೆಲವರನ್ನು ನಾಮಿನೇಷನ್ನಿಂದ ಕಾಪಾಡಲು ಆಕ್ಟಿವಿಟಿ ಮಾಡಿಸಲಾಯ್ತು. ಕಾಫಿ ಕಪ್ ಆಕ್ಟಿವಿಟಿ, ಕೈಗೆ ಬಣ್ಣ ಮೆತ್ತುವ ಆಕ್ಟಿವಿಟಿಗಳನ್ನು ಆಡಿಸುವ ಮೂಲಕ ಈ ವಾರ ಬಚಾವಾದವರನ್ನು ಘೋಷಿಸಲಾಯ್ತು. ಅವುಗಳಲ್ಲಿ ರಾಶಿಕಾ, ಧ್ರುವಂತ್, ರಕ್ಷಿತಾ ಇನ್ನೂ ಕೆಲವರು ಬಚಾವಾದರು.
ಇದನ್ನೂ ಓದಿ: ಡಬಲ್ ಎಲಿಮಿನೇಷನ್: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್ಬಾಸ್
ಅಂತಿಮವಾಗಿ ಸ್ಪಂದನಾ ಮತ್ತು ಮಾಳು ಅವರುಗಳು ಉಳಿದುಕೊಂಡರು. ಈ ವೇಳೆ ಸ್ಪರ್ಧಿಗಳು ಕೆಲವರು ಮಾಳು ಉಳಿಯಬೇಕು ಎಂದರೆ ಕೆಲವರು ಸ್ಪಂದನಾ ಉಳಿಯಬೇಕು ಎಂದರು. ಬಳಿಕ ಬಿಗ್ಬಾಸ್ ಎರಡು ಕಾರುಗಳನ್ನು ಕರೆಸಿ, ಮಾಳು ಮತ್ತು ಸ್ಪಂದನಾ ತಲಾ ಒಂದು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಂತೆಯೇ ಮಾಳು ಮತ್ತು ಸ್ಪಂದನಾ ಕಾರುಗಳಲ್ಲಿ ಕುಳಿತರು. ಎರಡೂ ಕಾರುಗಳು ಬಿಗ್ಬಾಸ್ ಮನೆಯಿಂದ ಹೊರಗೆ ಹೋದವು. ಆದರೆ ವಾಪಸ್ಸಾಗಿದ್ದು ಕೇವಲ ಒಂದು ಕಾರು. ಆ ಕಾರಿನಿಂದ ಸ್ಪಂದನಾ ಕೆಳಗೆ ಇಳಿದರು. ಆ ಮೂಲಕ ಮಾಳು ಬಿಗ್ಬಾಸ್ ಮನೆಯಿಂದ ಹೊರಗೆ ಹೋದಂತಾಯ್ತು.
ಈ ವಾರ ಸೂರಜ್ ಮತ್ತು ಮಾಳು ಅವರುಗಳು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಈ ಬಾರಿ ಹೊರಗೆ ಹೋದವರ ದುರಾದೃಷ್ಟವೆಂದರೆ ಸುದೀಪ್ ಅವರನ್ನು ವೇದಿಕೆ ಮೇಲೆ ಭೇಟಿ ಆಗುವ ಅವಕಾಶವೂ ಕೈತಪ್ಪಿದೆ. ಆದರೆ ಮುಂದಿನ ವಾರ ಇವರುಗಳನ್ನು ಮತ್ತೆ ವೇದಿಕೆಗೆ ಕರೆಸುವ ಸಾಧ್ಯತೆ ಇದೆ. ಪ್ರಸ್ತುತ ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ, ರಘು, ಗಿಲ್ಲಿ, ಕಾವ್ಯಾ, ಸ್ಪಂದನಾ, ರಕ್ಷಿತಾ, ಧ್ರುವಂತ್, ಧನುಶ್, ರಾಶಿಕಾ ಅವರುಗಳು ಮಾತ್ರ ಉಳಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ಪರ್ಧೆ ಇನ್ನಷ್ಟು ಕಠಿಣ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:49 pm, Sun, 28 December 25