ಆಸೆಗಳ ಬಿಚ್ಚಿಟ್ಟ ಮನೆ ಮಂದಿ, ಈಡೇರಿಸುತ್ತಾರಾ ಬಿಗ್​ಬಾಸ್? ಯಾರ ಆಸೆ ಏನು?

|

Updated on: Jan 22, 2024 | 11:26 PM

Bigg Boss Kannada: ಮನೆ ಸ್ಪರ್ಧಿಗಳು ಬಿಗ್​ಬಾಸ್​ ಮುಂದೆ ತಮ್ಮ ಆಸೆಯನ್ನು ಹೇಳಿಕೊಂಡರು. ಏನು ಆ ಆಸೆಗಳು ಅದರಲ್ಲಿ ಯಾರ ಆಸೆ ಪೂರೈಕೆ ಆಗುತ್ತದೆ? ಯಾರದ್ದು ಆಗುವುದಿಲ್ಲ?

ಆಸೆಗಳ ಬಿಚ್ಚಿಟ್ಟ ಮನೆ ಮಂದಿ, ಈಡೇರಿಸುತ್ತಾರಾ ಬಿಗ್​ಬಾಸ್? ಯಾರ ಆಸೆ ಏನು?
Follow us on

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಫಿನಾಲೆ ವಾರಕ್ಕೆ ಬಂದಿದೆ. ಇನ್ನು ಆರು ದಿನದಲ್ಲಿ ಫಿನಾಲೆ ನಡೆದು ವಿಜೇತ ಯಾರೆಂದು ತಿಳಿದು ಬರಲಿದೆ. ನಿನ್ನೆಯಷ್ಟೆ ನಮ್ರತಾ ಎಲಿಮಿನೇಟ್ ಆಗಿ ಈಗ ಮನೆಯಲ್ಲಿ ಆರು ಮಂದಿ ಮಾತ್ರವೇ ಉಳಿದಿದ್ದಾರೆ. ಬಿಗ್​ಬಾಸ್​ ಟ್ರೋಫಿಯನ್ನು ಸಹ ಮನೆಯ ಒಳಗೆ ಇಡಲಾಗಿದ್ದು, ಮನೆ ಮಂದಿಗೆ ಟ್ರೋಫಿ ಗೆಲ್ಲುವ ಆಸೆ ಹೆಚ್ಚಾಗಿದೆ. ಇದರ ನಡುವೆ ಕೊನೆಯ ವಾರದಲ್ಲಿ ಮನೆಯ ಸದಸ್ಯರ ಆಸೆಗಳನ್ನು ತಿಳಿದುಕೊಂಡು ಅದನ್ನು ಈಡೇರಿಸಿಕೊಳ್ಳುವ ಅವಕಾಶವನ್ನು ಬಿಗ್​ಬಾಸ್ ನೀಡಿದ್ದಾರೆ.

ಒಂದು ಬಾವಿಯನ್ನು ನಿರ್ಮಿಸಿ, ಸ್ಪರ್ಧಿಗಳು ತಮ್ಮ ಐದು ಆಸೆಗಳನ್ನು ಹೇಳಿ ಕಾಯಿನ್ ಒಂದನ್ನು ಅದರ ಒಳಗೆ ಹಾಕುವಂತೆ ಸೂಚಿಸಲಾಗಿತ್ತು. ಅಂತೆಯೇ ಪ್ರತಿಯೊಬ್ಬರು ತಮಗೆ ಇರುವ ಆಸೆಗಳನ್ನು ಹೇಳಿದರು. ಪ್ರತಾಪ್, ತಾವು ಐದು ನಿಮಿಷಕ್ಕಾದರೂ ಈ ಮನೆಯ ಕ್ಯಾಪ್ಟನ್ ಆಗಬೇಕು ಎಂದರು. ತಮ್ಮ ಡ್ರೋನ್ ಅನ್ನು ಕಳಿಸಿಕೊಡಬೇಕು, ತಮ್ಮನ್ನು ಪ್ರೀತಿಸುವ ಇಷ್ಟಪಡುವ ಅಗಂತುಕ ವ್ಯಕ್ತಿಯೊಡನೆ ಒಮ್ಮೆ ಮಾತನಾಡಬೇಕು ಎಂದರು.

ಸಂಗೀತಾ ತುಸು ದೊಡ್ಡ ಆಸೆಗಳನ್ನೇ ಹೇಳಿದರು. ನನ್ನ ಇಷ್ಟದ ನಟ ಯಶ್, ಅವರಿಂದ ಹಾಗೂ ರಾಧಿಕಾ ಪಂಡಿತ್ ಅವರಿಂದ ಒಂದು ಸಂದೇಶ ಬಂದರೆ ನನಗೆ ಇನ್ನಷ್ಟು ಸ್ಪೂರ್ತಿ ತುಂಬಿದಂತಾಗುತ್ತದೆ ಎಂದರು. ಬಳಿಕ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ಮನೆಗೆ ಬಂದರೆ ಖುಷಿಯಾಗುತ್ತದೆ ಎಂದರು. ನನ್ನ ಅತ್ತಿಗೆಯೊಟ್ಟಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ, ಅವರನ್ನು ಕಳಿಸಿ ಹಾಗೂ ಶ್ರುತಿ ಅವರಿಂದ ನನ್ನ ಗೇಮ್ ಗೆ ಬಹಳ ಸಹಾಯವಾಯ್ತು, ಅವರಿಗೆ ಒಮ್ಮೆ ಕರೆ ಮಾಡಿ ಅವರಿಂದ ಟಿಪ್ ತೆಗೆದುಕೊಳ್ಳುವ ಆಸೆಯಿದೆ ಎಂದರು.

ಇದನ್ನೂ ಓದಿ:ಬಿಗ್​ಬಾಸ್​ನಿಂದ ಜೀವನದಲ್ಲಿ ದೊಡ್ಡ ಬದಲಾವಣೆ: ಸುದೀಪ್ ಎದುರು ತನಿಷಾ ಭಾವುಕ

ವಿನಯ್, ಈಡೇರಬಹುದಾದ ಆಸೆಗಳನ್ನೇ ಹೇಳಿಕೊಂಡರು. ಮನೆಯ ಎಲ್ಲ ಸದಸ್ಯರ ಮೀಮ್​ಗಳನ್ನು ಹಾಕುವಂತೆ ಹೇಳಿದರು. ಒಂದು ಮೂವಿ ನೈಟ್ ಅರೇಂಜ್ ಮಾಡಿ ಸುದೀಪ್ ಅವರ ಯಾವುದಾದರೂ ಒಂದು ಸಿನಿಮಾ ತೋರಿಸುವಂತೆ ಹೇಳಿದರು. ಗಿಚ್ಚಿ-ಗಿಲಿಗಿಲಿ ತಂಡವನ್ನು ಕರೆಸಿ ಕಾಮಿಡಿ ಸ್ಕಿಟ್ ಮಾಡಿಸುವಂತೆ ಕೇಳಿದರು. ಫೈರ್ ಕ್ಯಾಂಪ್ ಒಂದನ್ನು ಅರೇಂಜ್ ಮಾಡುವಂತೆಯೂ ಮನವಿ ಮಾಡಿದರು.

ಕಾರ್ತಿಕ್, ತಾವು ಡೊಳ್ಳು ಕುಣಿತ ಕಲಿತಿದ್ದು ಅದರ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ಕೇಳಿದರು. ಸುದೀಪ್​ರ ಡೈಲಾಗ್ ಒಂದನ್ನು ಪ್ರದರ್ಶಿಸುವ ಆಸೆಯಿದೆಯೆಂದು ಹೇಳಿದರು. ತಮ್ಮ ತಂಗಿಯ ಜೊತೆಗೆ ಮಾತನಾಡಲು ಅವಕಾಶ ನೀಡುವಂತೆ ಸಹ ಮನವಿ ಮಾಡಿದರು. ವರ್ತೂರು ಸಂತೋಷ್ ಅವರು, ಹಳ್ಳಿಕಾರ್ ಹೋರಿಗಳನ್ನು ಮನೆಯೊಳಗೆ ಕಳಿಸಿರೆಂದರು. ಹಳ್ಳಿಕಾರ್ ಟಿ-ಶರ್ಟ್ ಹಾಗೂ ಚೈನ್ ಅನ್ನು ಕೊಡಿ ಎಂದು ಕೇಳಿದರು. ಬಿಗ್​ಬಾಸ್ ಅನ್ನು ನೋಡಬೇಕೆಂಬ ಆಸೆ ವ್ಯಕ್ತಪಡಿಸಿದರಾದರೂ ಅದು ಅಸಾಧ್ಯ ಎಂದು ಬಿಗ್​ಬಾಸ್ ಹೇಳಿದರು.

ತುಕಾಲಿ ಸಂತು, ತಾವು ಕ್ಯಾಪ್ಟನ್ ಆಗುವ ಆಸೆಯಿದೆ ಎಂದರು. ಅದರ ಬಳಿಕ ತಮಗೆ ಉಂಡೆ ಕೋಳಿ ತಿನ್ನುವ ಆಸೆಯಾಗಿದೆ ಎಂದರು. ಅದಾದ ಬಳಿಕ ಮನೆಯ ಎಲ್ಲ ಸದಸ್ಯರು ಒಂದು ದಿನ ನನ್ನ ಮಾತನ್ನು ಕೇಳುವಂತೆ ಮಾಡಿ ಎಂದರು. ತಮಗೆ ಒಳ್ಳೆಯ ಬಟ್ಟೆಗಳನ್ನು ಧರಿಸಬೇಕು ಹೀರೋ ರೀತಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಿದೆ ಎಂದರು. ಇದರಲ್ಲಿ ಪ್ರತಾಪ್ ಹಾಗೂ ತುಕಾಲಿಯನ್ನು ಕ್ಯಾಪ್ಟನ್ ಮಾಡಲು ಬಿಗ್​ಬಾಸ್ ಓಟಿಂಗ್ ಮಾಡಿಸಿದರು. ಆದರೆ ಇಬ್ಬರಿಗೂ ಸಮಾನವಾದ ಮತ ಸಿಕ್ಕಿದ್ದರಿಂದ ಇಬ್ಬರೂ ಕ್ಯಾಪ್ಟನ್ ಆಗಲು ಸಾಧ್ಯವಾಗಲಿಲ್ಲ. ಉಳಿದ ಸ್ಪರ್ಧಿಗಳ ಯಾವ ಆಸೆಯನ್ನು ಬಿಗ್​ಬಾಸ್ ಈಡೇರಿಸುತ್ತಾರಾ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ