ಇನ್ನೂ ನಿಂತಿಲ್ಲ ಚೈತ್ರಾ ಕುಂದಾಪುರ ಕಣ್ಣೀರು; ಕಳಂಕ ಹೊತ್ತುಕೊಳ್ಳುವ ಆತಂಕ

ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಬಿಗ್ ಬಾಸ್ ಮನೆಗೆ ಬಂದಿದ್ದ ಚೈತ್ರಾ ಕುಂದಾಪುರ ಅವರ ಮುಖವಾಡ ಕಳಚಿದೆ. ಕಳೆದ ವೀಕೆಂಡ್​ನಲ್ಲಿ ಅವರಿಗೆ ಸುದೀಪ್​ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಆಸ್ಪತ್ರೆಗೆ ಹೋಗಿ ಬಂದ ಬಳಿಕ ಚೈತ್ರಾ ಅವರು ನಿಯಮ ಮೀರಿ ನಡೆದುಕೊಂಡಿದ್ದಕ್ಕೆ ಸುದೀಪ್ ಮಂಗಳಾರತಿ ಮಾಡಿದ್ದರು. ಹಾಗಾಗಿ ಚೈತ್ರಾ ಇನ್ನೂ ಕಣ್ಣೀರು ಹಾಕುತ್ತಿದ್ದಾರೆ.

ಇನ್ನೂ ನಿಂತಿಲ್ಲ ಚೈತ್ರಾ ಕುಂದಾಪುರ ಕಣ್ಣೀರು; ಕಳಂಕ ಹೊತ್ತುಕೊಳ್ಳುವ ಆತಂಕ
ಚೈತ್ರಾ ಕುಂದಾಪುರ

Updated on: Nov 18, 2024 | 10:07 PM

ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಸುದೀಪ್​ ಅವರು ಕಿರುಚಾಡುವುದು ತುಂಬ ಅಪರೂಪ. ದೊಡ್ಮನೆಯ ಸ್ಪರ್ಧಿಗಳು ಮಿತಿ ಮೀರಿ ನಡೆದುಕೊಂಡಾಗ ಮಾತ್ರ ಸುದೀಪ್ ಅವರು ತಾಳ್ಮೆ ಕಳೆದುಕೊಳ್ಳುತ್ತಾರೆ. ಅವರು ಉಗ್ರ ರೂಪ ತಾಳಿದರೆ ಎಂಥವರೂ ಸೈಲೆಂಟ್ ಆಗಲೇಬೇಕು. ಕಳೆದ ವೀಕೆಂಡ್​ನಲ್ಲಿ ಚೈತ್ರಾ ಕುಂದಾಪುರ ಅವರಿಗೆ ಸುದೀಪ್ ಗ್ರಹಚಾರ ಬಿಡಿಸಿದ್ದರು. ಅದರ ಎಫೆಕ್ಟ್ ಹೇಗಿದೆ ಎಂದರೆ, ಸೋಮವಾರ (ನವೆಂಬರ್​ 18) ಕೂಡ ಚೈತ್ರಾ ಅವರು ಅಳುವುದು ನಿಲ್ಲಿಸಿಲ್ಲ. ಮನೆಯೊಳಗಿನ ಇತರ ಸ್ಪರ್ಧಿಗಳ ಜೊತೆ ತಮ್ಮ ನೋವನ್ನು ತೋಡಿಕೊಂಡು ಚೈತ್ರಾ ಅತ್ತಿದ್ದಾರೆ.

ಪ್ರಜ್ಞೆ ತಪ್ಪಿ ಬಿದ್ದಿದ್ದ ಚೈತ್ರಾ ಕುಂದಾಪುರ ಅವರನ್ನು ಕಳೆದ ವಾರ ಆಸ್ಪತ್ರೆಗೆ ಕಳಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಬಂದ ಬಳಿಕ ಚೈತ್ರಾ ಅವರು ಒಂದಷ್ಟು ವಿಷಯಗಳನ್ನು ತಿಳಿದುಕೊಂಡು ಬಂದು ಇನ್ನುಳಿದ ಸದಸ್ಯರ ತಲೆಗೆ ಹುಳ ಬಿಡಲು ಪ್ರಯತ್ನಿಸಿದ್ದರು. ಇದು ಬಿಗ್ ಬಾಸ್ ಕಾರ್ಯಕ್ರಮದ ನಿಯಮಕ್ಕೆ ಸಂಪೂರ್ಣ ವಿರುದ್ಧವಾದದ್ದು. ಹಾಗಾಗಿ ಚೈತ್ರಾ ಮೇಲೆ ಸುದೀಪ್ ಗರಂ ಆಗಿದ್ದರು.

ಈಗ ಚೈತ್ರಾ ಕುಂದಾಪುರ ಅವರಿಗೆ ಅಳುಕು ಕಾಡುತ್ತಿದೆ. ಮೊದಲಿನ ಉತ್ಸಾಹ ಈಗ ಅವರಲ್ಲಿ ಉಳಿದಿಲ್ಲ. ಅವರಿಗೆ ಬಿಗ್ ಬಾಸ್ ಮನೆ ಒಂದು ರೀತಿಯಲ್ಲಿ ಉಸಿರು ಕಟ್ಟಿಸುತ್ತಿದೆ. ಆದಷ್ಟು ಬೇಗ ಎಲಿಮಿನೇಟ್ ಆಗಿ ಹೋಗಬೇಕು ಎಂದು ಅವರು ಆಲೋಚಿಸುತ್ತಿದ್ದಾರೆ. ಸೋಮವಾರ (ನ.18) ಮುಂಜಾನೆ ಅವರು ಮೋಕ್ಷಿತಾ ಬಳಿ ತಮ್ಮ ಮನದ ನೋವನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ಮಂಜು ತಿಕ್ಲ, ಚೈತ್ರಾ ಪುಕ್ಲು’: ಬಿಗ್ ಬಾಸ್ ಮನೆಗೆ ಬರುತ್ತಲೇ ವಿವಾದ ಎಬ್ಬಿಸಿದ ರಜತ್

ಹೊರಗೆ ಚೈತ್ರಾ ಅವರು ಚಿಕಿತ್ಸೆ ಪಡೆದ ರೀತಿಯ ಬಗ್ಗೆಯೇ ಕೆಲವರಿಗೆ ಅನುಮಾನ ಇದೆ. ಅವರು ಹೊರಗಿನ ವಿಷಯವನ್ನು ತಿಳಿದುಕೊಳ್ಳುವ ಉದ್ದೇಶದಿಂದಲೇ ಆಸ್ಪತ್ರೆಗೆ ಹೋಗಿರಬಹುದೇ ಎಂಬ ಅನುಮಾನ ಕೆಲವರಿಗೆ ಮೂಡಿದೆ. ಈ ಕಳಂಕವನ್ನು ಹೊತ್ತುಕೊಂಡು ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗುತ್ತೇನೇನೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ತಮ್ಮ ಮೇಲೆ ಬಂದಿರುವ ಕಳಂಕವನ್ನು ಚೈತ್ರಾ ಕುಂದಾಪುರ ಅವರು ಹೇಗೆ ಕಳೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us