DK Shivakumar: ನಾನು ಸಿನಿಮಾ ನೋಡಿ 25 ವರ್ಷಗಳೇ ಆಯ್ತು: ಡಿಕೆ ಶಿವಕುಮಾರ್

|

Updated on: Oct 12, 2024 | 9:10 PM

DK Shivakumar: ‘ತಮಟೆ’ ಕನ್ನಡ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್, ಹಳೆಯ ನೆನಪುಗಳಿಗೆ ಜಾರಿದರು. ತಾವು ಟೂರಿಂಗ್ ಟಾಕೀಸ್ ನಡೆಸುತ್ತಿದ್ದ ದಿನಗಳು. ಈಗ ಚಿತ್ರಮಂದಿರ ಹೊಂದಿರುವುದು ಹಾಗೂ ಸಿನಿಮಾ ನೋಡಿ 25 ವರ್ಷಗಳಾದವು ಎಂದು ಸಹ ಡಿಕೆಶಿ ಹೇಳಿದ್ದಾರೆ.

DK Shivakumar: ನಾನು ಸಿನಿಮಾ ನೋಡಿ 25 ವರ್ಷಗಳೇ ಆಯ್ತು: ಡಿಕೆ ಶಿವಕುಮಾರ್
Follow us on

ರಾಜಕೀಯ, ಆಡಳಿತ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ಇಂದು ಅವುಗಳಿಂದ ತುಸು ಬಿಡುವು ಪಡೆದು ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಡಿಕೆ ಶಿವಕುಮಾರ್, ಸಿನಿಮಾಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ತುಸು ಅಪರೂಪ. ‘ತಟಮೆ’ ಹೆಸರಿನ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್ ಹಳೆಯ ನೆನಪುಗಳಿಗೆ ಜಾರಿದರು. ಟೂರಿಂಗ್ ಟಾಕೀಸ್ ಕಟ್ಟಿದ್ದು, ದಶಕಗಳ ಹಿಂದೆ ತಾವು ನೋಡಿದ ಸಿನಿಮಾ ಇನ್ನಿತರೆ ವಿಷಯಗಳನ್ನು ಸ್ವಾರಸ್ಯಮಯವಾಗಿ ಹಂಚಿಕೊಂಡರು.

‘ಬಹಳ ವರ್ಷಗಳ ಹಿಂದೆ ನಾನು ಸಹ ಟೂರಿಂಗ್ ಟಾಕೀಸ್ ನಡೆಸುತ್ತಿದ್ದೆ, ಆದರೆ ನಾನು ಹೆಚ್ಚಾಗಿ ಸಿನಿಮಾ ನೋಡುವುದಿಲ್ಲ. ನೋಡಲು ಸಮಯ ಸಿಗುವುದಿಲ್ಲ. ನಾನು ಸಿನಿಮಾ ನೋಡಿ ಇಪ್ಪತ್ತೈದು ವರ್ಷಗಳಾಗಿದೆ. ನಮ್ಮದೇ ಕೆಲವು ಚಿತ್ರಮಂದಿರಗಳು ಇವೆ. ಆದರೂ ಸಹ ನಾನು ಸಿನಿಮಾ ನೋಡಲು ಹೋಗುವುದಿಲ್ಲ. ಈಗ ಎಷ್ಟೋ ದಿನಗಳ ನಂತರ “ತಮಟೆ” ಚಿತ್ರ ದ ಶೋ ರೀಲ್ ಅನ್ನು ಸುಮಾರು ಅರ್ಧ ಗಂಟೆ ಕಾಲ ನೋಡಿದೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ಬಿಡುಗಡೆ ಆದ ಬಳಿಕ ಪೂರ್ಣ ಸಿನಿಮಾ ನೋಡುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು. ಬಳಿಕ ಮಾತು ಮುಂದುವರೆಸಿ, ‘ಮದನ್ ಪಟೇಲ್ ಮೊದಲಿನಿಂದಲೂ ಪರಿಚಯ. ಅವರ ಮಗ ಮಯೂರ್ ಪಟೇಲ್ ಈ ಸಿನಿಮಾ ನಿರ್ದೇಶಿಸುತ್ತಿರುವುದು ಖುಷಿಯ ವಿಷಯ. ‘ತಮಟೆ’ ವಾದ್ಯಗಾರನೊಬ್ಬನ ಜೀವನದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಗ್ರಾಮೀಣ ಸೊಗಡು ಸಹ ಸಿನಿಮಾದಲ್ಲಿದೆ, ಸಿನಿಮಾಕ್ಕೆ ಒಳ್ಳೆಯದಾಗಲಿ’ ಎಂದರು.

ಇದನ್ನೂ ಓದಿ:ಕೇಂದ್ರ ಸರ್ಕಾರದ ವಿರುದ್ಧ ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ: ಡಿಕೆ ಶಿವಕುಮಾರ್​

ವಂದನ್ ಎಂ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಯೂರ್ ಪಟೇಲ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ ಹಾಗೂ ಮದನ್ ಪಟೇಲ್ ಅವರು ಪ್ರಮುಖ ಪಾತ್ರದಲ್ಲಿ “ತಮಟೆ” ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮದನ್ ಪಟೇಲ್, ‘ನಾನು ಕೆಲವು ವರ್ಷಗಳ ಹಿಂದೆ ಈ ಕಾದಂಬರಿ ಬರೆದಿದ್ದೆ. ಈಗ ಅದನ್ನು ಮಯೂರ್ ಪಟೇಲ್ ನಿರ್ದೇಶನ ಮಾಡಿ ಸಿನಿಮಾ ಮಾಡಿದ್ದಾರೆ. ‘ತಮಟೆ’ ವಾದ್ಯಗಾರನೊಬ್ಬನ ಜೀವನದ ಕಥೆಯಿದು. ನಾನು ಈವರೆಗೂ ಮಾಡಿದೇ ಇರುವ ಪಾತ್ರ ಇದು. ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರೊಂದಿಗೆ ಸಂಗೀತವನ್ನು ನೀಡಿದ್ದೇನೆ ಎಂದಿದ್ದಾರೆ. ಈಗಾಗಲೇ ಅನೇಕ ಫಿಲಂ ಫೇಸ್ಟ್​ಗಳಲ್ಲಿ ‘ತಮಟೆ’ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ಅಪ್ಪ ಬರೆದಿರುವ ‘ತಮಟೆ’ ಕಾದಂಬರಿ ಓದುತ್ತಿರುವಾಗಲೇ ಇದು ಸಿನಿಮಾ ಆಗಬಹುದಾದ ಸಬ್ಜೆಕ್ಟ್ ಎನಿಸಿತು. ಈ ಬಗ್ಗೆ ಅಪ್ಪನ ಬಳಿ ಹೇಳಿಕೊಂಡೆ. ನೀನೇ ಚಿತ್ರವನ್ನು ನಿರ್ದೇಶನ ಮಾಡು, ನಾನು ನಿರ್ಮಾಣ ಮಾಡುತ್ತೇನೆ ಎಂದರು. ಆ ಬಳಿಕ ಸಿನಿಮಾದ ಮುಖ್ಯ ಪಾತ್ರಕ್ಕೆ ಸೂಕ್ತವಾದವರನ್ನು ಹುಡುಕುತ್ತಿದ್ದೆ ಆಗ ಈ ಪಾತ್ರವನ್ನು ನಿಮ್ಮ ತಂದೆ ಮಾಡಿದರೆ ಚೆನ್ನಾಗಿರುತ್ತದೆ ಎಂದರು. ಅಪ್ಪ “ತಮಟೆ” ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಭಾವಂತ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನುರಿತ ತಂತ್ರಜ್ಞರು ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲರ ಸಹಕಾರದಿಂದ “ತಮಟೆ” ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು ನಿರ್ದೇಶಕ ಮಯೂರ್ ಪಟೇಲ್. ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ