ಬಿಗ್​ಬಾಸ್ ಗೆದ್ದವರಿಗೆ ಕೊನೆಗೆ ಸಿಗುವ ಹಣವೆಷ್ಟು? ಮಾಜಿ ವಿನ್ನರ್ ಹೇಳಿರುವ ಲೆಕ್ಕ ಕೇಳಿ

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11ರ ವಿಜೇತರಾಗಿದ್ದಾರೆ ಹನುಮಂತ ಲಮಾಣಿ. ಹನುಮಂತನಿಗೆ 50 ಲಕ್ಷ ಬಹುಮಾನದ ಮೊತ್ತ ನೀಡಲಾಗಿದೆ. ಆದರೆ ಬಿಗ್​ಬಾಸ್ ಗೆದ್ದವರಿಗೆ ಸಿಗುವ ಹಣ ಎಷ್ಟು? ಎಷ್ಟು ಹಣ ತೆರಿಗೆಗೆ ಕಟ್ ಆಗುತ್ತದೆ. ಬಿಗ್​ಬಾಸ್​ ಆಯೋಜಕರು ಎಷ್ಟು ಹಣ ಕಟ್ ಮಾಡಿಕೊಳ್ಳುತ್ತಾರೆ. ಈ ಹಿಂದೆ ಬಿಗ್​ಬಾಸ್ ಗೆದ್ದಿದ್ದವರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.

ಬಿಗ್​ಬಾಸ್ ಗೆದ್ದವರಿಗೆ ಕೊನೆಗೆ ಸಿಗುವ ಹಣವೆಷ್ಟು? ಮಾಜಿ ವಿನ್ನರ್ ಹೇಳಿರುವ ಲೆಕ್ಕ ಕೇಳಿ
Bigg Boss Kannada 11

Updated on: Jan 28, 2025 | 3:25 PM

ಬಿಗ್​ಬಾಸ್ ಕನ್ನಡ ಸೀಸನ್ 11 ಮುಗಿದು ಎರಡು ದಿನವಷ್ಟೆ ಆಗಿದೆ. ಹನುಮಂತು ವಿನ್ನರ್ ಆಗಿದ್ದಾರೆ. ಅವರಿಗೆ 50 ಲಕ್ಷ ಹಣವನ್ನು ಬಹುಮಾನವಾಗಿ ಘೋಷಿಸಲಾಗಿದೆ. 50 ಲಕ್ಷ ರೂಪಾಯಿ ಹಣ ಗೆದ್ದಿದ್ದಾರೆ ಆದರೆ ಕೊನೆಯದಾಗಿ ಹನುಮಂತನಿಗೆ ಸಿಗುವ ಹಣ ಎಷ್ಟು ಎಂಬ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿವೆ. ಅಸಲಿಗೆ ಬಿಗ್​ಬಾಸ್ ವಿನ್ನರ್​ಗೆ ಸಿಗುವ ಹಣ ಎಷ್ಟು? ಎಷ್ಟು ಹಣ ಕಟ್ ಆಗುತ್ತದೆ? ಸರ್ಕಾರ ಎಷ್ಟು ತೆಗೆದುಕೊಳ್ಳುತ್ತದೆ? ಇತ್ಯಾದಿಯನ್ನು ಈ ಹಿಂದೆ ಮರಾಠಿ ಬಿಗ್​ಬಾಸ್ ಗೆದ್ದಿದ್ದ ಶಿವ ಠಾಕ್ರೆ ವಿವರಿಸಿದ್ದಾರೆ.

ಶಿವ ಠಾಕ್ರೆ 2019 ರಲ್ಲಿ ಪ್ರಸಾರವಾಗಿದ್ದ ಬಿಗ್​ಬಾಸ್ ಮರಾಠಿ ಸೀಸನ್ 2ರ ವಿನ್ನರ್ ಆಗಿದ್ದರು. ಆಗ ಮರಾಠಿ ಬಿಗ್​ಬಾಸ್​ನ ಬಹುಮಾನದ ಮೊತ್ತ 25 ಲಕ್ಷ ರೂಪಾಯಿಗಳಿತ್ತು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಶಿವ ಠಾಕ್ರೆ. ಬಹುಮಾನದ ಮೊತ್ತಕ್ಕೂ ಕೊನೆಯದಾಗಿ ಸ್ಪರ್ಧಿಗಳಿಗೆ ಸೇರುವ ಮೊತ್ತಕ್ಕೂ ಬಹಳ ಅಂತರ ಇರುತ್ತದೆ ಎಂದಿದ್ದಾರೆ. ತಾವು ಬಿಗ್​ಬಾಸ್ ಗೆದ್ದಾಗ ತಮಗೆ ಎಷ್ಟು ಹಣ ಕೈಗೆ ಸೇರಿತ್ತು ಎಂಬ ಲೆಕ್ಕವನ್ನೂ ಸಹ ನೀಡಿದ್ದಾರೆ.

ನಾನು 25 ಲಕ್ಷ ರೂಪಾಯಿ ಗೆದ್ದಿದ್ದೆ. ಅದರಲ್ಲಿ 35% ಸರ್ಕಾರದ ತೆರಿಗೆ ಕಟ್ ಆಯ್ತು. ಸೋತವರಿಗೆ ನನ್ನ ಮೊತ್ತದಿಂದಲೇ 8 ಲಕ್ಷ ರೂಪಾಯಿ ಕೊಡಲಾಯ್ತು. ಒಟ್ಟಾರೆಯಾಗಿ 11.50 ಲಕ್ಷ ರೂಪಾಯಿ ನನ್ನ ಖಾತೆಗೆ ಬಂತು. ಬಿಗ್​ಬಾಸ್ ಮನೆಯಲ್ಲಿದ್ದಾಗ ಬಟ್ಟೆಗಳಿಗೆ ಬಹಳ ಹಣ ಖರ್ಚಾಗುತ್ತದೆ. ಅವರು ಕೊಡುವ ಬಟ್ಟೆಗಳಿಗೆ, ಅದರ ಸ್ಟೈಲಿಸ್ಟ್​ಗಳಿಗೆ ನಾವೇ ಹಣ ಕೊಡಬೇಕು. ಅದು ದೊಡ್ಡ ಮೊತ್ತವೇ ಆಗುತ್ತದೆ, ಅದಲ್ಲದೆ ನನ್ನ ಪೋಷಕರನ್ನು ವಿಮಾನದಲ್ಲಿ ಶೋ ಫಿನಾಲೆಗೆ ಕರೆದುಕೊಂಡು ಬಂದಿದ್ದರು. ಅದಕ್ಕೂ ನಾನೇ ಹಣ ಕೊಡಬೇಕಾಯ್ತು. ಬಿಗ್​ಬಾಸ್ ಮನೆಯ ಒಳಗೆ ಇದ್ದಾಗಲೂ ಸಾಕಷ್ಟು ಹಣ ಖರ್ಚಾಗುತ್ತದೆ ಎಂದಿದ್ದಾರೆ ಶಿವ ಠಾಕ್ರೆ.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ: ಕೊನೆಯ ಮೆಟ್ಟಿಲಲ್ಲಿ ಎಡವಿದ ಗೌತಮಿ

ಶಿವ ಠಾಕ್ರೆ ಹೇಳಿರುವಂತೆ ಬಿಗ್​ಬಾಸ್ ಹಿಂದಿ ಸೀಸನ್​ನಲ್ಲಿಯೂ ಸಹ ದೊಡ್ಡ ಮೊತ್ತವೇನೂ ಅವರಿಗೆ ಸಿಗಲಿಲ್ಲವಂತೆ. ಬಿಗ್​ಬಾಸ್ ಹಿಂದಿ ಸೀಸನ್ 16 ರಲ್ಲಿ ಶಿವ ಠಾಕ್ರೆ ಭಾಗಿಯಾಗಿದ್ದರು. ಅಲ್ಲಿ ಅವರು ಮೊದಲ ರನ್ನರ್ ಅಪ್. ಆದರೆ ಅಲ್ಲಿಯೂ ಸಹ ಅವರಿಗೆ ನಿರಾಸೆಯೇ ಆಯ್ತಂತೆ. ಮರಾಠಿಯಲ್ಲಿ ಸರಿಯಾಗಿ ಹಣ ಸಿಗಲಿಲ್ಲ, ಹಿಂದಿ ಬಿಗ್​ಬಾಸ್ ಬಹಳ ದೊಡ್ಡ ಶೋ, ಅಲ್ಲಿ ಒಳ್ಳೆಯ ಮೊತ್ತ ಸಿಗುತ್ತೆ ಎಂದುಕೊಂಡು ಹೋಗಿದ್ದೆ ಆದರೆ ಅಲ್ಲಿಯೂ ನಿರಾಸೆಯಾಯ್ತು ಎಂದು ಶಿವ ಠಾಕ್ರೆ ಹೇಳಿಕೊಂಡಿದ್ದಾರೆ.

ಹನುಮಂತನಿಗೆ ಈಗ 50 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಅದರಲ್ಲಿ 35% ಸರ್ಕಾರದ ತೆರಿಗೆಗೆ ಹೋಗುತ್ತದೆ. ಬಿಗ್​ಬಾಸ್ ಮನೆಯಲ್ಲಿದ್ದಾಗ ಹನುಮಂತ ಬಟ್ಟೆಗಳಿಗಾಗಿ ಹೆಚ್ಚು ಹಣ ಖರ್ಚು ಮಾಡಲಿಲ್ಲ ಹಾಗಾಗಿ ಹನುಮಂತ ಅಲ್ಲಿ ತುಸು ಹಣ ಉಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us