
ಹಿಂದಿಯ ‘ಕುಂಕುಮ್ ಭಾಗ್ಯ’ ಧಾರಾವಾಹಿ ಖ್ಯಾತಿಯ ಪ್ರಮುಖ ಕಿರುತೆರೆ ನಟಿ ಸಂಚಿತಾ ಉಗಾಳೆ ಅವರ ನಿಗೂಢ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಜೂನ್ 14 ರಂದು ನಲಸೋಪಾರಾದ ತಮ್ಮ ನಿವಾಸದಲ್ಲಿ ಸಂಚಿತಾ ಆತ್ಮಹತ್ಯೆಗೆ ಶರಣಾಗಿದ್ದರು. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದರ ನಡುವೆ ಸಂಚಿತಾ ತಂದೆ ಮಚ್ಚೀಂದ್ರ ಉಗಾಳೆ ಅವರು ಮಗಳ ಮಾನಸಿಕ ಸ್ಥಿತಿ ಹಾಗೂ ಆಕೆ ಅನುಭವಿಸುತ್ತಿದ್ದ ನರಕಯಾತನೆಯ ಬಗ್ಗೆ ಆಘಾತಕಾರಿ ವಿಷಯಗಳನ್ನು ಹೊರಹಾಕಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸಂಚಿತಾ ಭಾರಿ ಮಾನಸಿಕ ಒತ್ತಡದಲ್ಲಿದ್ದಳು ಮತ್ತು ಯಾರೋ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಂಚಿತಾ ತಂದೆ ಮಚ್ಚೀಂದ್ರ ಉಗಾಳೆ ಅವರು ಮಗಳ ನೋವನ್ನು ಹಂಚಿಕೊಂಡಿದ್ದಾರೆ. ‘ಸಂಚಿತಾ ಯಾವಾಗಲೂ ಅಸಮಾಧಾನದಿಂದ ಇರುತ್ತಿದ್ದಳು. ಆಕೆ ನಮಗೆ ನಿಖರವಾದ ಕಾರಣವನ್ನು ಎಂದಿಗೂ ಹೇಳಲಿಲ್ಲ, ಆದರೆ ಒಳಗೊಳಗೇ ತುಂಬಾ ನೊಂದಿದ್ದಳು. ಹೊರಗೆ ಚೆನ್ನಾಗಿ ಮೂಡ್ನಲ್ಲಿದ್ದಂತೆ ಕಂಡರೂ, ಇದ್ದಕ್ಕಿದ್ದಂತೆ ತೀವ್ರ ಖಿನ್ನತೆಗೆ ಜಾರಿಬಿಡುತ್ತಿದ್ದಳು’ ಎಂದು ಹೇಳಿದ್ದಾರೆ.
ಮಗಳ ನಡವಳಿಕೆಯಲ್ಲಿ ಬದಲಾವಣೆ ಕಂಡಿದ್ದರಿಂದ ಕುಟುಂಬಸ್ಥರು ಆಕೆಯನ್ನು ಯಾವಾಗಲೂ ಒಬ್ಬಳೇ ಬಿಡುತ್ತಿರಲಿಲ್ಲವಂತೆ. ‘ನಾವು ಆಕೆಯ ಪರಿಸ್ಥಿತಿಯನ್ನು ಗಮನಿಸಿದ್ದೆವು. ಅದಕ್ಕಾಗಿಯೇ ಪ್ರತಿದಿನ ಯಾರಾದರೂ ಒಬ್ಬರು ಆಕೆಯ ಜೊತೆಯಲ್ಲೇ ಇರುತ್ತಿದ್ದೆವು. ಘಟನೆ ನಡೆದ ದಿನ ಕೇವಲ ಅರ್ಧ ಗಂಟೆಯಷ್ಟೇ ನಾವು ಆಕೆಯ ಜೊತೆ ಇರಲಿಲ್ಲ, ಬಹುಶಃ ಅದು ನಮ್ಮ ತಪ್ಪು. ಆದರೆ ಆಕೆ ಇಷ್ಟೊಂದು ದೊಡ್ಡ ಹೆಜ್ಜೆ ಇಡುತ್ತಾಳೆ ಎಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.
ತಮ್ಮ ಮಗಳಿಗೆ ಯಾರೋ ನಿರಂತರವಾಗಿ ಬ್ಲ್ಯಾಕ್ಮೇಲ್ ಅಥವಾ ಕಿರುಕುಳ ನೀಡುತ್ತಿದ್ದರು ಎಂದು ತಂದೆ ಮಚ್ಚೀಂದ್ರ ನೇರವಾಗಿ ಆರೋಪಿಸಿದ್ದಾರೆ. ‘ನಾವು ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೆವು. ಆದರೆ ಆಕೆಗೆ ತೀವ್ರವಾಗಿ ಟಾರ್ಚರ್ ನೀಡಲಾಗುತ್ತಿತ್ತು. ಯಾರೋ ಒಬ್ಬರು ನಿರಂತರವಾಗಿ ಆಕೆಗೆ ತೊಂದರೆ ಕೊಡುತ್ತಿದ್ದರು, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಮತ್ತು ಬೇರೆ ವಿಷಯಗಳಿಗೂ ಒತ್ತಡ ಹೇರುತ್ತಿದ್ದರು. ಇದು ಒಂದಲ್ಲ ಒಂದು ರೂಪದಲ್ಲಿ ನಡೆಯುತ್ತಲೇ ಇತ್ತು. ಸತ್ಯ ಏನೆಂಬುದು ಸದ್ಯದಲ್ಲೇ ನನ್ನ ಮುಂದೆ ಬರಲಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ
ತಮ್ಮ ಮಗಳಿಗೆ ಹಾಗೂ ದೇಶದ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಇಂತಹ ಪರಿಸ್ಥಿತಿ ಬರಬಾರದು, ನನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ಅವರು ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಸಂಚಿತಾ ಅವರ ಮೃತದೇಹ ಒಳಗಡೆಯಿಂದ ಲಾಕ್ ಆಗಿದ್ದ ಕೋಣೆಯಲ್ಲಿ ಪತ್ತೆಯಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಪ್ರಾಥಮಿಕ ತನಿಖೆಯಲ್ಲಿ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.