ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ ‘ಲ್ಯಾಂಡ್ ಲಾರ್ಡ್​’ ಸಿನಿಮಾ; ಇಲ್ಲಿದೆ ವಿವರ

ಜೀ ಕನ್ನಡದಲ್ಲಿ ಕನ್ನಡದ ಬ್ಲಾಕ್​​ಬಸ್ಟರ್ ಸಿನಿಮಾ ‘ಲ್ಯಾಂಡ್ ಲಾರ್ಡ್’ ಮೇ 22ರಂದು ಸಂಜೆ 4 ಗಂಟೆಗೆ ಪ್ರಸಾರವಾಗಲಿದೆ. ದುನಿಯಾ ವಿಜಯ್, ರಚಿತಾ ರಾಮ್ ಮತ್ತು ರಾಜ್ ಬಿ. ಶೆಟ್ಟಿ ನಟನೆಯ ಈ ಚಿತ್ರ, ಸಾಮಾಜಿಕ ಅಸಮಾನತೆ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡುವ ಕಥೆಯನ್ನು ಹೊಂದಿದೆ. ಕುಟುಂಬ ಸಮೇತ ನೋಡಬಹುದಾದ ಈ ಸಿನಿಮಾ, ನ್ಯಾಯಕ್ಕಾಗಿ ಸಾಮಾನ್ಯ ಜನರು ಹೇಗೆ ಧ್ವನಿ ಎತ್ತುತ್ತಾರೆ ಎಂಬುದನ್ನು ತೋರಿಸುತ್ತದೆ.

ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ ‘ಲ್ಯಾಂಡ್ ಲಾರ್ಡ್​’ ಸಿನಿಮಾ; ಇಲ್ಲಿದೆ ವಿವರ
ಲ್ಯಾಂಡ್​ಲಾರ್ಡ್ ಸಿನಿಮಾ

Updated on: May 22, 2026 | 12:56 PM

ಧಾರಾವಾಹಿ ಹಾಗೂ ರಿಯಾಲಿಟಿ ಶೋ ಪ್ರಸಾರ ಮಾಡುವ ಮೂಲಕ ಜೀ ಕನ್ನಡ ವಾಹಿನಿ ಕಿರುತೆರೆ ವೀಕ್ಷಕರ ಮನ ಗೆದ್ದಿದೆ. ಈಗ ಜೀ ಕನ್ನಡದಲ್ಲಿ (Zee Kannada) ಕನ್ನಡದ ಬ್ಲಾಕ್​​ಬಸ್ಟರ್ ಸಿನಿಮಾ ‘ಲ್ಯಾಂಡ್ ಲಾರ್ಡ್ ಪ್ರಸಾರ ಕಾಣುತ್ತಿದೆ. ಶನಿವಾರ (ಮೇ 22) ಸಂಜೆ 4 ಗಂಟೆಗೆ ಸಿನಿಮಾ ಪ್ರಸಾರ ಕಾಣಲಿದೆ. ಥಿಯೇಟರ್ ಹಾಗೂ ಒಟಿಟಿಯಲ್ಲಿ ಮಿಸ್ ಮಾಡಿಕೊಂಡವರು ಟಿವಿಯಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ.

‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ 80ರ ದಶಕದ ಕಥೆ ಇದೆ. ಈ ಸಿನಿಮಾ, ಶೋಷಣೆ, ಸಾಮಾಜಿಕ ಅಸಮಾನತೆ, ಬಡವರ ಮೇಲಿನ ದಬ್ಬಾಳಿಕೆ ಹಾಗೂ ಅದರ ವಿರುದ್ಧ ಧ್ವನಿ ಎತ್ತುವ ಕಥೆಯನ್ನು ಹೊಂದಿದೆ. ಸಮಾಜದಲ್ಲಿನ ಜಾತಿ ತಾರತಮ್ಯದ ಕ್ರೂರ ಮುಖ ಮತ್ತು ಸಾಮಾನ್ಯ ಜನರು ಒಟ್ಟಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದಾಗ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಸಂದೇಶವನ್ನು ಸಿನಿಮಾದಲ್ಲಿ ಹೇಳಲಾಗಿದೆ. ಇಡೀ ಕುಟುಂಬ ಒಟ್ಟಾಗಿ ಕುಳಿತು ಆನಂದಿಸಬಹುದಾದ ಕೌಟುಂಬಿಕ ಚಿತ್ರ ಇದಾಗಿದೆ.

ಶಾಂತಿಯುತ ಬದುಕನ್ನು ಆಶಿಸುವ ರಾಚಯ್ಯ (ದುನಿಯಾ ವಿಜಯ್), ತನ್ನ ಪತ್ನಿ ನಿಂಗವ್ವ (ರಚಿತಾ ರಾಮ್) ಮತ್ತು ಮಗಳೊಂದಿಗೆ ತನ್ನದೇ ಆದ ಪುಟ್ಟ ಜಮೀನನ್ನು ಹೊಂದಬೇಕೆಂಬ ಆಸೆಯಿಂದ ಬದುಕುತ್ತಿರುತ್ತಾನೆ. ಆದರೆ ಆ ಹಳ್ಳಿಯಲ್ಲಿ ಪ್ರಭಾವಶಾಲಿ ಜಮೀನ್ದಾರನಾದ ಸಣ್ಣ ಧಣಿ (ರಾಜ್ ಬಿ. ಶೆಟ್ಟಿ) ತನಗಿರುವ ರಾಜಕೀಯ ಹಾಗೂ ಸಾಮಾಜಿಕ ಬಲದಿಂದ ಇಡೀ ಗ್ರಾಮವನ್ನೇ ತನ್ನ ಹತೋಟಿಯಲ್ಲಿಟ್ಟುಕೊಂಡಿರುತ್ತಾನೆ. ಕಾನೂನು ಹಾಗೂ ನ್ಯಾಯದ ಮೇಲೆ ಅಪಾರ ನಂಬಿಕೆ ಇಟ್ಟಿರುವ ರಾಚಯ್ಯನಿಗೆ, ಗ್ರಾಮಸ್ಥರು ಅನುಭವಿಸುತ್ತಿರುವ ಹಿಂಸೆ ಮತ್ತು ಭಯ ಅರಿವಾಗುತ್ತದೆ. ಯಾವಾಗ ಹಳ್ಳಿಯ ಒಂದು ಮುಗ್ಧ ಕುಟುಂಬ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುತ್ತದೆಯೋ, ಆಗ ಗ್ರಾಮಸ್ಥರ ತಾಳ್ಮೆ ಗೆಡುತ್ತದೆ. ಅಲ್ಲಿಯವರೆಗೆ ಸೌಮ್ಯನಾಗಿದ್ದ ರಾಚಯ್ಯ, ಧಣಿಯ ದಬ್ಬಾಳಿಕೆಯನ್ನು ಸಹಿಸದೆ ಹಳ್ಳಿಯ ಜನರ ಪರವಾಗಿ ಧ್ವನಿ ಎತ್ತುವ ಜನನಾಯಕನಾಗಿ ಬದಲಾಗುತ್ತಾನೆ.


ಇದನ್ನೂ ಓದಿ: ‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್

ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಕೆಮಿಸ್ಟ್ರಿ ಕೆಲಸ ಮಾಡಿದೆ. ರಚಿತಾ ಅವರು ಡಿ ಗ್ಲಾಮ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಪಾತ್ರ ಗಮನ ಸೆಳೆದಿದೆ. ವಂಚನೆ ಎಸಗುವ ಜಮೀನ್ದಾರನ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಮತ್ತೊಮ್ಮೆ ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಪ್ರೇಕ್ಷಕರನ್ನು ಗಮನ ಸೆಳೆದಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಮಗಳು ಮೋನಿಷಾ ನಟಿಸಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us