ನಿರ್ದೇಶಕ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸೂರ್ಯ ಕಿರಣ್​ ಜಾಂಡಿಸ್​ನಿಂದ ನಿಧನ

ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಸೂರ್ಯ ಕಿರಣ್​ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದ ಸುದ್ದಿ ತಿಳಿದು ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಜಾಂಡಿಸ್​ನಿಂದ ಬಳಲುತ್ತಿದ್ದ ಸೂರ್ಯ ಕಿರಣ್​ ಅವರನ್ನು ಚೆನ್ನೈನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು (ಮಾ.11) ಅವರು ನಿಧನರಾಗಿದ್ದಾರೆ.

ನಿರ್ದೇಶಕ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸೂರ್ಯ ಕಿರಣ್​ ಜಾಂಡಿಸ್​ನಿಂದ ನಿಧನ
ಸೂರ್ಯ ಕಿರಣ್​

Updated on: Mar 11, 2024 | 8:29 PM

ತೆಲುಗು ಚಿತ್ರರಂಗದಿಂದ ಕಹಿ ಸುದ್ದಿ ಕೇಳಿಬಂದಿದೆ. ಟಾಲಿವುಡ್​ (Tollywood) ಸಿನಿಮಾ ನಿರ್ದೇಶಕ ಸೂರ್ಯ ಕಿರಣ್​ ಅವರು ನಿಧನರಾಗಿದ್ದಾರೆ. ಜಾಂಡಿಸ್​ನಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಇಂದು (ಮಾರ್ಚ್​ 11) ಕೊನೆಯುಸಿರು ಎಳೆದಿದ್ದಾರೆ. ಅವರ ಸಾವಿನ ಸುದ್ದಿಯನ್ನು ಆಪ್ತರು ಖಚಿತಪಡಿಸಿದ್ದಾರೆ. ಸೂರ್ಯ ಕಿರಣ್ (Surya Kiran)​ ಅವರಿಗೆ 51 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ (Surya Kiran Death) ಟಾಲಿವುಡ್​ನ ಅನೇಕರು ಕಂಬನಿ ಮಿಡಿದಿದ್ದಾರೆ. ಸಿನಿಮಾ ಮಾತ್ರವಲ್ಲದೇ ‘ಬಿಗ್​ ಬಾಸ್​ ತೆಲುಗು’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಸೂರ್ಯ ಕಿರಣ್​ ಅವರು ಫೇಮಸ್​ ಆಗಿದ್ದರು.

ಸೂರ್ಯ ಕಿರಣ್​ ಅವರ ನಿಧನದ ಸುದ್ದಿಯನ್ನು ಪಿಆರ್​ಒ ಸುರೇಶ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ‘ಜಾಂಡಿಸ್​ನಿಂದ ಸೂರ್ಯ ಕಿರಣ್​ ನಿಧನರಾಗಿದ್ದಾರೆ. ತೆಲುಗಿನಲ್ಲಿ ‘ಸತ್ಯಂ’, ‘ರಾಜು ಭಾಯ್​’ ಮುಂತಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಎಕ್ಸ್​ನಲ್ಲಿ (ಟ್ವಿಟರ್​) ಸುರೇಶ್​ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಖ್ಯಾತ ಕಿರುತೆರೆ ಕಲಾವಿದೆಗೆ ಹೃದಯಾಘಾತ; ನಟಿ, ನಿರ್ದೇಶಕಿ ಕವಿತಾ ಚೌಧರಿ ನಿಧನ

ಸೂರ್ಯ ಕಿರಣ್​ ಅವರ ಕುಟುಂಬದವರು ಮೂಲತಃ ಕೇರಳದ ತಿರುವನಂತಪುರದವರು. ಸೂರ್ಯ ಕಿರಣ್​ ಜನಿಸಿದ್ದು ಚೈನ್ನೈನಲ್ಲಿ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅವರು ಬಾಲನಟನಾಗಿ ಅಭಿನಯಿಸಿದ್ದರು. ಆ ಮೂಲಕ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದರು. ಆಗ ಅವರನ್ನು ಮಾಸ್ಟರ್​ ಸುರೇಶ್​ ಎಂದು ಕರೆಯಲಾಗುತ್ತಿತ್ತು. ಸೂರ್ಯ ಕಿರಣ್​ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಸತ್ಯಂ’ 2003ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಜೆನಿಲಿಯಾ ಡಿಸೋಜಾ ಮತ್ತು ಸುಮಂತ್​ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು.

ಮೊದಲ ಸಿನಿಮಾದಲ್ಲೇ ಸೂರ್ಯ ಕಿರಣ್​ ಅವರು ಯಶಸ್ಸು ಕಂಡಿದ್ದರು. ‘ಸತ್ಯಂ’ ಸಿನಿಮಾ 150 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಬಳಿಕ 2006ರಲ್ಲಿ ‘ಬ್ರಹ್ಮಾಸ್ತ್ರ’, 2007ರಲ್ಲಿ ‘ರಾಜು ಭಾಯ್​’, 2020ರಲ್ಲಿ ‘ಚಾಪ್ಟರ್​ 6’ ಸಿನಿಮಾಗಳನ್ನು ಅವರು ನಿರ್ಧರಿಸಿದ್ದರು. ‘ಬಿಗ್​ ಬಾಸ್​ ತೆಲುಗು ಸೀಸನ್​ 4’ ಶೋನಲ್ಲಿ ಅವರು ಸ್ಪರ್ಧಿಸಿದ್ದರು. ಕೆಲವು ವರ್ಷಗಳಿಂದ ಈಚೆಗೆ ಸೂರ್ಯ ಕಿರಣ್​ ಅವರು ನಟನೆ ಮತ್ತು ನಿರ್ದೇಶನದಿಂದ ದೂರ ಉಳಿದುಕೊಂಡಿದ್ದರು. ಕಮ್​ಬ್ಯಾಕ್​ ಮಾಡಬೇಕು ಎಂಬ ಆಲೋಚನೆ ಅವರಿಗೆ ಇತ್ತು. ಅಷ್ಟರಲ್ಲಾಗಲೇ ಅನಾರೋಗ್ಯದಿಂದ ಅವರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us