Manchu Vishnu: ಮನೆಗೆ ನುಗ್ಗಿ ಸಂಬಂಧಿ ಮೇಲೆ ನಟ ಮಂಚು ವಿಷ್ಣು ಹಲ್ಲೆ, ವಿಡಿಯೋ ವೈರಲ್

ತೆಲುಗು ನಟ ಮಂಚು ವಿಷ್ಣು, ಮಧ್ಯರಾತ್ರಿ ಮನೆಗೆ ನುಗ್ಗಿ ತಮ್ಮ ಸಂಬಂಧಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರ ಸಹೋದರ ಮಂಚು ಮನೋಜ್ ಆರೋಪಿಸಿ, ವಿಡಿಯೋ ಹಂಚಿಕೊಂಡಿದ್ದಾರೆ.

Manchu Vishnu: ಮನೆಗೆ ನುಗ್ಗಿ ಸಂಬಂಧಿ ಮೇಲೆ ನಟ ಮಂಚು ವಿಷ್ಣು ಹಲ್ಲೆ, ವಿಡಿಯೋ ವೈರಲ್
ಮಂಚು ವಿಷ್ಣು

Updated on: Mar 24, 2023 | 3:21 PM

ತೆಲುಗು ಚಿತ್ರರಂಗದ (Tollywood) ಜನಪ್ರಿಯ ಕುಟುಂಬಗಳಲ್ಲಿ ಮಂಚು ಕುಟುಂಬವೂ (Manchu Family) ಒಂದು. ಮೆಗಾ ಫ್ಯಾಮಿಲಿ, ನಂದಮೂರಿ ಕುಟುಂಬ, ಅಕ್ಕಿನೇನಿ, ದಗ್ಗುಬಾಟಿ ಕುಟುಂಬಗಳಷ್ಟು ತೆಲುಗು ಚಿತ್ರರಂಗದ ಮೇಲೆ ಹಿಡಿತ ಮಂಚು ಕುಟುಂಬಕ್ಕೆ ಇಲ್ಲದಿದ್ದರೂ ಹಲವು ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿ ಆರಕ್ಕೇರದ, ಮೂರಕ್ಕಿಳಿದಂತಿದ್ದಾರೆ ಈ ಕುಟುಂಬದವರು. ಕಳೆದ ವರ್ಷ ನಡೆದ ತೆಲುಗು ಚಿತ್ರರಂಗದ ಕಲಾವಿದರ ಸಂಘದ (ಮಾ) ಅಧ್ಯಕ್ಷರಾಗಿ ಇದೇ ಕುಟುಂಬದ ನಟ ಮಂಚು ವಿಷ್ಣು ಆಯ್ಕೆ ಆಗಿ ಗಮನ ಸೆಳೆದಿದ್ದರು. ಆದರೆ ಇದೀಗ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ನಟ ಮಂಚು ವಿಷ್ಣು ತಮ್ಮ ಸಂಬಂಧಿ ಸಾರಥಿ ಎಂಬುವರ ಮನೆಗೆ ಮಧ್ಯರಾತ್ರಿ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಅವರ ಅಸಹೋದರ ಮಂಚು ಮನೋಜ್ ಆರೋಪಿಸಿದ್ದಾರೆ. ಹಲ್ಲೆಗೆ ಯತ್ನಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅಸಲಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದು ಮಂಚು ವಿಷ್ಣು ಸಹೋದರ ನಟ ಮಂಚು ಮನೋಜ್.

ಹಿರಿಯ ನಟ ಮೋಹನ್​ಬಾಬು ಮಕ್ಕಳಾಗಿರುವ ಮಂಚು ವಿಷ್ಣು ಹಾಗೂ ಮಂಚು ಮನೋಜ್ ನಡುವೆ ಹಲವು ದಿನಗಳಿಂದಲೂ ವೈಮನಸ್ಯವಿದೆ. ಆಸ್ತಿಗೆ ಸಂಬಂಧಿಸಿದಂತೆ ಈ ಇಬ್ಬರೂ ಜಗಳವಾಡಿದ್ದಾರೆ ಎನ್ನಲಾಗಿದ್ದು, ಆಸ್ತಿ ಹಂಚಿಕೆ ವಿಚಾರವಾಗಿ ಇಬ್ಬರೂ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ ಎಂದು ಕೆಲ ತಿಂಗಳ ಹಿಂದೆ ವರದಿಯಾಗಿತ್ತು.

ಇದೀಗ ಮಂಚು ಮನೋಜ್ ಬಳಿ ಕೆಲಸ ಮಾಡುತ್ತಿರುವ ಅವರ ಸಂಬಂಧಿಯೇ ಆಗಿರುವ ಸಾರಥಿ ಎಂಬುವರ ಮನೆಗೆ ನುಗ್ಗಿರುವ ವಿಷ್ಣು ಮನೆಯಲ್ಲಿ ಗಲಾಟೆ ಮಾಡಿದ್ದಾರೆ. ಮಂಚು ವಿಷ್ಣು ಮನೆಗೆ ನುಗ್ಗಿರುವ ದೃಶ್ಯವನ್ನು ಮನೋಜ್ ಅವರೇ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಮಂಚು ಹೇಳಿರುವಂತೆ, ತಮ್ಮ ಬಳಿ ಕೆಲಸ ಮಾಡುವ ಸಾರಥಿ ಮನೆಗೆ ನುಗ್ಗಿ ಮಂಚು ವಿಷ್ಣು ಹಲ್ಲೆ ಮಾಡಿದ್ದಾನೆ. ಇದಕ್ಕೆ ಮುಂಚೆಯೂ ಈ ರೀತಿ ಮಧ್ಯ ರಾತ್ರಿ ಮನೆಗೆ ಹಲ್ಲೆ ಮಾಡಿದ್ದ ಎಂದಿದ್ದಾರೆ. ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಕೆಲವು ಗಂಟೆಗಳ ಬಳಿಕ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ ಮಂಚು ಮನೋಜ್.

ಸಾರಥಿ ಈ ಮೊದಲು ಮಂಚು ವಿಷ್ಣು ಬಳಿ ಕೆಲಸ ಮಾಡುತ್ತಿದ್ದರು. ಮಂಚು ವಿಷ್ಣುವಿನ ಹಣಕಾಸು ವ್ಯವಹಾರ ಇನ್ನಿತರೆಗಳನ್ನು ಸಾರಥಿ ನೋಡಿಕೊಳ್ಳುತ್ತಿದ್ದರಂತೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಸಾರಥಿ ಮಂಚು ಮನೋಜ್​ಗಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಸಿಟ್ಟಿಗೆ ಮಂಚು ವಿಷ್ಣು, ಸಾರಥಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ದೂರು ಇನ್ನೂ ದಾಖಲಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Fri, 24 March 23

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us