
ತೆಲುಗು ಚಿತ್ರರಂಗದ (Tollywood) ಭಾರತದ ಅತ್ಯಂತ ಯಶಸ್ವಿ ಚಿತ್ರರಂಗ. ಅತಿ ಹೆಚ್ಚು ಸಿನಿಮಾಗಳನ್ನು ಗೆಲ್ಲುತ್ತಿರುವುದು ಲಾಭ ಮಾಡುತ್ತಿರುವುದು ಅದೇ ಚಿತ್ರರಂಗದಲ್ಲಿ. ಹಣದ ಹರಿವು ಹೆಚ್ಚಾದಂತೆ ಚಿತ್ರರಂಗದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದು, ಕಳೆದ ಒಂದೆರಡು ವಾರಗಳಿಂದ, ನಿರ್ಮಾಪಕರು, ವಿತರಕರು ಪರಸ್ಪರ ಬಹಿರಂಗವಾಗಿ ಟೀಕೆ, ನಿಂದನೆಗಳನ್ನು ಮಾಡುತ್ತಿದ್ದರು. ಆದರೆ ತೆಲುಗು ಸಿನಿಮಾ ಚೇಂಬರ್ ಮಧ್ಯಸ್ಥಿಕೆಯಲ್ಲಿ ಇಂದು ಅತ್ಯಂತ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಸಹ ಬಹಳ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕೊನೆಗೂ ಎಲ್ಲವೂ ಶಾಂತವಾಗಿ ಮುಗಿದಿದೆ ಎನ್ನಲಾಗಿದೆ.
ವಿತರಕರು ಮತ್ತು ಸಿನಿಮಾ ಪ್ರದರ್ಶಕರು ತಮಗೂ ಲಾಭ ಹಂಚಿಕೆ ವಿಧಾನದಲ್ಲಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮಲ್ಟಿಪ್ಲೆಕ್ಸ್ಗಳು ಹೇಗೆ ಸಿನಿಮಾದ ಗಳಿಕೆಯಲ್ಲಿ ಪರ್ಸೆಂಟೇಜು ಲಾಭ ಪಡೆಯುತ್ತವೆಯೋ ಹಾಗೆಯೇ ತಮಗೂ ಪರ್ಸೆಂಟೇಜು ಮಾದರಿಯಲ್ಲಿ ಹಣ ಬೇಕು ಎಂದು ಒತ್ತಾಯಿಸಿದ್ದರು. ಆದರೆ ಸಿನಿಮಾ ನಿರ್ಮಾಪಕರುಗಳು ಇದಕ್ಕೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ತೆಲುಗು ಚಿತ್ರರಂಗದಲ್ಲಿ ಎರಡು ಮೂರು ಬಣಗಳೇ ಆಗಿಬಿಟ್ಟಿದ್ದವು. ನಿರ್ಮಾಪಕ ನಾಗವಂಶಿ ಹಾಗೂ ಇನ್ನಿತರರು ಕೆಲ ವಿತರಕರು, ಸಿನಿಮಾ ಪ್ರದರ್ಶಕರ ಮೇಲೆ ಏಕವಚನದ ವಾಗ್ದಾಳಿ ಸಹ ನಡೆಸಿದ್ದರು. ವಿಶೇಷವಾಗಿ ಖ್ಯಾತ ನಿರ್ಮಾಪಕ, ಹಲವಾರು ಸಿನಿಮಾ ಮಂದಿರಗಳ ಮಾಲೀಕ ಆಗಿರುವ ಏಷಿಯನ್ ಸುನಿಲ್ ವಿರುದ್ಧ ಹಲವು ನಿರ್ಮಾಪಕರುಗಳು ಗರಂ ಆಗಿದ್ದರು.
ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾಗೆ ಕಂಬ್ಯಾಕ್ ತಡವಾಗುತ್ತಿರುವುದಕ್ಕೆ ರಾಜಕೀಯವಲ್ಲ ಕಾರಣ
ಆದರೆ ಇಂದು ಚೇಂಬರ್ ಅಧ್ಯಕ್ಷ ಖ್ಯಾತ ನಿರ್ಮಾಪಕ ಸುರೇಶ್ ಬಾಬು ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲೂ ಸಹ ನಾಗವಂಶಿ ಸೇರಿದಂತೆ ಕೆಲವಾರು ನಿರ್ಮಾಪಕರು ಏಷಿಯನ್ ಸುನಿಲ್ ಮತ್ತು ಅವರ ಆಪ್ತರೊಡನೆ ಏರಿದ ಧನಿಯಲ್ಲಿ ಜಗಳ ಮಾಡಿದ್ದಾರೆ. ಆದರೆ ಸುರೇಶ್ ಹಾಗೂ ತೆಲಂಗಾಣ ಸಿನಿಮಾ ಸಮಿತಿ ಅಧ್ಯಕ್ಷ ದಿಲ್ ರಾಜು ಅವರ ಮಧ್ಯಸ್ಥಿಕೆಯಿಂದ ಸಂಧಾನ ಯಶಸ್ವಿ ಆಗಿದ್ದು, ನಿರ್ಮಾಪಕರುಗಳು ಲಾಭಾಂಶ ಹಂಚಿಕೆಗೆ ಒಪ್ಪಿಗೆ ನೀಡಿದ್ದಾರೆ.
ಸಭೆಯ ಬಳಿಕ ಫಿಲಂ ಚೇಂಬರ್ ಅಧ್ಯಕ್ಷ ಸುರೇಶ್ ಬಾಬು ಹೇಳಿದಂತೆ, ‘ನಿರ್ಮಾಪಕರುಗಳು ಲಾಭಾಂಶ ಹಂಚಿಕೆಗೆ ಒಪ್ಪಿಕೊಂಡಿದ್ದು, ಕೆಲವೇ ದಿನಗಳಲ್ಲಿ ಈ ಕುರಿತು ಸಮಿತಿಯೊಂದನ್ನು ರಚಿಸಲಾಗುತ್ತದೆ. ಮತ್ತು ಆ ಸಮಿತಿಯು ವಿವಿಧ ಸೆಂಟರ್ಗಳ ಲಾಭಾಂಶ ಹಂಚಿಕೆ ಪ್ರಮಾಣವನ್ನು ನಿರ್ಧರಿಸುತ್ತದೆ’ ಎಂದಿದ್ದಾರೆ. ‘ಪೆದ್ದಿ’ ಸಿನಿಮಾಕ್ಕೂ ಲಾಭಾಂಶ ಹಂಚಿಕೆ ಬೇಕೆಂದು ಪ್ರದರ್ಶಕರು, ವಿತರಕರು ಪಟ್ಟು ಹಿಡಿದಿದ್ದರು, ಆದರೆ ನಿರ್ಮಾಪಕರು ಕಡ್ಡಾಯವಾಗಿ ಇದಕ್ಕೆ ಒಪ್ಪದ ಕಾರಣ ‘ಪೆದ್ದಿ’ ಸಿನಿಮಾದ ಬಳಿಕ ಬಿಡುಗಡೆ ಆಗುವ ಸಿನಿಮಾಗಳಿಗೆ ಮಾತ್ರವೇ ಲಾಭಾಂಶ ಹಂಚಿಕೆ ಆಗಲಿದೆ. ಲಾಭಾಂಶ ಹಂಚಿಕೆ ಮಾದರಿಯಿಂದ ತಪ್ಪಿಸಿಕೊಳ್ಳಲೆಂದು ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬೇಗನೆ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ