‘ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಹುಡುಗ ಇಂದು ಅವರ ಪಕ್ಷವನ್ನೇ ಮುಗಿಸಿದ’: ಆರ್​ಜಿವಿ

ದಳಪತಿ ವಿಜಯ್ ಅವರನ್ನು ತಮ್ಮ ‘ಜನ ನಾಯಕ’ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಅವರು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಡಿಎಂಕೆ ಪಕ್ಷದ ಎದುರು ವಿಜಯ್ ಅವರ ಟಿವಿಕೆ ಪಕ್ಷ ಸಾಧಿಸಿದ ಅಭೂತಪೂರ್ವ ಗೆಲುವಿನ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರು ಟ್ವೀಟ್ ಮಾಡಿದ್ದಾರೆ.

‘ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಹುಡುಗ ಇಂದು ಅವರ ಪಕ್ಷವನ್ನೇ ಮುಗಿಸಿದ’: ಆರ್​ಜಿವಿ
Thalapathy Vijay, M Karunanidhi Viral Photo

Updated on: May 05, 2026 | 3:08 PM

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಮನ್ವಂತರ ಆರಂಭವಾಗಿದೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಈ ಮೂಲಕ ಆರು ಬಾರಿ ತಮಿಳುನಾಡನ್ನು ಆಳಿದ್ದ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ (DMK) ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿಜಯ್ ಅವರ ಬಗ್ಗೆ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಪೋಸ್ಟ್ ಮಾಡಿದ್ದಾರೆ.

ದಳಪತಿ ವಿಜಯ್ ಅವರ ಈ ಸ್ಮರಣೀಯ ಗೆಲುವಿನ ಕುರಿತು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಡಿಎಂಕೆ ಮುಖಂಡ, ದಿವಂಗತ ಎಂ. ಕರುಣಾನಿಧಿ ಅವರ ಹಿಂದೆ ವಿಜಯ್ ನಿಂತಿರುವ ಹಳೆಯ ಫೋಟೋವೊಂದನ್ನು ವರ್ಮಾ ಹಂಚಿಕೊಂಡಿದ್ದಾರೆ.

ಇದಕ್ಕೆ ಕ್ಯಾಪ್ಷನ್ ನೀಡಿರುವ ರಾಮ್ ಗೋಪಾಲ್ ವರ್ಮಾ ಅವರು, ‘ತನ್ನ ಹಿಂದೆ ನಿಂತಿರುವ ಈ ಹುಡುಗ ಒಂದು ದಿನ ತಮ್ಮ ಪಕ್ಷವನ್ನೇ ನಾಶ ಮಾಡುತ್ತಾನೆ ಎಂದು ಕರುಣಾನಿಧಿ ಅವರು ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಡಿಎಂಕೆ ಭದ್ರಕೋಟೆಯನ್ನು ವಿಜಯ್ ತಲ್ಲಣಗೊಳಿಸಿರುವುದನ್ನು ವರ್ಮಾ ವ್ಯಂಗ್ಯವಾಗಿ ಶ್ಲಾಘಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿರ್ಗಮಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ನಾವು ನೋಡದ ಗೆಲುವಿಲ್ಲ, ನಾವು ಎದುರಿಸದ ಸೋಲು ಕೂಡ ಇಲ್ಲ’ ಎಂದು ಹೇಳುವ ಮೂಲಕ ಪರಾಜಯವನ್ನು ವಿನಮ್ರವಾಗಿ ಒಪ್ಪಿಕೊಂಡಿದ್ದಾರೆ. ರಾಜಕೀಯದಲ್ಲಿ ಮೊದಲ ಯತ್ನದಲ್ಲೇ ಭರ್ಜರಿ ಗೆಲುವು ದಾಖಲಿಸಿದ ವಿಜಯ್ ಅವರಿಗೆ ರಜನಿಕಾಂತ್, ಕಮಲ್ ಹಾಸನ್, ವಿಕ್ರಮ್, ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ, ಎ.ಆರ್. ರೆಹಮಾನ್, ಮೋಹನ್ ಲಾಲ್ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಚಿತ್ರತಾರೆಯರು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಜಯಭೇರಿ ಬಾರಿಸಿದ ಟಿವಿಕೆ: ದಳಪತಿ ವಿಜಯ್ ಮನೆ ಎದುರು ಪೊಲೀಸ್ ಬಿಗಿ ಭದ್ರತೆ

1992ರಲ್ಲಿ ‘ನಾಳಯ ತೀರ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ವಿಜಯ್, 34 ವರ್ಷಗಳ ಕಾಲ ಚಿತ್ರರಂಗವನ್ನು ಆಳಿದರು. 2024ರಲ್ಲಿ ಟಿವಿಕೆ ಪಕ್ಷವನ್ನು ಸ್ಥಾಪಿಸಿ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿದರು. ಅವರ ಅಭಿನಯದ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಕನ್’ ಇನ್ನೂ ಬಿಡುಗಡೆಯಾಗಬೇಕಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us