ಲಾಕ್​ಡೌನ್​ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲು

ಬಾಂದ್ರಾ ಸುತ್ತಮುತ್ತ ಟೈಗರ್​ ಶ್ರಾಫ್​ ಮತ್ತು ದಿಶಾ ಪಟಾನಿ ಅನವಶ್ಯಕವಾಗಿ ತಿರುಗಾಡುತ್ತಿರುವುದನ್ನು ಕಂಡು ಪೊಲೀಸರು ಅವರನ್ನು ತಡೆದಿದ್ದಾರೆ. ಹೊರಗಡೆ ಸುತ್ತಾಡುತ್ತಿರುವುದಕ್ಕೆ ಈ ಜೋಡಿ ಸರಿಯಾದ ಕಾರಣವನ್ನು ನೀಡಿಲ್ಲ.

ಲಾಕ್​ಡೌನ್​ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲು
ದಿಶಾ ಪಟಾನಿ, ಟೈಗರ್ ಶ್ರಾಫ್

Updated on: Jun 03, 2021 | 10:54 AM

ಕೊರೊನಾ ವೈರಸ್​ ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ದೇಶದ ಹಲವು ಕಡೆಗಳಲ್ಲಿ ಲಾಕ್​ಡೌನ್ ಜಾರಿ ಮಾಡಲಾಗಿದೆ. ಜನಸಾಮಾನ್ಯರಿಗೆ ಮಾತ್ರವಲ್ಲದೆ ಸೆಲೆಬ್ರಿಟಿಗಳಿಗೂ ಈ ನಿಯಮಗಳು ಅನ್ವಯ ಆಗುತ್ತವೆ. ಅನವಶ್ಯಕವಾಗಿ ಹೊರಗಡೆ ಸುತ್ತಾಡಿದರೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಸೆಲೆಬ್ರಿಟಿಗಳು ಕೂಡ ಲಾಕ್​ಡೌನ್​ ನಿಯಮಗಳಿಗೆ ಬದ್ಧರಾಗಿರಬೇಕು. ಆದರೆ ಕೆಲವು ಸ್ಟಾರ್​ಗಳ ತಮ್ಮ ಮನ ಬಂದಂತೆ ತಿರುಗಾಡುತ್ತ, ಪೊಲೀಸರಿಂದ ಕೇಸ್​ ಜಡಿಸಿಕೊಂಡಿದ್ದಾರೆ. ನಟಿ ದಿಶಾ ಪಟಾನಿ ಮತ್ತು ಟೈಗರ್​ ಶ್ರಾಫ್​ಗೆ ಹೀಗೆಯೇ ಆಗಿದೆ.

ದಿಶಾ ಮತ್ತು ಟೈಗರ್​ ಇಬ್ಬರೂ ಬುಧವಾರ (ಜೂ.2) ಜಿಮ್​ ಮುಗಿಸಿ ತಮ್ಮ ಐಷಾರಾಮಿ ಕಾರಲ್ಲಿ ಮುಂಬೈ ಸುತ್ತಾಟ ಮಾಡೋಕೆ ಮುಂದಾಗಿದ್ದಾರೆ. ದಿಶಾ ಕಾರಿನಲ್ಲಿ ಮುಂಭಾಗದಲ್ಲಿ ಕೂತಿದ್ದರೆ ಟೈಗರ್​ ಹಿಂಭಾಗದಲ್ಲಿ ಕೂತಿದ್ದರಂತೆ. ಬಾಂದ್ರಾದ ಬ್ಯಾಂಡ್​​ಸ್ಟ್ಯಾಂಡ್​ ಸಮೀಪ ಎರಡನೇ ರೌಂಡ್ ಹಾಕುವಾಗ ಪೊಲೀಸರು ಇವರನ್ನು ತಡೆದಿದ್ದಾರೆ. ನಂತರ ಇವರ ಆಧಾರ್​ ಕಾರ್ಡ್​ ಪರಿಶೀಲಿಸಲಾಯಿತು. ಇತರ ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಪೊಲೀಸರು ಬಿಟ್ಟುಕಳುಹಿಸಿದ್ದಾರೆ. ಅಲ್ಲದೆ, ಸುಖಾಸುಮ್ಮನೆ ಸುತ್ತಾಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ವರದಿ ಆಗಿತ್ತು. ಆದರೆ ಈಗ ಎಫ್​ಐಆರ್​ ದಾಖಲಾಗಿರುವುದು ತಿಳಿದುಬಂದಿದೆ.

‘ಬಾಂದ್ರಾ ಸುತ್ತಮುತ್ತ ಟೈಗರ್​ ಶ್ರಾಫ್​ ಮತ್ತು ದಿಶಾ ಪಟಾನಿ ಅನವಶ್ಯಕವಾಗಿ ತಿರುಗಾಡುತ್ತಿರುವುದು ಗಮನಕ್ಕೆ ಬಂತು. ಪೊಲೀಸರು ಅವರನ್ನು ತಡೆದು ಪರಿಶೀಲನೆ ನಡೆಸಿದಾಗ ಅವರಿಂದ ಸೂಕ್ತ ಉತ್ತರ ಸಿಗಲಿಲ್ಲ. ಹೊರಗಡೆ ಸುತ್ತಾಡುತ್ತಿರುವುದಕ್ಕೆ ಸರಿಯಾದ ಕಾರಣವನ್ನು ಅವರು ಹೇಳಿಲ್ಲ. ಐಪಿಸಿ ಸೆಕ್ಷನ್​ 188 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಅವರನ್ನು ಬಂಧಿಸಿಲ್ಲ’ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ಟೈಗರ್​ ಶ್ರಾಫ್​ ಮತ್ತು ದಿಶಾ ಪಟಾನಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್​ ಇದೆ. ಅನೇಕ ಸಂದರ್ಭಗಳಲ್ಲಿ ಈ ಜೋಡಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದೆ. ತಮ್ಮ ಪ್ರೀತಿಯ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿಲ್ಲ. ಫಿಟ್ನೆಸ್​ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅವರು ಜೊತೆಯಾಗಿ ಜಿಮ್​ಗೆ ತೆರಳಿದ್ದರು. ವಾಪಸ್​ ಬರುವಾಗ ಅವರನ್ನು ಪೊಲೀಸರು ತಡೆದಿದ್ದಾರೆ.

ಇದನ್ನೂ ಓದಿ:

Salman Khan: ಟೈಗರ್​ ಶ್ರಾಫ್​ ಪ್ರೇಯಸಿ ದಿಶಾಗೆ ಸಲ್ಮಾನ್​ ಕಿಸ್​ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್​

ಇನ್ನೊಂದು ವಾರ ಲಾಕ್​ಡೌನ್​ ಮುಂದುವರೆಯುವ ಸಾಧ್ಯತೆ; ಬಳಿಕ ಈ ಎಲ್ಲಾ ವಲಯಗಳಿಗೆ ವಿನಾಯಿತಿ ಘೋಷಣೆ ನಿರೀಕ್ಷೆ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us