
ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕಿ ಸುಧಾ ಕೊಂಗರ (Sudha Kongara), ದೇಶದ ಯಶಸ್ವಿ ಸಿನಿಮಾ ನಿರ್ದೇಶಕಿಯರಲ್ಲಿ ಒಬ್ಬರು. ‘ಇರುದು ಸುಟ್ರು’, ‘ಸೂರರೈ ಪೊಟ್ರು’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಸುಧಾ ಕೊಂಗರ, ಇತ್ತೀಚೆಗಷ್ಟೆ ‘ಪರಾಶಕ್ತಿ’ ಹೆಸರಿನ ಸಿನಿಮಾ ನಿರ್ದೇಶಿಸಿದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಯ್ತು. ಶಿವಕಾರ್ತಿಕೇಯನ್, ಶ್ರೀಲೀಲಾ ನಟಿಸಿದ್ದ ಈ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಜೊತೆಗೆ ಸಾಕಷ್ಟು ಟೀಕೆಗೆ ಸಹ ಸಿನಿಮಾ ಗುರಿಯಾಯ್ತು. ಆದರೆ ಆ ಬಳಿಕ ಸಿನಿಮಾ ನಿರ್ಮಾಪಕರ ವಿರುದ್ಧ ಸಂಭಾವನೆ ಬಾಕಿ ಆರೋಪ ಮಾಡಿ ನಿರ್ದೇಶಕಿ ಸುಧಾ ಕೊಂಗರ ದೂರು ದಾಖಲಿಸಿದ್ದರು. ಆದರೆ ಇದೀಗ ಸುಧಾ ಅವರೇ ಸತ್ಯವನ್ನು ಮುಚ್ಚಿಟ್ಟಿದ್ದಾರೆಂದು ನಿರ್ಮಾಣ ಸಂಸ್ಥೆ ಆರೋಪ ಮಾಡಿದೆ.
ಸುಧಾ ಕೊಂಗರ ಅವರಿಗೆ ‘ಪರಾಶಕ್ತಿ’ ಸಿನಿಮಾ ನಿರ್ದೇಶಿಸಲು ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆಯ ಒಪ್ಪಂದ ಆಗಿತ್ತಂತೆ. ಇದಕ್ಕೆ ಜಿಎಸ್ಟಿ ಸೇರಿಸಿ ಒಟ್ಟು 17.70 ಕೋಟಿ ರೂಪಾಯಿಗಳನ್ನು ಡಾನ್ ಪಿಕ್ಚರ್ಸ್ ಸಂಭಾವನೆಯಾಗಿ ಕೊಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತಂತೆ. ಆದರೆ ಡಾನ್ ಪಿಕ್ಚರ್ಸ್ ಈ ವರೆಗೆ 9.31 ಕೋಟಿ ರೂಪಾಯಿಗಳನ್ನಷ್ಟೆ ನೀಡಿದ್ದು, ಬಾಕಿ ಇರುವ 8.39 ಕೋಟಿ ರೂಪಾಯಿ ಹಣವನ್ನು ನೀಡಿಲ್ಲ ಎಂದು ಆರೋಪಿಸಿ ಸುಧಾ ಕೊಂಗರ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಡಾನ್ ಪಿಕ್ಚರ್ಸ್ನವರು ತಮ್ಮ ಬಾಕಿ ಸಂಭಾವನೆ ನೀಡುವವರೆಗೆ ಅವರ ಮುಂದಿನ ಸಿನಿಮಾ ‘ಇದಯಮ್ ಮುರಳಿ’ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಹಾಗೂ ‘ಪರಾಶಕ್ತಿ’ ಸಿನಿಮಾದ ಟಿವಿ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಸುಧಾ ಕೊಂಗರ ಆಗ್ರಹಿಸಿದ್ದರು. ಅದರಂತೆ ನ್ಯಾಯಾಲಯವು ಸಿನಿಮಾ ಬಿಡುಗಡೆಗೆ ತಾತ್ಕಾಲಿಕ ತಡೆಯನ್ನು ಸಹ ನೀಡಿದೆ.
ಇದನ್ನೂ ಓದಿ:‘ಪರಾಶಕ್ತಿ’ ತಂಡದವರು ಸಂಭಾವನೆ ನೀಡಿಲ್ಲ; ಕೋರ್ಟ್ ಮೆಟ್ಟಿಲೇರಿದ ನಿರ್ದೇಶಕಿ ಸುಧಾ ಕೊಂಗರ
ಇದೀಗ ಡಾನ್ ಪಿಕ್ಚರ್ಸ್ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯಂತೆ, ಡಾನ್ ಪಿಕ್ಚರ್ಸ್ನದ್ದೇ ಅಂಗ ಸಂಸ್ಥೆಯಾಗಿದ್ದ 2ಡಿ ಎಂಟರ್ಟೈನ್ಮೆಂಟ್ ಬಳಿ ಕೆಲ ವರ್ಷಗಳ ಹಿಂದೆಯೇ ‘ಪರಾಶಕ್ತಿ’ ಸಿನಿಮಾದ ಚಿತ್ರಕತೆಗಾಗಿ ಸುಧಾ ಕೊಂಗರಾ ಅವರು 4.12 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದರಂತೆ. ಆದರೆ ಸುಧಾ ಅವರು ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದಿದ್ದಾರೆ. ಅಲ್ಲದೆ, ಅದೇ ಚಿತ್ರಕತೆಯನ್ನು ಮುಂದಿಟ್ಟುಕೊಂಡು ಅಕ್ರಾ ಎಂಟರ್ಟೈನ್ಮೆಂಟ್ ಜೊತೆಗೂ ಒಪ್ಪಂದ ಮಾಡಿಕೊಂಡಿದ್ದರು ಎಂದು ಡಾನ್ ಪಿಕ್ಚರ್ಸ್ ಹೇಳಿದೆ.
ಸುಧಾ ಕೊಂಗರ ನಿರ್ದೇಶಿಸಿದ್ದ ‘ಪರಾಶಕ್ತಿ’ ಸಿನಿಮಾ ತಮಿಳರು ಹಿಂದಿ ಹೇರಿಕೆ ವಿರುದ್ಧ ಮಾಡಿದ ಹೋರಾಟದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಶಿವಕಾರ್ತಿಕೇಯನ್ ನಾಯಕ, ಶ್ರೀಲೀಲಾ ನಾಯಕಿ. ಸಿನಿಮಾನಲ್ಲಿ ವಿಲನ್ ಆಗಿ ರವಿ ಮೋಹನ್ ನಟಿಸಿದ್ದರು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ