ಮೋದಿ ಪಾತ್ರದಲ್ಲಿ ಕಟ್ಟಪ್ಪ ಅಲಿಯಾಸ್ ಸತ್ಯರಾಜ್​? ಬರಲಿದೆ ಹೊಸ ಬಯೋಪಿಕ್​

ಮತ್ತೊಮ್ಮೆ ನರೇಂದ್ರ ಮೋದಿ ಅವರ ಜೀವನದ ಕುರಿತು ಸಿನಿಮಾ ಮಾಡಲು ಸಿದ್ಧತೆ ನಡೆದಿದೆ. ಈ ಬಾರಿ ಮೋದಿ ಪಾತ್ರವನ್ನು ಖ್ಯಾತ ನಟ ಸತ್ಯರಾಜ್​ ಅವರು ಮಾಡಲಿದ್ದಾರೆ ಎನ್ನಲಾಗಿದೆ. ಕಟ್ಟಪ್ಪನ ಪಾತ್ರದಲ್ಲಿ ಮಿಂಚಿದ ಅವರು ಈಗ ನರೇಂದ್ರ ಮೋದಿಯ ಪಾತ್ರವನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

ಮೋದಿ ಪಾತ್ರದಲ್ಲಿ ಕಟ್ಟಪ್ಪ ಅಲಿಯಾಸ್ ಸತ್ಯರಾಜ್​? ಬರಲಿದೆ ಹೊಸ ಬಯೋಪಿಕ್​
ನರೇಂದ್ರ ಮೋದಿ, ಸತ್ಯರಾಜ್​

Updated on: May 20, 2024 | 10:55 PM

ನರೇಂದ್ರ ಮೋದಿ (Narendra Modi) ಅವರ ಜೀವನದ ಕುರಿತು ಈಗಾಗಲೇ ಸಿನಿಮಾ ಬಂದಿದೆ. ಆದರೆ ಆ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ. ಈಗ ಮತ್ತೊಮ್ಮೆ ನರೇಂದ್ರ ಮೋದಿ ಬಯೋಪಿಕ್​ (Narendra Modi Biopic) ಮಾಡಲು ತಯಾರಿ ನಡೆದಿದೆ. ಆ ಸಿನಿಮಾಗೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿದೆ. ವರದಿಗಳ ಪ್ರಕಾರ ಸತ್ಯರಾಜ್​ ಅವರು ನರೇಂದ್ರ ಮೋದಿಯ ಪಾತ್ರವನ್ನು ನಿಭಾಯಿಸಲಿದ್ದಾರೆ. ‘ಬಾಹುಬಲಿ’ ಸಿನಿಮಾದಲ್ಲಿ ಕಟ್ಟಪ್ಪನ ಪಾತ್ರ ಮಾಡುವ ಮೂಲಕ ಸತ್ಯರಾಜ್​ (Sathyaraj) ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಈಗ ಅವರಿಗೆ ದೊಡ್ಡ ಆಫರ್​ ನೀಡಲಾಗಿದೆ ಎಂಬ ಸುದ್ದಿ ಹರಡಿದೆ.

ವಿವೇಕ್ ಒಬೆರಾಯ್​ ನಟಿಸಿದ ‘ಪಿಎಂ ನರೇಂದ್ರ ಮೋದಿ’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ವಿವೇಕ್​ ಒಬೆರಾಯ್​ ಅವರು ಮೋದಿಯ ಪಾತ್ರ ಮಾಡಿದ್ದರು. ವಿವೇಕ್​ ಒಬೆರಾಯ್ ಅವರ ಲುಕ್​ ಸರಿ ಇರಲಿಲ್ಲ ಹಾಗೂ ಅವರ ನಟನೆ ಕೂಡ ಚೆನ್ನಾಗಿಲ್ಲ ಎಂದು ಪ್ರೇಕ್ಷಕರು ಆ ಸಿನಿಮಾವನ್ನು ತಿರಸ್ಕರಿಸಿದ್ದರು. ಈಗ ಮತ್ತೆ ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.

ಸತ್ಯರಾಜ್​ ಅವರು ನರೇಂದ್ರ ಮೋದಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಚಿತ್ರತಂಡದ ಯಾರಿಂದಲೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಗಾಗಿ ಈ ಸುದ್ದಿ ಸದ್ಯಕ್ಕೆ ಅಂತೆ-ಕಂತೆಗಳ ಹಂತದಲ್ಲೇ ಹರಿದಾಡುತ್ತಿದೆ. ಈ ಸಿನಿಮಾಗೆ ನಿರ್ದೇಶನ ಮಾಡುವವರು ಯಾರು? ನಿರ್ಮಾಣದ ಹೊಣೆಯನ್ನು ಯಾರು ಹೊತ್ತುಕೊಂಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಕೂಡ ಇನ್ನಷ್ಟೇ ಲಭ್ಯವಾಗಬೇಕಿದೆ.

ಇದನ್ನೂ ಓದಿ: ‘ಬಾಹುಬಲಿ’ ಹೊಸ ಕಥೆ; ‘ಕ್ರೌನ್​ ಆಫ್​ ಬ್ಲಡ್​’ ಟ್ರೇಲರ್​ನಲ್ಲಿದೆ ಝಲಕ್​

ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಿ ಸತ್ಯರಾಜ್​ ಅವರು ಫೇಮಸ್​ ಆಗಿದ್ದಾರೆ. ‘ಬಾಹುಬಲಿ’ ಸಿನಿಮಾದಿಂದ ಅವರು ಹೆಚ್ಚು ಫೇಮಸ್​ ಆದರು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಒಂದು ವೇಳೆ ಅವರಿಗೆ ಮೋದಿ ಪಾತ್ರವನ್ನು ಮಾಡುವ ಅವಕಾಶ ಸಿಕ್ಕಿದ್ದು ಹೌದಾದರೆ ಅದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಮೊದಲ ಪೆರಿಯಾರ್​ ಇವಿ ರಾಮಸ್ವಾಮಿ ಅವರ ಪಾತ್ರವನ್ನು ಮಾಡಿ ಸತ್ಯರಾಜ್​ ಸೈ ಎನಿಸಿಕೊಂಡಿದ್ದರು. ಆ ಪಾತ್ರಕ್ಕಾಗಿ ಅವರು ತಮಿಳುನಾಡು ಸರ್ಕಾರದ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Sun, 19 May 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us