AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಗಿಟಾರ್ ಡಾಕ್ಟರ್ ಮಾಡಿರುವ ಅಪರೂಪದ ಆಪರೇಷನ್​ಗೆ ಜಗತ್ತೇ ಬೆರಗಾಯ್ತು!

ಅಭಿಷೇಕ್ ಅವರಿಗೆ ಬೆಂಗಳೂರಿನ ನ್ಯೂರೋಸರ್ಜನ್ ಶರಣ್ ಶ್ರೀನಿವಾಸನ್ ಆಪರೇಷನ್ ಮಾಡಿ, ಗಿಟಾರ್ ಡಿಸ್ಟೋನಿಯಾ ಎಂಬ ಆ ವಿಚಿತ್ರ ಕಾಯಿಲೆಗೆ ಚಿಕಿತ್ಸೆ ನೀಡಿದ್ದಾರೆ.

ಬೆಂಗಳೂರಿನ ಗಿಟಾರ್ ಡಾಕ್ಟರ್ ಮಾಡಿರುವ ಅಪರೂಪದ ಆಪರೇಷನ್​ಗೆ ಜಗತ್ತೇ ಬೆರಗಾಯ್ತು!
ಅಭಿಷೇಕ್​ಗೆ ಆಪರೇಷನ್ ಮಾಡುತ್ತಿರುವ ಡಾ. ಶರಣ್ ಶ್ರೀನಿವಾಸನ್
Follow us
ಸುಷ್ಮಾ ಚಕ್ರೆ
|

Updated on:Jan 23, 2023 | 12:45 PM

ನಮ್ಮ ದೇಹದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳು ಎಷ್ಟು ವಿಚಿತ್ರವಾಗಿರುತ್ತವೆ ಎಂದರೆ ಅದರ ಬಗ್ಗೆ ಕೇಳಿದರೆ ನಮಗೇ ಆಶ್ಚರ್ಯವಾಗುತ್ತದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನ್ಯೂರೋಸರ್ಜನ್ ಶರಣ್ ಶ್ರೀನಿವಾಸನ್ (Dr Sharan Srinivasan) ಬಳಿ ಓರ್ವ ವ್ಯಕ್ತಿ ಬಂದು ತನಗೆ ಈಗೀಗ ಗಿಟಾರ್ ನುಡಿಸಲು ಸಾಧ್ಯವಾಗುತ್ತಿಲ್ಲ. ಬೆರಳುಗಳು ಯಾಕೋ ಸಹಕರಿಸುತ್ತಿಲ್ಲ ಎಂದು ಹೇಳಿದ್ದರು. ಆತನಿಗೆ ಆ ವೈದ್ಯರು ಮಾಡಿದ ಆಪರೇಷನ್ ಇಡೀ ಜಗತ್ತೇ ಬೆಂಗಳೂರಿನ ಈ ವೈದ್ಯರತ್ತ ನೋಡುವಂತೆ ಮಾಡಿದೆ. ಈ ವೈದ್ಯರಿಗೆ ಗಿಟಾರ್ ಡಾಕ್ಟರ್ (Guitar Doctor) ಎಂದೇ ಹೆಸರು ಬಂದಿದೆ. ಈ ವೈದ್ಯರು ಮಾಡಿದ ಅಪರೂಪದ ಆಪರೇಷನ್ ಬಗ್ಗೆ ಇಲ್ಲಿದೆ ಮಾಹಿತಿ…

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಬಿಹಾರದಿಂದ ಬಂದು ಬೆಂಗಳೂರಲ್ಲಿ ನೆಲೆಸಿದ್ದ ವ್ಯಕ್ತಿಗೆ ವಿಚಿತ್ರವಾದ ಕಾಯಿಲೆ ಶುರುವಾಗಿತ್ತು. ಟೆಕ್ಕಿ ಆಗಿದ್ದ ಆತನಿಗೆ ಗಿಟಾರಿಸ್ಟ್ ಆಗಬೇಕೆಂದು ಬಯಕೆ ಮೂಡಿತ್ತು. ಆದರೆ ಅದೊಂದು ವಿಚಿತ್ರ ಕಾಯಿಲೆಯೊಂದು ಅವರನ್ನು ತೀವ್ರ ಘಾಸಿಗೊಳಿಸಿತ್ತು. ಆ ಕಾಯಿಲೆಯಿಂದ ಜೀವನದಲ್ಲಿ ಮತ್ತೆ ಗಿಟಾರ್‌ ನುಡಿಸಲೇ ಆಗದಂತಾಗಿತ್ತು. ಆದರೆ ನಮ್ಮ ಬೆಂಗಳೂರಿನ ವೈದ್ಯರಾದ ಶರಣ್ ಶ್ರೀನಿವಾಸನ್ ‌ಮಾಡಿದ ಆಪರೇಷನ್ ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುವಂತೆ ಮಾಡಿದ್ದು, ಇದೇ ಖುಷಿಗಾಗಿ ಬೆಂಗಳೂರಿನಲ್ಲಿ ದೊಡ್ಡದಾದ ಕಾರ್ಯಕ್ರಮ ಮಾಡಲಾಯಿತು.

ಬೆಂಗಳೂರಿನಲ್ಲಿ ನೆಲೆಸಿದ್ದ ಬಿಹಾರ ಮೂಲದ ಅಭಿಷೇಕ್ ಪ್ರಸಾದ್ 2012ರಲ್ಲಿ ಉದ್ಯೋಗಕ್ಕೆ ಸೇರಿದ್ದರು. 2015ರಲ್ಲಿ ಅವರು ಸಾಫ್ಟ್​ವೇರ್ ಕೆಲಸ ಬಿಟ್ಟು ಸಂಗೀತದಲ್ಲೇ ಮುಂದುವರೆಯಲು ನಿರ್ಧರಿಸಿದರು. ಗಿಟಾರಿಸ್ಟ್​ ಆಗಿದ್ದ ಅವರಿಗೆ 2017ರಲ್ಲಿ ವಿಚಿತ್ರವಾದ ಸಮಸ್ಯೆ ಶುರುವಾಗಿತ್ತು. ಗಿಟಾರ್ ನುಡಿಸಲು ಸಾಧ್ಯವೇ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೇರೆ ಸಮಯದಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಗಿಟಾರ್ ನುಡಿಸುವಾಗ ಮಾತ್ರ ಅವರ ಕೈಬೆರಳುಗಳು ಕೆಲಸ ಮಾಡುತ್ತಿರಲಿಲ್ಲ.

ಇದನ್ನೂ ಓದಿ: Health Tips: ಕರುಳನ್ನು ಎರಡನೇ ಮೆದುಳು ಎಂದು ಏಕೆ ಕರೆಯಲಾಗುತ್ತದೆ, ತಜ್ಞರ ಅಭಿಪ್ರಾಯ ಇಲ್ಲಿದೆ

ಅಭಿಷೇಕ್ ಅವರಿಗೆ ಬೆಂಗಳೂರಿನ ನ್ಯೂರೋಸರ್ಜನ್ ಶರಣ್ ಶ್ರೀನಿವಾಸನ್ ಆಪರೇಷನ್ ಮಾಡಿ, ಗಿಟಾರ್ ಡಿಸ್ಟೋನಿಯಾ ಎಂಬ ಆ ವಿಚಿತ್ರ ಕಾಯಿಲೆಗೆ ಚಿಕಿತ್ಸೆ ನೀಡಿದ್ದಾರೆ. ಗಿಟಾರ್ ನುಡಿಸುವಾಗ ಮಾತ್ರ ಅಭಿಷೇಕ್ ಅವರ 3 ಬೆರಳುಗಳು ಕೆಲಸ ಮಾಡುತ್ತಿರಲಿಲ್ಲ. ಅದು ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಾಗಿತ್ತು. ಇದೀಗ ಆ ಸಮಸ್ಯೆ ಗುಣವಾಗಿದೆ.

2017ರ ಜುಲೈ 11ರಂದು ಲೋಕಲ್ ಅನಸ್ತೇಷಿಯಾ ನೀಡಿದ ನಂತರ ಅಭಿಷೇಕ್ ಅವರಿಗೆ ಆಪರೇಷನ್ ಮಾಡುವಾಗ ಅವರು ಸಂಪೂರ್ಣವಾಗಿ ಪ್ರಜ್ಞೆ ಹೊಂದಿದ್ದರು. 4 ಗಂಟೆಗಳ ಆಪರೇಷನ್​ನ ಸಮಯದಲ್ಲಿ ಡಾ. ಶರಣ್ ಶ್ರೀನಿವಾಸನ್ ಗಿಟಾರ್ ನುಡಿಸುವಾಗಲೇ ಅಭಿಷೇಕ್ ಅವರ ಮೆದುಳಿಗೆ ಶಸ್ತ್ರಚಿಕಿತ್ಸೆ ಮಾಡಿದರು. ಅಭಿಷೇಕ್‌ನ ಮೆದುಳಿನಲ್ಲಿರುವ ದೋಷಪೂರಿತ ಕೋಶಗಳನ್ನು ಬರ್ನ್ ಮಾಡಿದ ನಂತರ ಆತನ ಸಮಸ್ಯೆ ಬಗೆಹರಿಯಿತು.

ಅಭಿಷೇಕ್ ಅವರ ಮೆದುಳಿನಲ್ಲಿ ಕೆಲವು ಜೀವಕೋಶಗಳು ಹೈಪರ್ ಆಕ್ಟಿವ್ ಆಗಿದ್ದವು. ಅದು ಅವರ ನರಮಂಡಲದಲ್ಲಿ ಸರ್ಕ್ಯೂಟ್ ಸಮಸ್ಯೆಯನ್ನು ಉಂಟುಮಾಡಿತ್ತು. ಅವರ ಬೆರಳುಗಳು ಮೆದುಳಿನ ಸಂದೇಶವನ್ನು ಕೇಳುತ್ತಿರಲಿಲ್ಲ. ಹೀಗಾಗಿ, ಆ ಕೋಶಗಳನ್ನು ನಿರ್ಮೂಲನೆ ಮಾಡಲಾಯಿತು. ಅಭಿಷೇಕ್ ಗಿಟಾರ್ ನುಡಿಸುವಾಗಲೇ ಆತನಿಗೆ ಆಪರೇಷನ್ ಮಾಡಲಾಯಿತು ಎಂದು ಡಾ. ಶರಣ್ ಶ್ರೀನಿವಾಸ್ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ವಿಪರೀತ ಶೀತ ಗಾಳಿ; ಹೃದಯಾಘಾತ, ಅತಿ ರಕ್ತದೊತ್ತಡ, ಮೆದುಳಿನ ಸ್ಟ್ರೋಕ್ ಸಮಸ್ಯೆ ಹೆಚ್ಚಳ

ಇದನ್ನು ದೇಶದ ಮೊದಲ ಬ್ರೈನ್ ಸರ್ಕ್ಯೂಟ್ ಸರ್ಜರಿ ಎಂದು ಹೇಳಲಾಗಿದೆ. ಇದಾದ ಬಳಿಕ ಡಾ. ಶರಣ್ ಶ್ರೀನಿವಾಸನ್ ಅವರಿಗೆ ಗಿಟಾರ್ ಡಾಕ್ಟರ್ ಎಂದೇ ಹೆಸರು ಬಂದಿತು. ಇದು ಶೇ. 1ರಷ್ಟು ವೃತ್ತಿಪರ ಸಂಗೀತಗಾರರಲ್ಲಿ ಕಂಡುಬರುವ ಅಪರೂಪದ ಸಮಸ್ಯೆಯಾಗಿದೆ. ಔಷಧಿಗಳು ಅದನ್ನು ಗುಣಪಡಿಸಲು ಸಾಧ್ಯವಾಗದಿದ್ದಾಗ ಅದನ್ನು ಗುಣಪಡಿಸಲು ಆಪರೇಷನ್ ಮಾಡುವುದೊಂದೇ ಏಕೈಕ ಆಯ್ಕೆಯಾಗಿದೆ ಎಂದು ಡಾ. ಶರಣ್‌ ಹೇಳಿದ್ದಾರೆ.

ಮೂಲತಃ ಬಿಹಾರದವರಾದ ಅಭಿಷೇಕ್ ಇದಾದ 9 ದಿನಗಳ ನಂತರ ಸುಲಭವಾಗಿ ಗಿಟಾರ್ ನುಡಿಸತೊಡಗಿದರು. ಅಂದಹಾಗೆ, ಅಭಿಷೇಕ್ ಅವರು ಡಿಸ್ಟೋನಿಯಾವನ್ನು ಗುಣಪಡಿಸಲು ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಒಳಗಾದ ವಿಶ್ವದ 8ನೇ ಸಂಗೀತಗಾರ ಮತ್ತು ಭಾರತದಲ್ಲಿ ಮೊದಲಿಗರಾಗಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Mon, 23 January 23