
ನೀವು ಎದ್ದ ತಕ್ಷಣ ಏನ್ ಮಾಡ್ತಿರಿ? ಫೋನ್ ತಗೊಂಡು ಸ್ವಲ್ಪ ಸಮಯ ಅದರಲ್ಲಿಯೇ ಸಮಯ ಕಳೆಯುತ್ತೀರಿ, ನಂತರ ಆಫೀಸ್ ಗೆ ಹೋಗುವ ಮೊದಲು ನಿಮ್ಮ ಇತರ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಅಲ್ಲವಾ? ಅಷ್ಟೇ. ಆದರೆ ಬೆಳಿಗ್ಗೆ ನೀವು ರೂಢಿಸಿಕೊಳ್ಳುವಂತಹ ಆರೋಗ್ಯಕರ ಅಭ್ಯಾಸಗಳು ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ. ಅನೇಕ ಆರೋಗ್ಯ ತಜ್ಞರು ಹೇಳುವುದು ಇದನ್ನೇ, ಮಾತ್ರವಲ್ಲ ಹಲವಾರು ಅಧ್ಯಯನಗಳು ಕೂಡ ಇದನ್ನು ಬಹಿರಂಗಪಡಿಸಿವೆ. ದೇಹವು ರಾತ್ರಿಯಿಡೀ ಸುಮಾರು 6 ರಿಂದ 7 ಗಂಟೆಗಳ ಕಾಲ ವಿಶ್ರಾಂತಿ ಸ್ಥಿತಿಯಲ್ಲಿರುತ್ತದೆ. ಬೆಳಿಗ್ಗೆ ಮತ್ತೆ ಸಕ್ರಿಯರಾಗಲು, ಹೊಸ ಚೈತನ್ಯ ಪಡೆದುಕೊಳ್ಳಲು ನೀವು ಸರಿಯಾದ ರೀತಿಯಲ್ಲಿ ಶಕ್ತಿಯನ್ನು ಒದಗಿಸಬೇಕು. ಅಂತಹ ಸಾಮರ್ಥ್ಯ ನೀರಿಗಿದೆ ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಬೆಳಿಗ್ಗೆ ಎದ್ದ ತಕ್ಷಣ ನೀರು (Water) ಕುಡಿಯಲು ಶಿಫಾರಸು ಮಾಡಲಾಗುತ್ತದೆ. ಆ ಸಮಯದಲ್ಲಿ, ನೀರು ಶಕ್ತಿಯುತವಾದ ಪಾನೀಯದಂತೆ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ, ಈ ನೀರು ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಹಾಗಾದರೆ ಯಾವ ರೀತಿಯ ಸಮಸ್ಯೆಗೆ ಇದು ರಾಮಬಾಣ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತೂಕ ಇಳಿಸಿಕೊಳ್ಳಲು ಅಥವಾ ಆರೋಗ್ಯವಾಗಿರಲು ಪ್ರಯತ್ನಿಸುತ್ತಿರುವವರು ಬೆಳಿಗ್ಗೆ ನಿಂಬೆ ಬೆರೆಸಿದಂತಹ ನೀರನ್ನು ಕುಡಿಯುತ್ತಾರೆ. ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುತ್ತಾರೆ. ಈ ಅಭ್ಯಾಸ ಒಳ್ಳೆಯದಾಗಿರಬಹುದು, ಆದರೆ ನಿಂಬೆಯಲ್ಲಿ ಬಹಳಷ್ಟು ಸಿಟ್ರಿಕ್ ಆಮ್ಲವಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ನಿಂಬೆ ರಸವನ್ನು ಮಿಶ್ರಣ ಮಾಡುವ ಬದಲು ಬೆಳಿಗ್ಗೆ ಒಂದು ಲೀಟರ್ ನೀರು ಕುಡಿಯಿರಿ. ಆದರೆ ಹಲ್ಲುಜ್ಜುವ ಮೊದಲೇ ನೀರನ್ನು ಕುಡಿಯಬೇಕು. ಈ ಒಂದೇ ಒಂದು ಅಭ್ಯಾಸ ನಿಮ್ಮ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುವುದರಿಂದ ಹಿಡಿದು ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ವರೆಗೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ರಾತ್ರಿಯಿಡೀ ದೇಹ ವಿಶ್ರಾಂತ ಸ್ಥಿತಿಯಲ್ಲಿರುತ್ತದೆ ಅಂದರೆ ಸುಮಾರು 8 ಗಂಟೆಗಳ ಕಾಲ ಯಾವುದೇ ರೀತಿಯ ಚಲನೆ ದೇಹಕ್ಕೆ ಇರುವುದಿಲ್ಲ. ಪರಿಣಾಮವಾಗಿ, ಬೆಳಿಗ್ಗೆ ದೇಹವು ನಿರ್ಜಲೀಕರಣಗೊಂಡಿರುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ನಂತರ ಬೆಡ್ ಕಾಫಿ ಅಥವಾ ಬೆಡ್ ಟೀ ಕುಡಿಯುವ ಬದಲು ನೀರು ಕುಡಿಯುವಂತಹ ಆರೋಗ್ಯಕರ ಅಭ್ಯಾಸವನ್ನು ಆರಂಭಿಸಿಕೊಳ್ಳಿ. ಇದನ್ನು ಆರೋಗ್ಯ ತಜ್ಞರು ಕೂಡ ಹೇಳುತ್ತಾರೆ. ಹಲ್ಲುಜ್ಜುವ ಮೊದಲು, ಒಂದು ಲೀಟರ್ ನೀರು ಕುಡಿಯುವುದರಿಂದ ದೇಹವು ಪುನಃ ಸಕ್ರಿಯಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಈ ಒಂದು ಅಭ್ಯಾಸವು ನಿಮ್ಮ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ತರುತ್ತದೆ. ಬೆಳಿಗ್ಗೆ ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುವ ಮೂಲಕ, ಅಂಗಗಳು ಸಕ್ರಿಯವಾಗುತ್ತವೆ. ಅಷ್ಟೇ ಅಲ್ಲ, ದೇಹದಲ್ಲಿ ಸಂಗ್ರಹವಾದ ಎಲ್ಲಾ ವಿಷಗಳು ಬಿಡುಗಡೆಯಾಗಲು ಸಿದ್ಧವಾಗುತ್ತವೆ.
ಬೆಳಿಗ್ಗೆ ಎದ್ದ ತಕ್ಷಣ ಒಂದು ಲೀಟರ್ ನೀರು ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಹೊಟ್ಟೆ ಉಬ್ಬರ, ಅನಿಲ ಮತ್ತು ಆಮ್ಲೀಯತೆ ಕಡಿಮೆಯಾಗುತ್ತದೆ. ವಿಶೇಷವಾಗಿ ಮಲಬದ್ಧತೆಯಿಂದ ಬಳಲುತ್ತಿರುವವರಿಗೆ, ಈ ಅಭ್ಯಾಸ ತುಂಬಾ ಒಳ್ಳೆಯದು. ಚಲನೆ ಮುಕ್ತವಾಗಿದ್ದರೆ, ದೇಹವು ಇಡೀ ದಿನ ಹಗುರವಾಗಿರುತ್ತದೆ. ಇದು ಜೀರ್ಣಕ್ರಿಯೆಗೆ ಮಾತ್ರ ಪ್ರಯೋಜನಕಾರಿಯಲ್ಲ. ಚರ್ಮವನ್ನು ಆರೋಗ್ಯಕರವಾಗಿಡಲು, ನೀರನ್ನು ಸೇವಿಸಬೇಕು. ಹೈಡ್ರೀಕರಿಸಿದ ಚರ್ಮದ ಕೋಶಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಮೊಡವೆಗಳು ಮತ್ತು ಚರಮ ಎಣ್ಣೆಯುಕ್ತವಾಗುವುದನ್ನು ಕಡಿಮೆ ಮಾಡುತ್ತದೆ. ನೀವು ಬೆಳಿಗ್ಗೆ ನೀರು ಕುಡಿದರೆ, ದೇಹದಲ್ಲಿರುವ ಬಹುತೇಕ ಎಲ್ಲಾ ವಿಷಗಳು ಮೂತ್ರ ಮತ್ತು ಕರುಳಿನ ಚಲನೆಯ ಮೂಲಕ ಹೊರಹಾಕಲ್ಪಡುತ್ತವೆ. ಇದರಿಂದಾಗಿ ಮುಖದ ಮೇಲಿನ ಮೊಡವೆಗಳು ಮತ್ತು ಒಣ ಚರ್ಮದಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ.
ಇದನ್ನೂ ಓದಿ: ಒಂದು ತಿಂಗಳು ಬೆಳಿಗ್ಗೆ ಎದ್ದ ತಕ್ಷಣ ಇದರ ನೀರನ್ನು ತಪ್ಪದೆ ಕುಡಿಯಿರಿ, ದೇಹ ನೀವು ಹೇಳಿದಂತೆ ಕೇಳುತ್ತೆ
ಬೆಳಿಗ್ಗೆ ನೀರು ಕುಡಿಯುವುದರಿಂದ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ. ದೇಹವು ಹೈಡ್ರೇಟ್ ಆಗಿದ್ದಾಗ, ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಹೆಚ್ಚು. ಪ್ರತಿಯೊಂದು ಕೆಲಸದ ಮೇಲೂ ಗಮನ ಹರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಮನಸ್ಥಿತಿಯೂ ಉತ್ತಮವಾಗುತ್ತದೆ. ಇದಲ್ಲದೆ, ಬೆಳಿಗ್ಗೆ ನೀರು ಕುಡಿಯುವುದರಿಂದ ಕ್ಯಾಲೊರಿ ಕಡಿಮೆಯಾಗಿ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ನೀವು ನಿಯಮಿತವಾಗಿ ವ್ಯಾಯಾಮ ಮಾಡುವುದರ ಜೊತೆಗೆ ಬೆಳಿಗ್ಗೆ ಒಂದು ಲೀಟರ್ ನೀರು ಕುಡಿದು ಆರೋಗ್ಯಕರ ಆಹಾರವನ್ನು ಸೇವಿಸಿದರೆ, ನೀವು ಯಾವಾಗಲೂ ಆರೋಗ್ಯವಾಗಿರುತ್ತೀರಿ.
ಬೆಳಿಗ್ಗೆ ಬೇಗನೆ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಆದರೆ ಕೆಲವು ಸಮಸ್ಯೆಗಳಿರುವವರು ಯಾವುದೇ ಸಂದರ್ಭದಲ್ಲಿಯೂ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದನ್ನು ತಪ್ಪಿಸಬೇಕು. ವಿಶೇಷವಾಗಿ ಹೃದಯ, ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳಿರುವ ವ್ಯಕ್ತಿಗಳು ಈ ವಿಷಯದಲ್ಲಿ ಜಾಗರೂಕರಾಗಿರಬೇಕು. ನೀರು ಕುಡಿಯಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ, ಅನಗತ್ಯ ಸಮಸ್ಯೆಗಳು ಉದ್ಭವಿಸಬಹುದು. ಮೂತ್ರಪಿಂಡಗಳ ಮೇಲೆ ಒತ್ತಡ ಹೇರುವುದು ಒಳ್ಳೆಯದಲ್ಲ. ಈಗಾಗಲೇ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಪಾಯ ಹೆಚ್ಚು. ಹಾಗಾಗಿ ಈ ಅಭ್ಯಾಸ ರೂಢಿಸಿಕೊಳ್ಳುವಾಗ ಜಾಗೃತೆ ವಹಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ