
ನಮ್ಮ ದೈನಂದಿನ ಜೀವನದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿಬಿಸಿ ಇಡ್ಲಿ ಅಥವಾ ಗರಿಗರಿಯಾದ ದೋಸೆ ಜೊತೆಗೆ ಒಂದು ಕಪ್ ಕಾಫಿ ಸಿಗದಿದ್ದರೆ ದಿನವೇ ಅಪೂರ್ಣ ಎನಿಸುತ್ತದೆ. ಈ ಪೌಷ್ಟಿಕ ಆಹಾರಗಳು ಕೇವಲ ಹೊಟ್ಟೆ ತುಂಬಿಸುವುದಲ್ಲದೆ, ನಾಲಿಗೆಗೂ ಹಿತ ನೀಡುತ್ತವೆ. ಆದರೆ, ಬೇಸಿಗೆಯ ಸುಡುವ ಬಿಸಿಲಿನಲ್ಲಿ ಒಂದು ಸಣ್ಣ ನಿರ್ಲಕ್ಷ್ಯವೂ ಈ ರುಚಿಕರ ಆಹಾರವನ್ನು ಆರೋಗ್ಯಕ್ಕೆ ಹಾನಿಕಾರಕವಾಗಿ ಬದಲಿಸಬಹುದು. ಹೀಗಾಗಿ, ಬೇಸಿಗೆಯಲ್ಲಿ ಹಿಟ್ಟಿನ ತಯಾರಿಕೆ ಮತ್ತು ಬಳಕೆಯ ಮೇಲೆ ಒಂದು ಕಣ್ಣಿಡುವುದು ಬಹಳ ಮುಖ್ಯ.
ಅಕ್ಕಿ ಮತ್ತು ಉದ್ದಿನ ಹಿಟ್ಟು ಹುಳಿಯಾಗುವ ಪ್ರಕ್ರಿಯೆಯನ್ನು ವಿಜ್ಞಾನದ ಭಾಷೆಯಲ್ಲಿ ‘ಫರ್ಮೆಂಟೇಶನ್’ ಎನ್ನಲಾಗುತ್ತದೆ. ಇದರಲ್ಲಿ ಲ್ಯಾಕ್ಟೋಬ್ಯಾಸಿಲಸ್ ಎಂಬ ಉತ್ತಮ ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ಒಡೆದು ಲ್ಯಾಕ್ಟಿಕ್ ಆ್ಯಸಿಡ್ ಆಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆಯಿಂದ ಹಿಟ್ಟು ಹಗುರವಾಗುವುದಲ್ಲದೆ, ಪ್ರೋಟೀನ್ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಅಲ್ಲದೆ, ಹಿಟ್ಟಿನಲ್ಲಿ ಬಿ12 ಮತ್ತು ಫೋಲೇಟ್ ಅಂಶಗಳು ಹೆಚ್ಚಿ, ನಮ್ಮ ಕರುಳಿಗೆ ಅಗತ್ಯವಿರುವ ‘ಪ್ರೋಬಯೋಟಿಕ್’ ಬ್ಯಾಕ್ಟೀರಿಯಾಗಳನ್ನು ಒದಗಿಸುತ್ತದೆ. ಸರಿಯಾದ ಪ್ರಮಾಣದಲ್ಲಿ ಹುಳಿಯಾದ ಹಿಟ್ಟು ಆರೋಗ್ಯಕ್ಕೆ ಅಮೃತವಿದ್ದಂತೆ.
ಆದರೆ, ತಾಪಮಾನ ಹೆಚ್ಚಾದಂತೆ ಬ್ಯಾಕ್ಟೀರಿಯಾಗಳ ಚಟುವಟಿಕೆಯೂ ವೇಗವಾಗುತ್ತದೆ. ಚಳಿಗಾಲದಲ್ಲಿ ಹಿಟ್ಟು ಹುಳಿಯಾಗಲು 8 ರಿಂದ 10 ಗಂಟೆ ಬೇಕಾದರೆ, ಬೇಸಿಗೆಯ 30-37 ಡಿಗ್ರಿ ತಾಪಮಾನದಲ್ಲಿ ಕೇವಲ 3 ರಿಂದ 5 ಗಂಟೆಗಳಲ್ಲೇ ಹಿಟ್ಟು ಸಿದ್ಧವಾಗಿಬಿಡುತ್ತದೆ. ಒಂದು ವೇಳೆ ಸಮಯ ಮೀರಿದರೆ ಹಿಟ್ಟು ‘ಓವರ್ ಫರ್ಮೆಂಟ್’ ಆಗಿ, ಅದರಲ್ಲಿರುವ ಪೌಷ್ಟಿಕಾಂಶಗಳು ನಶಿಸಿ ಕೆಟ್ಟ ಬ್ಯಾಕ್ಟೀರಿಯಾಗಳು ಬೆಳೆಯಲು ಶುರುವಾಗುತ್ತವೆ. ಇದರಿಂದ ಹಿಟ್ಟು ಅತಿಯಾಗಿ ಹುಳಿಯಾಗುವುದು ಮಾತ್ರವಲ್ಲದೆ ಕಹಿಯಾಗುವ ಸಾಧ್ಯತೆಯೂ ಇರುತ್ತದೆ.
ಇದನ್ನೂ ಓದಿ: ಲಿವರ್ ಆರೋಗ್ಯಕರವಾಗಿರಬೇಕಂದ್ರೆ ತಪ್ಪದೇ ಈ ಆಹಾರಗಳನ್ನು ಸೇವನೆ ಮಾಡಲೇಬೇಕು
ನಿಮ್ಮ ಮನೆಯ ಹಿಟ್ಟು ಹಾಳಾಗಿದೆಯೇ ಎಂದು ತಿಳಿಯಲು ಕೆಲವು ಸುಲಭ ಮಾರ್ಗಗಳಿವೆ. ಹಿಟ್ಟಿನಿಂದ ಕಟು ಹುಳಿ ವಾಸನೆ ಅಥವಾ ಘಾಟು ವಾಸನೆ ಬರುತ್ತಿದ್ದರೆ, ಅದರ ಬಣ್ಣ ಬದಲಾಗಿದ್ದರೆ ಅಥವಾ ಅತಿಯಾಗಿ ನೊರೆ ಬರುತ್ತಿದ್ದರೆ ಅಂತಹ ಹಿಟ್ಟನ್ನು ಬಳಸಬೇಡಿ. ಇಂತಹ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವನೆಯು ವಾಕರಿಕೆ, ಹೊಟ್ಟೆ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಜ್ಞಾನದ ಪ್ರಕಾರ, ಸರಿಯಾದ ಹದದಲ್ಲಿರುವ ಹಿಟ್ಟು ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಆದರೆ ಅತಿಯಾಗಿ ಹುಳಿಯಾದ ಹಿಟ್ಟು ಅಸಿಡಿಟಿಯನ್ನು ಉಂಟುಮಾಡುತ್ತದೆ.
ಬೇಸಿಗೆಯಲ್ಲಿ ಹಿಟ್ಟು ಹಾಳಾಗದಂತೆ ತಡೆಯಲು ಕೆಲವು ಸರಳ ಸೂತ್ರಗಳನ್ನು ಪಾಲಿಸಬಹುದು. ಹಿಟ್ಟು ಅರೆದ ನಂತರ ಹೆಚ್ಚು ಕಾಲ ಹೊರಗಿಡದೆ, ಸರಿಯಾದ ಹದಕ್ಕೆ ಏರಿದ ತಕ್ಷಣ ಫ್ರಿಡ್ಜ್ನಲ್ಲಿ ಇರಿಸಿ. ಹಿಟ್ಟು ಅರೆಯಲು ತಣ್ಣನೆಯ ನೀರನ್ನು ಬಳಸಿ ಮತ್ತು ಪಾತ್ರೆಗಳು ಸಂಪೂರ್ಣವಾಗಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.
ಲೇಖನ: ಡಾ. ರವಿಕಿರಣ್ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ (9242122874)
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ