ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 30ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಮಾಂಸಾಹಾರ ಸೇವನೆ ಮಾಡುವಂಥವರು ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು, ಹೊಟ್ಟೆಯ ಸಮಸ್ಯೆಗಳು ಕಾಡಬಹುದು. ಅದರಲ್ಲೂ ಮನೆಯ ಹೊರಗಿನ ಆಹಾರವನ್ನು ಸೇವನೆ ಮಾಡುತ್ತಿದ್ದೀರಿ ಎಂದಾದಲ್ಲಿ ಮತ್ತೂ ಎಚ್ಚರಿಕೆಯಿಂದ ಇರಬೇಕು. ನಿಮ್ಮಲ್ಲಿ ಕೆಲವರು ಸ್ನೇಹಿತರ ಹಣದ ಅಗತ್ಯಕ್ಕಾಗಿ ಜಾಮೀನು ನಿಲ್ಲಬೇಕಾಗಬಹುದು. ಮನೆಯಲ್ಲಿ ಮಕ್ಕಳ ವರ್ತನೆಯಿಂದ ಬೇಸರ ಆದೀತು. ಅದರಲ್ಲೂ ಕೂಡು ಕುಟುಂಬದಲ್ಲಿ ಇರುವಂಥವರಿಗೆ ಕಿರಿಕಿರಿ ಜಾಸ್ತಿ ಇರುತ್ತದೆ. ಕೆಲಸ ಬದಲಾವಣೆಗಳಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಗೊಂದಲ ಏರ್ಪಡಬಹುದು. ಬದಲಾಯಿಸಬೇಕಾ ಅಥವಾ ಇಲ್ಲಿಯೇ ಮುಂದುವರಿಯಬೇಕಾ ಎಂಬ ಪ್ರಶ್ನೆ ಅದಾಗಿರುತ್ತದೆ.
ಸಂಬಂಧಿಕರು ಯಾಕಾದರೂ ಕರೆ ಮಾಡುತ್ತಾರೋ ಅಥವಾ ಯಾಕಾದರೂ ಮನೆಗೆ ಬರುತ್ತಾರೋ ಎಂದು ಬಹಳ ಬೇಸರಿಸಿಕೊಳ್ಳುತ್ತೀರಿ. ಸಂಗಾತಿ ಜತೆಗೆ ಮಾತನಾಡುವಾಗ ಸಣ್ಣ ಸಂಗತಿಗೂ ಸಿಟ್ಟು ಮಾಡಿಕೊಂಡು, ನಿಮ್ಮ ಮೇಲೆ ರೇಗಾಡುವಂಥ ಸಾಧ್ಯತೆಗಳಿವೆ. ಇದೇ ವೇಳೆ ಸ್ನೇಹಿತರು ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಆಗುತ್ತದೆ. ಕೆಲಸವೇ ಇಲ್ಲದಿದ್ದರೂ ಬಹಳ ಕೆಲಸ ಮಾಡುತ್ತಿರುವಂತೆ ತೋರಿಸಿಕೊಳ್ಳುತ್ತಿದ್ದೀರಿ ಎಂಬ ರೀತಿಯಲ್ಲಿ ನಿಮ್ಮನ್ನು ಮೂದಲಿಸಬಹುದು. ಹೊಸ ಬಟ್ಟೆಯೋ ಅಥವಾ ಗೃಹ ಬಳಕೆ ವಸ್ತುವನ್ನೋ ಇತರರಿಗಾಗಿ ಖರೀದಿಸಿದ್ದಕ್ಕೆ ನೀವೇ ಹಣ ಕೊಟ್ಟು, ಇಟ್ಟುಕೊಳ್ಳಬೇಕಾಗುತ್ತದೆ.
ದಮ್ಮಯ್ಯಗುಡ್ಡೆ ಹಾಕಿ ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕೆಲವರು ಪ್ರಯತ್ನಿಸಲಿದ್ದಾರೆ. ಇದು ಈ ಕ್ಷಣದ ಅಗತ್ಯ. ಹಣಕಾಸಿನ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ನೇರಾನೇರವಾಗಿ ಮಾತನಾಡಿ. ಏಕೆಂದರೆ, ಈ ದಿನ ನೀವು ಹಣಕ್ಕೆ ಬೇಡಿಕೆ ಇಡುವ ಸ್ಥಿತಿಯಲ್ಲಿ ಇರುತ್ತೀರಿ. ವೃತ್ತಿನಿರತರು ಅದಕ್ಕೆ ಅಗತ್ಯ ಇರುವ ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ಸಲಕರಣೆಗಳನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ. ಇವುಗಳನ್ನು ಕಡಿಮೆ ದುಡ್ಡಲ್ಲಿ ಖರೀದಿಸುವುದಕ್ಕೆ ಸ್ನೇಹಿತರು, ಸಂಬಂಧಿಕರು ಸಹಾಯ ಮಾಡುವುದಕ್ಕೆ ಸಾಧ್ಯತೆ ಇದೆ. ಅಥವಾ ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ಪರಿಚಿತರು ಇದ್ದಾರಾ ಎಂಬುದನ್ನು ನೆನಪಿಸಿಕೊಳ್ಳಿ.
ಉದ್ಯೋಗ ಸ್ಥಳದಲ್ಲಿ ನಿರುಮ್ಮಳವಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಯಾವುದೋ ಹಳೇ ಕಡತಗಳನ್ನು ಕೇಳಬಹುದು ಅಥವಾ ಯಾರದೋ ಕೆಲಸವನ್ನು ನಿಮಗೆ ಒಪ್ಪಿಸಿ, ಅದಕ್ಕಾಗಿಯೇ ಬಹಳ ಹೊತ್ತು ಸಮಯ ಇಡಬೇಕಾದ ಸನ್ನಿವೇಶ ಎದುರಾಗಲಿದೆ. ಹಣಕಾಸು ವಿಚಾರದಲ್ಲಿ ನೀವಂದುಕೊಂಡಂತೆ ಏನೂ ಆಗುವುದಿಲ್ಲ. ಒಂದು ವೇಳೆ ಯಾರಾದರೂ ನಿಮಗೆ ಸಾಲ ನೀಡುವುದಾಗಿ ಮಾತು ಕೊಟ್ಟಿದ್ದಲ್ಲಿ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿಬಿಡುವ ಸಾಧ್ಯತೆ ಇದೆ. ಅಥವಾ ಅವರಿಗೇ ಹಣಕಾಸಿನ ಬಿಕ್ಕಟ್ಟು ಉಂಟಾಗಬಹುದು. ನಿಮ್ಮಲ್ಲಿ ಕೆಲವರು ಸಣ್ಣ- ಪುಟ್ಟದಾದರೂ ಗಾಯ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ.
ನಿಮ್ಮ ಸಾಮಾಜಿಕ ಸ್ಥಾನ- ಮಾನಗಳನ್ನು ಹೆಚ್ಚು ಮಾಡಿಕೊಳ್ಳುವ ಕಡೆಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಕಾರು ಖರೀದಿಸುವುದಕ್ಕೆ ನಿರ್ಧರಿಸುವ ಸಾಧ್ಯತೆಗಳಿವೆ ಅಥವಾ ಇದಕ್ಕಾಗಿ ಅಡ್ವಾನ್ಸ್ ಪಾವತಿಸುವುದಕ್ಕೂ ಅವಕಾಶಗಳಿವೆ. ಹಳೆಯ ಪ್ರೇಮ ಸಂಬಂಧಗಳು ಅಥವಾ ಮುರಿದು ಬಿದ್ದ ಪ್ರೀತಿ- ಪ್ರೇಮ ವಿಚಾರಗಳು ಮತ್ತೆ ಚಿಗುರೊಡೆಯುವ ಅವಕಾಶಗಳಿವೆ. ಈ ದಿನ ಯಾವುದೇ ಮುಖ್ಯ ಕಾಗದ ಪತ್ರಗಳಿಗೆ ಸಹಿ ಹಾಕುವ ಮುನ್ನ ಸರಿಯಾಗಿ ಓದಿಕೊಳ್ಳಿ. ಒಂದು ವೇಳೆ ಆತುರದಲ್ಲಿ ಇದ್ದೀರಿ ಎಂದಾದಲ್ಲಿ ಸ್ವಲ್ಪ ಸಮಯವನ್ನು ಕೇಳಿ, ಓದಿ ಆ ನಂತರವೇ ಸಹಿ ಮಾಡುವುದು ಉತ್ತಮ. ಇಲ್ಲದಿದ್ದಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ.
ಅನಿರೀಕ್ಷಿತವಾಗಿ ಹಣದ ಹರಿವು ಜಾಸ್ತಿ ಆಗುವ ಸಾಧ್ಯತೆ ಇದೆ. ಇರುವ ಕೆಲಸದಲ್ಲೇ ಹೊಸ ಜವಾಬ್ದಾರಿಗಳನ್ನು ನಿಮಗೆ ನೀಡಬಹುದು. ಅಥವಾ ಈಗಾಗಲೇ ಕೆಲಸದಿಂದ ತೆಗೆದ ಅಥವಾ ಬಿಟ್ಟಂಥ ವ್ಯಕ್ತಿಯ ಜವಾಬ್ದಾರಿಯೂ ನಿಮಗೆ ಬರಲಿದೆ. ಒಂದು ನೆನಪಿಟ್ಟುಕೊಳ್ಳಿ, ಮೇಲ್ನೋಟಕ್ಕೇ ಇದು ಒತ್ತಡ ಅನಿಸಬಹುದು. ಆದರೆ ಭವಿಷ್ಯದಲ್ಲಿ ಇದರಿಂದ ನಿಮಗೆ ಅನುಕೂಲ ಆಗಲಿದೆ. ಸ್ನೇಹಿತರು- ಸಹೋದ್ಯೋಗಿಗಳು ಹೇಳುವ ಎಲ್ಲ ಮಾತುಗಳಿಗೂ ಕಿವಿ ಕೊಡಬೇಕು ಎಂದೇನಿಲ್ಲ. ನಕಾರಾತ್ಮಕ ಅಭಿಪ್ರಾಯಗಳಿಗೂ ಮನ್ನಣೆ ಕೊಟ್ಟು, ಮನಸ್ಸು ಹಾಳು ಮಾಡಿಕೊಳ್ಳಬೇಡಿ. ಈ ದಿನ ಮನೆಯಿಂದ ಹೊರಗೆ ಹೊರಡುವ ಮೊದಲು ತಾಯಿ ಅಥವಾ ತಾಯಿ ಸಮಾನರಾದವರ ಆಶೀರ್ವಾದ ಪಡೆದುಕೊಳ್ಳಿ, ಕನಿಷ್ಠ ಮನಸ್ಸಿನಲ್ಲಾದರೂ ಸ್ಮರಿಸಿ.
ನಿಮಗೆ ಈಗಿರುವ ಸಾಲಗಳನ್ನು ತೀರಿಸಿಕೊಳ್ಳುವುದಕ್ಕೆ ತೀವ್ರವಾಗಿ ಪ್ರಯತ್ನಿಸಲಿದ್ದೀರಿ ಅಥವಾ ಆಲೋಚಿಸಲಿದ್ದೀರಿ. ಈಗ ಮಾಡುತ್ತಿರುವ ಕೆಲಸದ ಜತೆಗೆ ಬೇರೆ ವ್ಯವಹಾರವನ್ನು ಆರಂಭಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ. ಸ್ನೇಹಿತರು, ಸಂಬಂಧಿಕರು ಸಹ ನಿಮ್ಮ ಜತೆಗೆ ಸೇರಿಕೊಳ್ಳುವುದಾಗಿ ಕೇಳಿಕೊಳ್ಳಲಿದ್ದಾರೆ. ರಕ್ತದ ಸಮಸ್ಯೆ ಆಗಿ ಹುಣ್ಣು, ಕುರದಂಥದ್ದು ಆಗುವ ಸಾಧ್ಯತೆ ಇದೆ. ಆದ್ದರಿಂದ ಸಣ್ಣದಾಗಿ ಕಾಣಿಸಿಕೊಂಡರೂ ಕೂಡಲೇ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಿ. ಈಗಾಗಲೇ ಸಮಸ್ಯೆ ಇದೆ ಎಂದಾದಲ್ಲಿ, ಇನ್ನೂ ವೈದ್ಯರ ಬಳಿ ತೆರಳಿಲ್ಲ ಅಂತಾದರೆ ತಕ್ಷಣವೇ ಔಷಧೋಪಚಾರ ಮಾಡುವುದು ಕ್ಷೇಮ.
ನಿಮ್ಮದೇ ಹಣ ಕೈ ತಲುಪುವುದಕ್ಕೆ ಬಹಳ ಶ್ರಮ ಹಾಕಬೇಕಾಗುತ್ತದೆ. ಕೆಲಸಗಳು ಬರುತ್ತವೆ, ಆದರೆ ಅದು ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿಲ್ಲ ಎಂದು ಅನಿಸಿದಲ್ಲಿ ಈ ದಿನ ಲಕ್ಷ್ಮೀ ದೇವಿ ವಿಗ್ರಹ ಅಥವಾ ಫೋಟೋ ಮುಂದೆ ಹಾಲು- ಸಕ್ಕರೆ ಅಥವಾ ಬೆಲ್ಲವನ್ನು ಇಟ್ಟು, ನೈವೇದ್ಯವನ್ನು ಮಾಡಿ, ಆ ಪ್ರಸಾದವನ್ನು ತೆಗೆದುಕೊಳ್ಳಿ. ಇದರ ಜತೆಗೆ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿದಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವಂಥವರಿಗೆ ಹೊಸ ಪರಿಚಯದಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ನಿಮ್ಮ ಪ್ರಭಾ ವಲಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ.
ಪೊಲೀಸ್, ಕೋರ್ಟ್- ಕಚೇರಿ ವಿಚಾರಗಳಿಗೆ ಸ್ವಲ್ಪ ಒತ್ತಡದ ಸನ್ನಿವೇಶ ಇರುತ್ತದೆ. ಸ್ವಲ್ಪ ಮಟ್ಟಿಗೂ ಹಣ ಸಹ ಕೈ ಬಿಟ್ಟು ಹೋಗಬಹುದು. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಿ. ಇನ್ನು ತಲೆ ಕೂದಲು ಉದುರುವ ಸಮಸ್ಯೆ ಇದ್ದಲ್ಲಿ ಅದು ಮತ್ತೂ ಹೆಚ್ಚಾಗಬಹುದು. ಅದೇ ರೀತಿ ಕಾಲು ಅಥವಾ ಕೈ ಚರ್ಮದ ಬಣ್ಣ ಬದಲಾಗಬಹುದು ಅಥವಾ ಅಲರ್ಜಿ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ನಾನಾ ವಿಧದ ಸವಾಲಿನ ಸನ್ನಿವೇಶಗಳನ್ನು ಎದುರಿಸಲಿದ್ದೀರಿ. ನಿಮಗೆ ಕೆಲಸ ವಹಿಸಿದವರ ಧೋರಣೆಯಿಂದ ಮನಸ್ಸಿಗೆ ಬೇಸರವಾದರೂ ಗಡುವಿನೊಳಗೆ ಅದನ್ನು ಮುಗಿಸುವುದಕ್ಕೆ ಪ್ರಾಮುಖ್ಯ ನೀಡುವುದು ಉತ್ತಮ. ಏನೇನೋ ಕಾರಣ ನೀಡಿ, ಕೆಲಸಗಳನ್ನು ಮುಂದಕ್ಕೆ ಹಾಕಬೇಡಿ.