Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 9ರ ದಿನಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ  ಮಾರ್ಚ್ 9ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 9ರ ದಿನಭವಿಷ್ಯ  
ಸಂಖ್ಯಾಶಾಸ್ತ್ರ
Image Credit source: freepik
Edited By:

Updated on: Mar 09, 2024 | 1:01 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ  ಮಾರ್ಚ್ 9ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೆಸರು, ಜನಪ್ರಿಯತೆ ದೊರೆಯುವಂಥ ದಿನ ಇದಾಗಿರುತ್ತದೆ. ಇತರರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ ವಿಷಯಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುವುದಾಗಿ ಮಾತು ನೀಡಲಿದ್ದೀರಿ. ಇನ್ನು ಸ್ನೇಹಿತರು ಅಥವಾ ಜತೆಯಲ್ಲಿ ಕೆಲಸ ಮಾಡುವಂಥವರೊಂದಿಗೆ ರೆಸಾರ್ಟ್, ರೆಸ್ಟೋರೆಂಟ್ ಗಳಿಗೆ ತೆರಳಲಿದ್ದೀರಿ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಬೇಕಾದ ಮಾರ್ಗಗಳು ಗೋಚರ ಆಗಲಿವೆ. ಇನ್ನು ಈಗ ಮಾಡುತ್ತಿರುವ ವ್ಯವಹಾರ- ವ್ಯಾಪಾರದ ಜತೆಗೆ ಮತ್ತಷ್ಟು ವ್ಯವಹಾರಗಳನ್ನು ಶುರು ಮಾಡುವ ಆಲೋಚನೆಯನ್ನು ಮಾಡಲಿದ್ದೀರಿ. ನಿಮಗೆ ಇರುವಂಥ ಕಾಂಟ್ಯಾಕ್ಟ್ ಗಳನ್ನು ಬಳಸಿಕೊಂಡು, ಹಣಕಾಸಿನ ಅಗತ್ಯ ಇದ್ದಲ್ಲಿ ಅದನ್ನು ಹೊಂದಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಹೇಳಿದರೆ ಆ ಕೆಲಸ ಆಗಿಯೇ ಆಗುತ್ತದೆ ಎಂದು ಕೆಲವು ವ್ಯಕ್ತಿಗಳು ಶಿಫಾರಸಿಗಾಗಿ ಬೆನ್ನು ಬೀಳುವ ಸಾಧ್ಯತೆ ಇದೆ. ಒಂದೇ ವಿಚಾರಕ್ಕೆ ಅಥವಾ ಹಲವು ವಿಚಾರಕ್ಕೆ ತುಂಬ ಜನರಿಗೆ ಈ ದಿನ ನಿಮ್ಮ ಸಹಾಯದ ಅಗತ್ಯ ಬೀಳಬಹುದು. ನಿಮ್ಮ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದಂಥ ಮಟ್ಟಿಗೆ ಬೇರೆಯವರ ಬೇಕುಗಳನ್ನು ಪೂರೈಸುವುದಕ್ಕೆ ಸಮಯ ಮೀಸಲಿಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಕಟ್ಟಿರುವ ಮನೆಯನ್ನು ಖರೀದಿ ಮಾಡುವ ಸಲುವಾಗಿ ಹುಡುಕಾಡುತ್ತಿದ್ದಲ್ಲಿ ಮನಸ್ಸಿಗೆ ಒಪ್ಪುವಂಥ ಮನೆ ದೊರೆಯಲಿದೆ. ಒಂದು ವೇಳೆ ಈಗಾಗಲೇ ನೋಡಿಯಾಗಿದೆ, ಬೆಲೆಯ ವಿಚಾರದಲ್ಲಿ ಅಂತಿಮವಾದ ತೀರ್ಮಾನ ಮಾಡಬೇಕು ಎಂದಿದ್ದಲ್ಲಿ ಅದು ಈ ದಿನ ಒಂದು ಹಂತಕ್ಕೆ ಮುಗಿದು, ಮನಸ್ಸಿಗೆ ಸಮಾಧಾನ ದೊರೆಯಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹಳೇ ಸ್ಕೂಟರ್, ಲ್ಯಾಪ್ ಟಾಪ್, ಗ್ಯಾಜೆಟ್, ಮಂಚ, ಫ್ರಿಜ್ ಹೀಗೆ ವಸ್ತುಗಳನ್ನು ಮಾರಾಟ ಮಾಡಬೇಕು ಎಂದು ನೀವು ಪ್ರಯತ್ನಿಸುತ್ತಿದ್ದಲ್ಲಿ ಈ ದಿನ ನಿಮಗೆ ಉತ್ತಮವಾದ ಬೆಲೆ ದೊರೆಯುವಂಥ ಅವಕಾಶಗಳು ಹೆಚ್ಚಿವೆ. ಜತೆಗೆ ಖರೀದಿ ಮಾಡುವ ಸಂದರ್ಭದಲ್ಲಿ ಚೌಕಾಶಿ ಮಾಡುವುದಕ್ಕೆ ಮುಂದಾಗುವರಿಗಿಂತ ನಿಮ್ಮ ಕೈ ಮೇಲಾಗಲಿದೆ. ಸಂಪ್ ಸ್ವಚ್ಛ ಮಾಡಿಸುವುದು, ಮನೆಯಲ್ಲಿನ ದೂಳು ತೆಗೆಸಿ, ಶುದ್ಧಗೊಳಿಸಬೇಕು ಎಂದುಕೊಂಡಿರುವುದು ಇವೆಲ್ಲ ಮಾಡುವುದಕ್ಕೆ ಬಹಳ ಸೂಕ್ತವಾದ ವ್ಯಕ್ತಿಗಳು ಜತೆಯಾಗಲಿದ್ದಾರೆ. ಈ ಹಿಂದೆ ನಿಮ್ಮಿಂದ ಸಹಾಯ ಪಡೆದುಕೊಂಡವರು ಕೃತಜ್ಞತಾ ಭಾವದಿಂದ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಕೆಲಸಗಳು ಬಹಳ ಸಮಯದಿಂದ ಬಾಕಿ ಉಳಿದುಹೋಗಿದ್ದಲ್ಲಿ ಅವುಗಳನ್ನು ಈ ದಿನ ಮುಗಿಸುವುದಕ್ಕೆ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಪ್ರಯತ್ನಗಳ ಬಗ್ಗೆ ಇತರರು ಅನುಮಾನ ವ್ಯಕ್ತಪಡಿಸಲಿದ್ದಾರೆ. ಯಾವುದಾದರೂ ಕೆಲಸ ಮಾಡಿಕೊಡುವಂತೆ ನೀಡಿದ ಹಣವನ್ನು ವಾಪಸ್ ನೀಡುವಂತೆ ನಿಮಗೆ ದುಂಬಾಲು ಬೀಳುವ ಸಾಧ್ಯತೆ ಇದೆ. ನೀವು ಪ್ರತಿಷ್ಠೆಗೆ ಬಿದ್ದು ತೆಗೆದುಕೊಂಡ ವಸ್ತುಗಳೋ ಅಥವಾ ವಾಹನವೋ ಯಾಕಾದರೋ ಖರೀದಿಸಿದೆನೋ ಎಂದು ಚಿಂತೆಗೆ ಗುರಿ ಆಗುವಂತಾಗುತ್ತದೆ. ಸೈಟು ಅಥವಾ ಜಮೀನು ಈಗಾಗಲೇ ಖರೀದಿ ಮಾಡಿದ್ದಲ್ಲಿ ಅದರಲ್ಲಿ ಸಣ್ಣ- ಪುಟ್ಟ ವ್ಯಾಜ್ಯಗಳಾದರೂ ಎದ್ದು ನಿಲ್ಲಬಹುದು. ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿ. ಇಲ್ಲದಿದ್ದಲ್ಲಿ ಆ ಸ್ಥಳವೇ ನಿಮ್ಮ ಕೈ ತಪ್ಪಿಹೋಗುವ ತನಕ ಸನ್ನಿವೇಶ ಹೋಗಬಹುದು. ನಿಮಗೆ ಅಂಥ ಪರಿಸ್ಥಿತಿ ಎದುರಾದಲ್ಲಿ ವಕೀಲರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆಯಿರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವೇ ನಿಮ್ಮ ಮಾತಿನ ಮೂಲಕ ಸಮಸ್ಯೆಗಳನ್ನು ತಂದುಕೊಳ್ಳಲಿದ್ದೀರಿ. ಕೋಲು ಕೊಟ್ಟು ಹೊಡೆಸಿಕೊಂಡರು ಎಂಬ ಮಾತಿದೆಯಲ್ಲಾ, ಆ ರೀತಿಯಲ್ಲಿ ನಿಮಗೆ ಸಂಬಂಧಪಡದ ವಿಷಯದಲ್ಲಿ ಮೂಗು ತೂರಿಸಿ ಸಮಸ್ಯೆ ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಥವಾ ದೈನಂದಿನ ವ್ಯವಹಾರಗಳಲ್ಲಿ ಅಥವಾ ನೀವು ಕೆಲಸ ಮಾಡುವ ಸಂಸ್ಥೆಯಲ್ಲಿ ಹಣಕಾಸಿನ ವಿಚಾರ ನೋಡಿಕೊಳ್ಳುತ್ತಿದ್ದೀರಿ ಅಂಥವರ ಮೇಲೆ ಆಪಾದನೆಗಳು ಬರುವಂಥ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಪಾಲಿನ ಜವಾಬ್ದಾರಿಗಳು ಏನಿವೆ ಅವುಗಳನ್ನು ಬೇರೆಯವರಿಗೆ ವರ್ಗಾಯಿಸುವುದಕ್ಕೆ ಹೋಗಬೇಡಿ. ಹಾಗೆ ಮಾಡಿದಲ್ಲಿ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೀರಿ. ಈ ದಿನ ಮನೆಯಿಂದ ಹೊರಡುವ ಮೊದಲಿಗೆ ಶಿವನ ಚಿತ್ರಕ್ಕೆ ನಮಸ್ಕರಿಸಿ ಹೊರಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನೀವು ನಿರೀಕ್ಷೆ ಕೂಡ ಮಾಡದಿರದಂಥ ಆದಾಯ ಮೂಲಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಇನ್ನು ಈ ವ್ಯಕ್ತಿಯಿಂದ ಯಾವುದೇ ಕೆಲಸ ಆಗಲಿಕ್ಕಿಲ್ಲ ಎಂದುಕೊಂಡಿದ್ದು ಸಹ ನಿಮಗೆ ಅನುಕೂಲವಾಗಿ ಪೂರ್ಣಗೊಳ್ಳಲಿದೆ. ಮನೆ ಅಥವಾ ಸೈಟು ಮಾರಾಟಕ್ಕೆ ಇಟ್ಟಿದ್ದಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಬೆಲೆ ಕೇಳಿಕೊಂಡು ಜನರು ಬರಲಿದ್ದಾರೆ. ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದೇಶಗಳಿಂದ ವ್ಯಾಸಂಗ- ಉದ್ಯೋಗಕ್ಕಾಗಿ ಅಥವಾ ಇಂಟರ್ನ್ ಷಿಪ್ ಗಾಗಿ ಅವಕಾಶಗಳು ಹುಡುಕಿಕೊಂಡು ಬರಬಹುದು. ಪಿತ್ತಕ್ಕೆ ಕಾರಣ ಆಗುವಂಥ ಆಹಾರ ಪದಾರ್ಥಗಳಿಂದ ಈ ದಿನ ದೂರವಿದ್ದಲ್ಲಿ ಒಳ್ಳೆಯದು. ಯಾವುದಾದರೂ ಮುಖ್ಯವಾದ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುತ್ತಿದ್ದೀರಿ ಅಂತಾದಲ್ಲಿ ಬಿಳಿಯ ಬಟ್ಟೆಯೊಂದನ್ನು ನಿಮ್ಮ ಬಳಿ ಇಟ್ಟುಕೊಂಡಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಸೋದರ ಅಥವಾ ಸೋದರಿಯರ ಆರ್ಥಿಕ ಪರಿಸ್ಥಿತಿ ಹಾಗೂ ಸಂಸಾರದಲ್ಲಿನ ಕೆಲವು ಬೆಳವಣಿಗೆಗಳು ಆತಂಕಕ್ಕೆ ಕಾರಣ ಆಗಲಿವೆ. ಪಿತ್ರಾರ್ಜಿತ ಆಸ್ತಿ ವಿಚಾರಗಳು ಸದ್ಯಕ್ಕೆ ಚರ್ಚೆ ಮಾಡುವುದು ಬೇಡ ಎಂದುಕೊಂಡು ಇದ್ದದ್ದು ಆ ಬಗ್ಗೆ ತೀರ್ಮಾನವೊಂದನ್ನು ಮಾಡಲೇಬೇಕು ಎಂಬಂಥ ಸನ್ನಿವೇಶ ಸೃಷ್ಟಿ ಆಗಬಹುದು. ಈ ದಿನ ನಿಮಗೇನಾದರೂ ದಿಢೀರ್ ಪ್ರಯಾಣ ಮಾಡಲೇಬೇಕಾದ ಅನಿವಾರ್ಯ ಸ್ಥಿತಿ ಸೃಷ್ಟಿ ಆದಲ್ಲಿ ಪೂರ್ವ ಸಿದ್ಧತೆ ಹಾಗೂ ಸರಿಯಾದ ಯೋಜನೆ ಮಾಡದೆ ಹೊರಡಬೇಡಿ. ಏಕೆಂದರೆ ಒಂದೋ ನೀವು ಅರ್ಧ ದಾರಿಗೆ ವಾಪಸಾಗಬೇಕಾದ ಪರಿಸ್ಥಿತಿ ಎದುರಾಗಬಹುದು. ಅಥವಾ ನೀವು ಅಲ್ಲಿಗೆ ತೆರಳಿದ ಮೇಲೆ ಆ ವ್ಯಕ್ತಿ ಸಿಗದಿರಬಹುದು ಅಥವಾ ನೀವು ಏನೇ ಪ್ರಯತ್ನ ಪಟ್ಟರೂ ಆ ಕೆಲಸವನ್ನು ಪೂರ್ತಿ ಮಾಡಲಿಕ್ಕೆ ಆಗದಿರಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಬಹಳ ದೀರ್ಘವಾದ ಬಿಡುವು ತೆಗೆದುಕೊಂಡ ನಂತರ ಕೆಲಸದ ಹುಡುಕಾಟದಲ್ಲಿ ತೊಡಗಿಕೊಂಡವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಒಂದು ವೇಳೆ ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಅಂಥವರಿಗೂ ಕೆಲಸದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಯಾರು ಸ್ವಂತ ವ್ಯವಹಾರ ಅಥವಾ ವ್ಯಾಪಾರ- ಉದ್ಯಮಗಳನ್ನು ನಡೆಸುತ್ತಿದ್ದೀರಿ ಹಾಗೂ ತಕ್ಷಣಕ್ಕೆ ನಿಮಗೆ ವರ್ಕಿಂಗ್ ಕ್ಯಾಪಿಟಲ್ ಅಗತ್ಯವಿದೆ ಅಂಥವರು ಈ ದಿನ ಪ್ರಯತ್ನ ಪಟ್ಟಲ್ಲಿ ದೊರೆಯಲಿದೆ. ಯಾವ ಕೆಲಸ ಆಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಇದ್ದಿರಿ, ಅದರಲ್ಲೂ ಸರ್ಕಾರದ ಜತೆಗಿನ ಕೆಲಸಗಳು ಬಾಕಿ ಉಳಿದು, ನಿಮಗೆ ಉದ್ವಿಗ್ನತೆಯನ್ನು ತಂದಿತ್ತೋ ಅದು ಬಹಳ ಶೀಘ್ರದಲ್ಲಿ ಮುಗಿಯಲಿದೆ ಎಂಬ ಮಾಹಿತಿ ಸಿಕ್ಕು ಮನಸ್ಸಿಗೆ ಸಮಾಧಾನ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವಾಡಿದ ಮಾತು ಹಾಗೂ ಬಳಸುವ ಪದಗಳು ಯಾವ ಸನ್ನಿವೇಶಕ್ಕೆ ಎಂಥ ಅರ್ಥ ಕೊಡುತ್ತವೆ ಎಂಬ ಬಗ್ಗೆ ಸರಿಯಾದ ಆಲೋಚನೆಯನ್ನು ಮಾಡುವುದು ಈ ದಿನ ಬಹಳ ಮುಖ್ಯವಾಗುತ್ತದೆ. ಇನ್ನೇನು ಬರಬೇಕಾದ ಹಣ ಬಂದುಬಿಡುತ್ತದೆ, ಕೊಡುವವರಿಗೆ ಕೊಟ್ಟು ನೆಮ್ಮದಿಯಾಗಿ ಇದ್ದುಬಿಡಬಹುದು ಎಂದು ನೀವಂದುಕೊಂಡಿದ್ದಲ್ಲಿ ಬರಬೇಕಾದ ಹಣ ಬರುವುದು ತಡವಾಗುತ್ತದೆ, ಅದು ಯಾವಾಗ ಬರುತ್ತದೆ ಎಂದು ಸಹ ಸದ್ಯಕ್ಕೆ ಹೇಳುವುದು ಕಷ್ಟ ಎಂದು ಸಂಬಂಧಪಟ್ಟವರು ಹೇಳಿಬಿಡಬಹುದು. ಅಂದ ಹಾಗೆ ನಿಮ್ಮಲ್ಲಿ ಯಾರಾದರೂ ದೇವರಿಗೆ ಯಾವುದಾದರೂ ಹರಕೆ ಹೇಳಿಕೊಂಡು, ಅದು ಬಾಕಿ ಉಳಿದುಹೋಗಿದ್ದಲ್ಲಿ ಅದನ್ನು ಪೂರೈಸುವ ಕಡೆಗೆ ಲಕ್ಷ್ಯ ನೀಡಿ. ದೇವತಾ ವಿಚಾರಗಳಲ್ಲಿ ಉಳಿದುಹೋದ ಇಂಥ ಬಾಕಿ ನಿಮ್ಮಲ್ಲಿ ಆತಂಕವನ್ನು ಉಂಟುಮಾಡುತ್ತವೆ.

ಲೇಖನ- ಎನ್‌.ಕೆ.ಸ್ವಾತಿ