2025ರ ಮಾರ್ಚ್ 30ರ ಭಾನುವಾರದಂದು ಚಾಂದ್ರಮಾನ ಯುಗಾದಿ ಇದೆ. ಅಂದಿನಿಂದ ವಿಶ್ವಾವಸು ಸಂವತ್ಸರದ ಆರಂಭವಾಗುತ್ತದೆ. ಹೊಸ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದನ್ನು ಗ್ರಹಗಳ ಗೋಚಾರ ಫಲದ ಆಧಾರದಲ್ಲಿ ನೋಡಲಾಗುತ್ತದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನೆನಪಿರಲಿ, ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.
ಈ ವರ್ಷ ಗ್ರಹಸ್ಥಿತಿಗಳು ಹೀಗಿವೆ:
ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿ ಪ್ರವೇಶ ಮಾಡುತ್ತದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ಉದ್ಯೋಗ ಸ್ಥಳದಲ್ಲಿ ನಾನಾ ಕಿರಿಕಿರಿ ಇರುತ್ತದೆ. ನಿಮ್ಮಲ್ಲಿ ಕೆಲವರಿಗೆ ಅನಾರೋಗ್ಯ ಸಮಸ್ಯೆಯು ಒಂದು ಬಗೆಯಲ್ಲಿ ಜೀವ ಭಯವನ್ನು ಉಂಟು ಮಾಡುತ್ತದೆ. ಅದೇ ರೀತಿ ನಿಮ್ಮ ಬಂಧುಗಳು- ಆಪ್ತರ ಅನಾರೋಗ್ಯ ಸಮಸ್ಯೆ ಸಹ ಇದೇ ರೀತಿ ಭಯವನ್ನು ತರುತ್ತದೆ. ನಿಮ್ಮ ಮೇಲಧಿಕಾರಿಗಳು ಹೇಳುವಂಥ ಕೆಲಸವನ್ನು ಆಗಿಂದಾಗಲೇ ಮಾಡಿದಲ್ಲಿ ಕ್ಷೇಮ. ಉದ್ಯೋಗ ಬದಲಾವಣೆ ಮಾಡುವ ಉದ್ದೇಶ ಇರುವವರು ಒಂದಕ್ಕೆ ಸಾವಿರ ಬಾರಿ ಆಲೋಚಿಸುವುದು ಮುಖ್ಯ. ಒಂದು ವೇಳೆ ನಿರ್ಲಕ್ಷ್ಯ ಮಾಡಿದಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ಇರುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ಆಮೇಲೆ ಮಾಡಿದರಾಯಿತು ಎಂಬ ಧೋರಣೆ ಯಾವ ಕಾರಣಕ್ಕೂ ಬೇಡ. ಏಕೆಂದರೆ ಈ ಮನಸ್ಥಿತಿಯಿಂದಾಗಿ ನಿಮ್ಮ ನೆಮ್ಮದಿ ಸಂಪೂರ್ಣ ಹಾಳಾಗುತ್ತದೆ.
ಇದನ್ನೂ ಓದಿ: ವೃಷಭ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ದೇಹದ ತೂಕದ ಬಗ್ಗೆ ಗಮನವನ್ನು ನೀಡಿ. ಆಹಾರದಲ್ಲಿ ಮಿತಿ ಇರಲಿ. ವಿವಾಹಿತರು ಸಂಗಾತಿ ಜೊತೆಗೆ ಮಾತುಕತೆ ಆಡುವಾಗ ತಮಾಷೆಗೆಂದು ಹೇಳಿದ ವಿಚಾರವೇ ಗಂಭೀರ ಸ್ವರೂಪ ಪಡೆದುಕೊಂಡು, ವಿಪರೀತಕ್ಕೆ ಹೋಗಿಬಿಡುತ್ತದೆ. ಈಗಾಗಲೇ ಮಧುಮೇಹದ ಸಮಸ್ಯೆ ಇರುವವರು ಸರಿಯಾದ ಫಾಲೋ ಅಪ್ ಚೆಕ್ ಅಪ್ ಮಾಡಿಸಬೇಕು. ಇನ್ನೇನು ಶುಗರ್ ಬಾರ್ಡರ್ ನಲ್ಲಿದೆ ಎಂದು ತಿಳಿದುಬಂದಲ್ಲಿ ಕಡ್ಡಾಯವಾಗಿ ಪಥ್ಯವನ್ನು ಪಾಲಿಸಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಬೇಕಾಗುತ್ತದೆ. ಅಕ್ಟೋಬರ್-ಡಿಸೆಂಬರ್ ಮಧ್ಯೆ ವಿವಾಹ ವಯಸ್ಕರಿಗೆ ಮದುವೆ ನಿಶ್ಚಯ ಆಗುವ ಯೋಗವಿದೆ.
ನಾನು ಹೇಳಿದ್ದೇ ಆಗಬೇಕು ಎಂಬ ಹಠ ಬೇಡ. ತಂದೆಯೊಂದಿಗೆ ಅಭಿಪ್ರಾಯ ಭೇದ- ಮನಸ್ತಾಪಗಳು ಕಾಣಿಸಿಕೊಳ್ಳಬಹುದು. ಒಂದೇ ಕೆಲಸವನ್ನು ಮಾಡುವುದಕ್ಕೆ ಹತ್ತು ಹಲವು ಸಲ ಪ್ರಯತ್ನಿಸಬೇಕಾಗುತ್ತದೆ. ಜೂಜು- ಸಟ್ಟಾ ವ್ಯವಹಾರ ಇಂಥವುಗಳಿಂದ ದೂರವಿದ್ದರೆ ಒಳ್ಳೆಯದು. ಇನ್ನು ನಿಮ್ಮಲ್ಲಿ ಹಲವರಿಗೆ ತೀರ್ಥ ಕ್ಷೇತ್ರಗಳಿಗೆ ತೆರಳುವ ಯೋಗವಿದೆ. ನಿಮಗಿಂತ ವಯಸ್ಸಿನಲ್ಲಿ ಹಿರಿಯರಾದ ಅಣ್ಣ- ಅಕ್ಕನ ಜೊತೆಗೆ ಮನಸ್ತಾಪ, ಜಗಳ- ಕಲಹಗಳು ಆಗಬಹುದು.
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Sat, 29 March 25