Aries Ugadi Varsha Bhavishya: ಮೇಷ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
Aries Ugadi Horoscope 2025: ಮಾರ್ಚ್ 30ರಂದು ಚಾಂದ್ರಮಾನ ಯುಗಾದಿ. ವಿಶ್ವಾವಸು ಸಂವತ್ಸರದ ಆರಂಭ. ಶನಿ, ಗುರು, ರಾಹು-ಕೇತುಗಳ ಗೋಚಾರದ ಆಧಾರದ ಮೇಲೆ ರಾಶಿ ಫಲಗಳನ್ನು ತಿಳಿಸಲಾಗಿದೆ. ಮೇಷ ರಾಶಿಯವರಿಗೆ ಅತಿಯಾದ ಖರ್ಚು, ಶತ್ರುಗಳ ಕಿರಿಕಿರಿ, ಗುರು ಗ್ರಹದಿಂದ ಸೋದರ ಸೋದರಿಯರ ಜೊತೆ ಮನಸ್ತಾಪ, ರಾಹು-ಕೇತುಗಳಿಂದ ಭೂಮಿ ಖರೀದಿ ಅವಕಾಶ ಹಾಗೂ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆಗಳ ಸಾಧ್ಯತೆ ಇದೆ. ಶನಿ ಶಾಂತಿ ಮಾಡಿಸಿಕೊಳ್ಳುವುದು ಶುಭ.

2025ನೇ ಇಸವಿಯ ಮಾರ್ಚ್ 30ನೇ ತಾರೀಕಿನ ಭಾನುವಾರದಂದು ಚಾಂದ್ರಮಾನ ಯುಗಾದಿ ಇದೆ. ಅಂದ ಹಾಗೆ ಯುಗಾದಿಯಲ್ಲೂ ಚಾಂದ್ರಮಾನ ಹಾಗೂ ಸೌರಮಾನ ಹೀಗೆ ಎರಡು ಪದ್ಧತಿ ಇದೆ. ಆಯಾ ಆಚರಣೆಯ ಅನ್ವಯವಾಗಿ ಯುಗಾದಿಯಿಂದ ಹೊಸ ವರ್ಷದ ಆರಂಭವಾಗುತ್ತದೆ. ಈ ಬಾರಿ ಹೊಸ ವರ್ಷದಲ್ಲಿ ವಿಶ್ವಾವಸು ಸಂವತ್ಸರದ ಆರಂಭವಾಗುತ್ತದೆ. ಪ್ರತಿ ಹೊಸ ಸಂವತ್ಸರದಲ್ಲಿ ಯುಗಾದಿ ವರ್ಷ ಭವಿಷ್ಯವನ್ನು ನೋಡಲಾಗುತ್ತದೆ.
ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಹೊಸ ಸಂವತ್ಸರದಲ್ಲಿ ಶುಭಾಶುಭ ಫಲಗಳು ಏನಿವೆ ಎಂಬುದನ್ನು ಗ್ರಹಗಳ ಗೋಚಾರ ಫಲದ ಆಧಾರದಲ್ಲಿ ನೋಡಲಾಗುತ್ತದೆ. ಅದರಲ್ಲೂ ದೀರ್ಘ ಕಾಲದ ತನಕ ಒಂದೇ ರಾಶಿಯಲ್ಲಿ ಸಂಚರಿಸುವಂಥ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನೆನಪಿರಲಿ, ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಪರಾಂಬರಿಸಿ, ಭವಿಷ್ಯವನ್ನು ನುಡಿಯುವುದು ಸರಿಯಾದ ಕ್ರಮ. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.
ಮೊದಲಿಗೆ ಗ್ರಹಸ್ಥಿತಿಗಳನ್ನು ತಿಳಿದುಕೊಳ್ಳಿ. ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿ ಪ್ರವೇಶ ಮಾಡುತ್ತದೆ. ಮೇ 14ನೇ ತಾರೀಕು ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಇನ್ನು ಗುರು ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ಮೇಷ ರಾಶಿಯವರ ಯುಗಾದಿ ವರ್ಷ ಭವಿಷ್ಯ:
ಶನಿ (ಹನ್ನೆರಡನೇ ಮನೆ ಸಂಚಾರ):
ವಿಪರೀತ ಖರ್ಚುಗಳನ್ನು ಮಾಡುತ್ತೀರಿ. ನಿಮ್ಮ ಬಹುತೇಕ ಖರ್ಚುಗಳು ನೀವೇ ಮಾಡಿದಂಥ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಮಾಡಿದಂಥದ್ದಾಗಿರುತ್ತವೆ. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಮಾಡುವಂಥ ವ್ಯಾಪಾರ- ವ್ಯವಹಾರಗಳ ಬೆನ್ನು ಹತ್ತಬೇಡಿ. ಅದೇ ರೀತಿ ಈಗಾಗಲೇ ಒಂದು ಉದ್ಯೋಗದಲ್ಲಿದ್ದು, ಮತ್ತೊಂದು ಕಡೆಗೆ ನಿಯಮ ಬಾಹಿರವಾಗಿ ಕೆಲಸ ಮಾಡುವುದಕ್ಕೆ ಹೋಗಬೇಡಿ. ಶತ್ರುಗಳ ಕೈ ಮೇಲಾಗುತ್ತದೆ. ನಿಮ್ಮ ಸ್ನೇಹಿತರು- ಆಪ್ತರಿಂದ ದೂರವಾಗುವಂತಾಗುತ್ತದೆ. ಹೊಸದಾಗಿ ವ್ಯಾಪಾರ- ವ್ಯವಹಾರ ಶುರು ಮಾಡುತ್ತೇನೆ ಎಂದುಕೊಂಡು, ಇರುವ ಕೆಲಸವನ್ನು ಬಿಡುವ ನಿರ್ಧಾರ ಮಾಡಿದಿರೋ ಆ ನಂತರ ಪರಿತಪಿಸುವಂತಾಗುತ್ತದೆ. ಶಾರ್ಟ್ ಕಟ್ ನಲ್ಲಿ ಹಣ ಮಾಡುವ ಅವಕಾಶ ಸಿಕ್ಕಿತು ಅಂತೇನಾದರೂ ಆ ದಾರಿ ತುಳಿದರೆ ಪೊಲೀಸ್ ಸ್ಟೇಷನ್, ಕೋರ್ಟ್- ಕಚೇರಿ ಅಂತ ಅಲೆದಾಟ ಇರುತ್ತದೆ.
ಗುರು (ಮೂರು- ನಾಲ್ಕನೇ ಮನೆ):
ನಿಮ್ಮ ಪ್ರತಿಷ್ಠೆ, ಅಹಂಕಾರಗಳಿಂದಾಗಿ ಸೋದರ- ಸೋದರಿಯರ ಜೊತೆಗೆ ಮನಸ್ತಾಪ ಏರ್ಪಡಲಿದೆ. ಮುಖ್ಯವಾಗಿ ಇಷ್ಟು ದಿನ ನಿಮಗಿದ್ದ ವರ್ಚಸ್ಸು- ಹೆಸರು ಹಾಳಾಗುವ ಸಾಧ್ಯತೆಯಿದೆ. ಅಕ್ಟೋಬರ್ ನಿಂದ ಡಿಸೆಂಬರ್ ಮೊದಲ ವಾರದಲ್ಲಿ ಸ್ನೇಹಿತರ ಜತೆಗೆ ಮನಸ್ತಾಪ ಮತ್ತು ಭೂಮಿ, ಸೈಟು- ಮನೆ ಖರೀದಿ ಮೊದಲಾದ ಸಾಧ್ಯತೆಗಳಿವೆ. ಆಹಾರ ಪಥ್ಯವನ್ನು ಪಾಲಿಸಬೇಕಾದವರು ಕಡ್ಡಾಯವಾಗಿ ಆ ಕಡೆಗೆ ಗಮನವನ್ನು ನೀಡಿ.
ಇದನ್ನೂ ಓದಿ: ಮಾ. 30ರ ನಂತರ ಈ ರಾಶಿಯವರಿಗೆ ಪ್ರೇಮ ನಿವೇದನೆಗೆ ಶುಭ ಸಮಯ; ಕಂಕಣ ಭಾಗ್ಯ ಕೂಡಿಬರಲಿದೆ
ರಾಹು (ಹನ್ನೊಂದನೇ ಮನೆ), ಕೇತು (ಐದನೇ ಮನೆ):
ಭೂಮಿ-ಸೈಟು ಖರೀದಿ ಮಾಡುವಂಥ ಯೋಗ ಇದೆ. ಆದರೆ ಕಾನೂನು ದಾಖಲೆ- ಪತ್ರಗಳ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಷೇರುಪೇಟೆಯಲ್ಲಿ ಹೂಡಿಕೆ ಮಾಡಿರುವವರು ಅಥವಾ ಮಾಡುತ್ತಿರುವವರು ಲಾಭ ಬಂದಾಗ ವಿಪರೀತ ಆಸೆಗೆ ಬಿದ್ದು, ಹೆಚ್ಚು ಹಣ ಹಾಕುವುದಕ್ಕೆ ಹೋಗಬೇಡಿ. ಮಕ್ಕಳ ಆರೋಗ್ಯ, ಶಿಕ್ಷಣ ವಿಚಾರಗಳಲ್ಲಿ ಹಿನ್ನಡೆಯಿಂದ ದುಃಖವಾಗುತ್ತದೆ. ಮಾನಸಿಕ ಖಿನ್ನತೆ ಕಾಡುತ್ತದೆ. ವಿದ್ಯಾರ್ಥಿಗಳಿಗೆ ವಿಪರೀತ ಮರೆವು- ನಿರಾಸಕ್ತಿ ಕಾಡುತ್ತದೆ.
ಸಾಡೇಸಾತ್ ಶನಿ ಆರಂಭವಾಗುವುದರಿಂದ ಶನಿ ಶಾಂತಿ ಮಾಡಿಸಿಕೊಂಡರೆ ಕ್ಷೇಮ.
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Sat, 29 March 25