Horoscope Today June 23, 2024: ಭಾನುವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

2024 ಜೂನ್ 23 ದಿನ ಭವಿಷ್ಯ: ಭಾನುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today June 23, 2024: ಭಾನುವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ಭಾನುವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 22, 2024 | 9:07 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ (ಜೂನ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಬ್ರಹ್ಮ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಸಂಜೆ 05:26 ರಿಂದ 07:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:49 ರಿಂದ ಸಂಜೆ 05:26ರ ವರೆಗೆ.

ಮೇಷ ರಾಶಿ: ನಿಮ್ಮಲ್ಲಿರುವ ಆರೋಗ್ಯವೇ ನಿಮ್ಮ ದೊಡ್ಡ ಸಂಪತ್ತು. ಅದನ್ನು ಹಾಳು ಮಾಡಿಕೊಂಡು ಕಷ್ಟಪಡಬೇಡಿ. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ಇಂದು ನಿಮಗೆ ಹಣದ ಅಗತ್ಯತೆ ತುಂಬ ಇದ್ದು ಇದಕ್ಕೆ ತಾಯಿಯಿಂದ ಸಹಾಯ ಸಿಗಬಹುದು. ನೀವು ಆಯ್ಕೆ ಮಾಡಿಕೊಂಡ ವೃತ್ತಿಯ ಬಗ್ಗೆ ಸಂತೋಷವಿರುತ್ತದೆ. ವಾಹನ ಖರೀದಿಗೆ ನೀವು ಮನಸ್ಸು ಮಾಡುವಿರಿ. ನಿಮ್ಮ ಸ್ವಂತ ವಿವೇಚನೆಯಿಂದ ಕೆಲವೊಂದು ಕಲಹಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಸಂಗಾತಿಯು ನಿಮಗೆ ಅನುಕೂಲಳಾಗಿರುವಳು. ಎಂತಹ ಚತುರನೂ ಮುಗ್ಗರಿಸಿ ಬೀಳಬೇಕಾಗುವುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ತಂತ್ರಜ್ಞಾನವನ್ನು ನೀವು ಅತಿಯಾಗಿ ಬಳಸುವಿರಿ. ನಿಮ್ಮದಾದ ಕೆಲವು ಸಿದ್ಧಾಂತಗಳನ್ನು ನೀವು ಬಿಡಲಾರಿರಿ.

ವೃಷಭ ರಾಶಿ: ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ದೀರ್ಘಪ್ರಯಾಣವನ್ನು ಇಚ್ಛಿಸುವ ನೀವು ಆರೋಗ್ಯದ ಮೇಲೂ ಗಮನವಿರಿಕೊಳ್ಳಿ. ಎಂದಿಗಿಂತ ಇಂದು ವ್ಯಾಪಾರದಲ್ಲಿ ವೃದ್ಧಿ ಇರಲಿದೆ. ಉದ್ಯೋಗದ ಸ್ಥಾನದಲ್ಲಿ ಒತ್ತಡವು ಹೆಚ್ಚಾಗಲಿ. ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಬಹಳ ಒತ್ತಡದಲ್ಲಿ ಇರುವರು. ಎಲ್ಲದಕ್ಕೂ ಗ್ರಹ ಚಾರ ಎಂದು ಮೂದಲಿಸುವುದು ಬೇಡ. ನಿಮ್ಮ ಪ್ರಯತ್ನದಲ್ಲಿ ಲೋಪವು ಬಾರದಂತೆ ನಿರ್ವಹಿಸಿ. ಧಾವಂತದಲ್ಲಿ ಮೈ ಮರೆವು ಸಹಜ. ಎಚ್ಚರಿಕೆಯಲ್ಲಿ ನಿಮ್ಮ ನಡೆ ಇರಲಿ. ಸಣ್ಣ ವಿಚಾರಕ್ಕೆ ಪತ್ನಿಯ ಜೊತೆ ವಾಗ್ವಾದ ಬೇಡ. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.

ಮಿಥುನ ರಾಶಿ: ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಇಂದು ನೀವು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಬೇಡಿ. ಸುಮ್ಮನೇ ಕಾಲಹರಣ ಮಾಡುವ ಬದಲು ಉಪಯುಕ್ತ ಕೆಲಸವನ್ನು ಮಾಡಲು ಆಲೋಚಿಸಿ.‌ ಕರ್ತವ್ಯವವನ್ನು ಬಿಡದೇ ಮಾಡಿ. ಮಕ್ಕಳು ದುರಭ್ಯಾಸಗಳಿಗೆ ಬಲಿಯಾಗಬಹುದು. ನಿಮಗೆ ಬಂಧುಗಳಿಂದ‌ ಹೆಚ್ಚಿನ ಗೌರವ ದೊರೆಯುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳ ಸಹವಾಸ ಮಾಡುವಿರಿ. ಗಳಿಸುವುದನ್ನು ಪ್ರಾಮಾಣಿಕವಾಗಿ ಗಳಿಸಿ. ಆಹಾರದಿಂದ ಆರೋಗ್ಯವು ಕೆಡಲಿದೆ. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ಅಮೂಲ್ಯವಾದ ಉಡುಗೊರೆಯನ್ನು ಕೊಡುವಿರಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು.

ಕರ್ಕ ರಾಶಿ: ಇಂದು ಹೆಚ್ವಿನ ಸಮಯವನ್ನು ಆಟ, ಓಟಗಳಲ್ಲಿ ಕಳೆಯುವಿರಿ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಆತುರದ ನಿರ್ಧಾರಕ್ಕೆ ಹೋಗಬೇಡಿ. ಸಮಯಕ್ಕಾಗಿ ಕಾಯಿರಿ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಇಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ನೋವನ್ನು ಅನುಭವಿಸುವಿರಿ. ಕೃಷಿಕರು ಬೆಳೆಗಳಿಗೆ ಉತ್ತಮ ಬೆಲೆ ದೊರೆತ ಕಾರಣ ಸಂತೋಷಪಡಬಹುದು. ಇಂದು ನೆಮ್ಮದಿಯಿಂದ ಮನೆಯಲ್ಲಿಯೇ ಇದ್ದು ಕಾಲಕಳೆಯುವಿರಿ. ನಿರಂತರ ಸುತ್ತಾಟದಿಂದ ಬೇಸತ್ತ ನಿಮಗೆ ಇಂದು ಹಾಯೆನಿಸಬಹುದು. ನಿಮ್ಮವರ ಕಷ್ಟಗಳ ಮುಂದೆ ನಿಮ್ಮ ಕಷ್ಟ ಅಲದಪವೆನಿಸಬಹುದು. ನಿಮ್ಮ ಗುಪ್ತ ಆಲೋಚನೆಗಳು ಬಯಲಾಗಬಹುದು. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ತಾಯಿಯ ಮೇಲೆ ನಿಮ್ಮ ಕೋಪವನ್ನು ತೋರಿಸುವಿರಿ.

ಸಿಂಹ ರಾಶಿ: ನೀವು ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ಜಾಗರೂಕರಾಗಿ ಇರಿ. ಸಾಲವನ್ನು ಕೊಟ್ಟವರು ಇಂದು ಪೀಡಿಸಲಿದ್ದಾರೆ. ವ್ಯವಸ್ಥಾಪಕರಾಗಿದ್ದರೆ ನಿಮ್ಮ ಕೆಲಸವು ಮೇಲಧಿಕಾರಿಗಳಿಗೆ ಸಂತಸ ನೀಡುವುದು. ನಿಮ್ಮ ಮಕ್ಕಳಿಗೆ ಉಪದೇಶವನ್ನು ಮಾಡಲಿದ್ದೀರಿ. ಭವಿಷ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವಿರಿ. ಆಸ್ತಿಯನ್ನು ಮಾರುವ ಆಲೋಚನೆ ಬರಲಿದೆ. ಕುಟುಂಬದ ಮದುವೆಗೆ ಸಿದ್ಧತೆಗಳನ್ನು ಪ್ರಾರಂಭಿಸುವಿರಿ. ನಿಮ್ಮ ಜೀವನಸಂಗಾತಿಗಾಗಿ ನೀವು ಸೌಮ್ಯಸ್ವಭಾವದವರು ಆಗಬೇಕಾಗಿಬರಬಹುದು. ಗೆಳೆಯರಿಗೆ ಅನೇಕ ದಿನಗಳ ಅನಂತರ ಸಮಯವನ್ನು ಕೊಡುವಿರಿ. ಸುಳ್ಳು ಅತಿಯಾಗಬಹುದು. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ನಿಮ್ಮ ಸುರಕ್ಷಿತ ತಾಣವನ್ನು ನೀವೇ ಆರಿಸಿಕೊಳ್ಳಿ. ಸಾಲದ ಕಾರಣಕ್ಕೆ ತಲೆ ಮರೆಸಿಕೊಳ್ಳಬಹುದು.

ಕನ್ಯಾ ರಾಶಿ: ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಕಲಹವನ್ನು ಮಾಡಿಕೊಳ್ಳಲಿದ್ದೀರಿ. ಚೆನ್ನಾಗಿ ಮಾತನಾಡುತ್ತೇನೆಂದು ಏನನ್ನಾದರೂ ಹೇಳಿ ಬೇರೆಯವರಿಗೆ ನೋವನ್ನು ಕೊಡಬೇಡಿ. ಉದ್ಯೋಗವು ಸಾಕೆನಸುವಷ್ಟು ಕಳೆಗುಂದಿದೆ. ಒಂದೇ ರೀತಿಯ ಕೆಲಸಕ್ಕೆ ತನಗೆ ಇಷ್ಟವಾದುದಲ್ಲ ಎಂದು ಅನ್ನಿಸಬಹುದು. ಕಛೇರಿಯಲ್ಲಿ ನಿಮ್ಮ ನಾಯಕನ ಜೊತೆಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಮಹಿಳಾ ಸ್ನೇಹಿತರು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ಅಂದುಕೊಂಡ ಮಾತ್ರಕ್ಕೆ ಎಲ್ಲ ಕಾರ್ಯವೂ ಆಗದು. ನಿಮ್ಮ ಆದಾಯವನ್ನು ಹೇಳಿಕೊಳ್ಳಲು ಹೋಗಬೇಡಿ. ನಿಮಗೇ ತೊಂದರೆಯಾದೀತು. ಹೊಸ ವ್ಯವಹಾರವನ್ನು ಪ್ರಾರಂಭಿಸಿವರು ಉತ್ಸಾಹದ ಕಾರಣ ಉತ್ತಮ ಲಾಭವನ್ನು ಪಡೆಯಬಹುದು. ವಕೀಲವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿತಿರುವಿರಿ.

ತುಲಾ ರಾಶಿ: ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ಕಛೇರಿಯ ಕಾರ್ಯಕ್ಕೆಂದು ದೂರದ ಊರಿಗೆ ಹೋಗುವವರಿದ್ದೀರಿ‌. ವಾಹನದಿಂದ ತೊಂದರೆ ಇರಲಿದೆ. ಸ್ನೇಹಿತರು ಮಾಡಿದ ಕೆಟ್ಟ ಕೆಲಸದಿಂದ ನಿಮಗೆ ಕಂಟಕವು ಬರಬಹುದು. ಸಂಪತ್ತನ್ನು ಇಂದು ಕಳೆದುಕೊಳ್ಳುವಿರಿ. ಇಷ್ಟು ದಿನ‌ ಆಗಮನ ಮಾತ್ರ ಆಗಿತ್ತು.‌ ಇನ್ನು ಧನಗಮನವೇ ಹೆಚ್ಚಾಗುವುದು. ನಿಮ್ಮ ಆಲೋಚನೆಗಳಿಗೆ ಚೌಕಟ್ಟಿರಲಿ. ವ್ಯಾಪಾರಸ್ಥರಾಗಿದ್ದರೆ ಇಂದು ಕಲಹವೂ ಆಗಬಹುದು. ನಿಮ್ಮ ದುಃಖವು ಅಲ್ಪ ಸಮಯದಲ್ಲಿ ದೂರವಾಗಲಿದೆ. ಏನಾಗುತ್ತಿದೆ ಎಂಬ ಯಾವ ಸೂಚನೆಯೂ ನಿಮಗೆ ಸಿಗದಾಗುವುದು. ವ್ಯಾಪಾರವನ್ನು ಮುಚ್ಚಬೇಕು ಎನ್ನುವ ಸ್ಥಿತಿಯವರೆಗೆ ಹೋಗಬಹುದು. ಆಪ್ತರಾದ ಮಾತ್ರಕ್ಕೆ ಎಲ್ಲವನ್ನೂ ಸರಿಯಾಗಿ ಹೇಳುತ್ತಾರೆ ಎಂದಿಲ್ಲ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ.

ವೃಶ್ಚಿಕ ರಾಶಿ: ಇಂದು ನಿಮ್ಮ ಜೊತೆಗಾರರ ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಕಾರಣಾಂತರಗಳಿಂದ ಖರ್ಚು ಹೆಚ್ಚಾಗಬಹುದು. ಹಿತಶತ್ರುಗಳು ಕತ್ತಿಯನ್ನು ಮಸೆಯುತ್ತಲೇ ಇದ್ದಾರು. ನಿಮ್ಮವರ ಬಗ್ಗೆ ನೀವೆಲ್ಲೇ ಇದ್ದರೂ ಸಂತೋಷದ ಸುದ್ದಿಯು ಬರಲಿದೆ. ಯಾರ ಬಗ್ಗೆಯೂ ಅಸೂಯೆಪಡಬೇಕಾದ ಅವಶ್ಯಕತೆ ಇಲ್ಲ. ಮಕ್ಕಳ ಯಶಸ್ಸಿನಿಂದ ನೀವು ನಿಮ್ಮಲ್ಲಿ ಉತ್ಸಾಹವು ಅಧಿಕವಾಗುವುದು. ಹೊಸ ಯೋಜನೆಗಳು ನಿಮ್ಮನರಿಸಿ ಬರಲಿವೆ. ದಾಂಪತ್ಯದಲ್ಲಿ ಕಿರಿಕಿರಿಯ ಅನುಭವವಾದರೆ ತಟಸ್ಥರಾಗಿ. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ. ಪೂರ್ವಾಪರ ಯೋಚನೆ ಇಲ್ಲದೇ ಮಾತನಾಡಿ ಸಂಬಂಧವನ್ನು ಹಾಳುಮಾಡಿಕೊಳ್ಳಬೇಡಿ. ಸಂಶೋಧನೆಯ ವಿದ್ಯಾರ್ಥಿಗಳಿಗೆ ಹೊಸ ದಿಕ್ಕು ಸಿಗಲಿದೆ.

ಧನು ರಾಶಿ: ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ಭೂಮಿಯ ಕ್ರಯ ಮತ್ತು ವಿಕ್ರಯಗಳ ವಿಷಯದಲ್ಲಿ ಲಾಭವನ್ನು ಕಾಣಬಹುದಾಗಿದೆ. ಸಹೋದರರ ನಡುವೆ ಭಿನ್ನಾಭಿಪ್ರಾಯಗಳು ನಡೆಯಬಹುದು. ನಿವೃತ್ತಿಯ ಜೀವನ ಬೇಸರ ತರಿಸುವುದು.‌ ಕುಳಿತಲ್ಲೇ ಕುಳಿತಿರುವ ನಿಮಗೆ ಕೆಲಸವನ್ನು ಮಾಡುವ ಅಪೇಕ್ಷೆ ಉಂಟಾಗುವುದು. ಕೆಲಸದಲ್ಲಿ ನೀವು ಕಡಿಮೆ ಪ್ರಯತ್ನದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದಾಗಿದೆ. ಆದರೆ ನಿಮ್ಮ ಬುದ್ಧಿಯನ್ನು ಬಳಸಿಕೊಳ್ಳಬೇಕಿದೆ. ವೈವಾಹಿಕ ಜೀವನವು ತುಂಬಾ ಸರಸಮಯವಾಗಿರುವಿದು. ಕಾರ್ಯ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದುವಿರಿ. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ನಿಮ್ಮ ಜವಾಬ್ದಾರಿ ಹೆಚ್ಚಾಗುವುದು.

ಮಕರ ರಾಶಿ: ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ದೇಶಗಳಿಗೆ ವಸ್ತುಗಳನ್ನು ಕಳುಹಿಸುವ ಉದ್ಯೋಗವನ್ನು ಮಾಡುತ್ತಿದ್ದರೆ ಅವರಿಗೆ ಲಾಭವಿದೆ. ಕಾರ್ಯದ ನಿಮಿತ್ತ ಅನ್ಯಸ್ಥಳಕ್ಕೆ ಹೋಗಬೇಕಾಗಿ ಬರಬಹುದು. ಹೊಸ ಆದಾಯ ಮೂಲವನ್ನು ಸೃಷ್ಟಿಮಾಡಿಕೊಳ್ಳುವಿರಿ. ನಿಮ್ಮ ಸೌಮ್ಯ ಸ್ವಭಾವ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯಕ್ಕಾಗಿ ನೀಮ್ಮನ್ನು ಪ್ರಶಂಸೆ ಸಿಗಬಹುದು. ಸಾಲಗಾರರಿಂದ ನೀವು ಬಾಕಿ ಹಣವನ್ನು ಮರಳಿ ಬರಲಿದೆ. ನಿಮ್ಮದಲ್ಲದ ವಿಚಾರಕ್ಕೆ ನೀವು ಮೂಗು ತೂರಿಸಬೇಡಿ. ಪ್ರೇಮದ ವಿಚಾರದಲ್ಲಿ ಅನುಮಾನ ಬರಬಹುದು.‌ ಆಡಿದ ಮಾತಿನ ತಪ್ಪಿಗೆ ಕ್ಷಮೆ ಕೇಳುವರು. ಜಾಣ್ಮೆಯಿಂದ ಮಾಡಿದ ವ್ಯವಹಾರಕ್ಕೆ ಪ್ರಶಂಸೆ ಸಿಗಲಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು.

ಕುಂಭ ರಾಶಿ: ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಕೃಷಿಯನ್ನು ಅವಲಂಬಿಸಿ ಬದುಕುವವರಿಗೆ ಅಲ್ಪ ಲಾಭವೂ ಸಿಗಲಿದೆ‌. ವಿದ್ಯಾರ್ಥಿಗಳು ಹತ್ತಾರು ಗೊಂದಲಗಳನ್ನು ಇಟ್ಟುಕೊಳ್ಳಲಿದ್ದಾರೆ. ನೀವು ವಿವಾಹ ಸಮಾರಂಭದಲ್ಲಿ ಭಾಗವಹಿಸುವಿರಿ. ನಿಮ್ಮ ಮಕ್ಕಳ ವೃತ್ತಿಜೀವನದ ಬಗ್ಗೆ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ವೈಯಕ್ತಿಕ ಸಂಬಂಧದಲ್ಲಿ ಅನ್ನೋನ್ಯತೆ ಹೆಚ್ಚಾಗುವ ಸಾಧ್ಯತೆ ಇದೆ‌. ಅಲ್ಪಾವಧಿಯ ವೃತ್ತಿಗೆ ಸೇರಿಕೊಳ್ಳುವುದು ಉತ್ತಮ. ಯಾರ ಮೇಲೋ ಸಿಟ್ಟುಗೊಂಡು ಇನ್ಯಾರಮೇಲೋ ತೀರಿಸಿಕೊಳ್ಳುವುದು ಬೇಡ. ದೂರದ ಊರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ. ಶಿಕ್ಷಕರು ಆದಷ್ಟು ಜಾಗರೂಕರಗಿ ವರ್ತಿಸಿ. ನಿಮ್ಮನ್ನು ಮಕ್ಕಳು ನೋಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು.

ಮೀನ ರಾಶಿ: ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಹಲವು ದಿನಗಳಿಂದ ಅನಾರೋಗ್ಯದ ಕಾರಣ ಕಿರಿಕಿರಿಯನ್ನು ಅನುಭವಿಸುತ್ತಿರುವ ನೀವು ಇಂದು ಆರೋಗ್ಯದತ್ತ ಮುಖಮಾಡುವಿರಿ. ಉದ್ಯೋಗದ ನಿಮಿತ್ತ ಪ್ರಯಾಣವು ಅವಶ್ಯಕವಾದರೆ ಮಾತ್ರ ಮಾಡಿ.‌ ಇಲ್ಲವಾದರೆ ಬೇಡ. ನೀವು ಅಪರೂಪಕ್ಕೆ ಸಿಕ್ಕ ಸದನೇಹಿತನ ಜೊತೆ ಸಮಯವನ್ನು ಕಳೆಯುವಿರಿ. ವೃತ್ತಿಜೀವನದಲ್ಲಿ ಒಳ್ಳೆಯ ಹಂತವನ್ನು ತಲುಪಲು ಇಂದಿನಿಂದ‌ ಶ್ರಮವಹಿಸುವುದು ಅಗತ್ಯ. ಮಂಡಿನೋವಿನಿಂದ ಇಂದು ಕಷ್ಟಪಡುವಿರಿ. ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಂದು ನೀವಿರುವುದಿಲ್ಲ. ಅದಷ್ಟು ಕಡಿಮೆ ಮಾತನಾಡಿ. ಅವರ ಆರೋಗ್ಯವೂ ಚೇತರಿಕೆ ಕಾಣುವುದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸವನ್ನು ಕೊಡಲು ಸಾಲ ಮಾಡಬೇಕಾದೀತು.

ಲೋಹಿತ ಹೆಬ್ಬಾರ್ – 8762924271 (what’s app only)

ತಾಜಾ ಸುದ್ದಿ